'ಮಾ' ಚುನಾವಣೆ: ಮೆಗಾಸ್ಟಾರ್ ಚಿರಂಜೀವಿ ಕುಟುಂಬ vs ಅದರ್ಸ್!
ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (ಮಾ) ಚುನಾವಣೆ ಅಕ್ಟೋಬರ್ 10ನೇ ತಾರೀಕು ಭಾನುವಾರ ನಡೆಯಲಿದೆ. ಪ್ರಕಾಶ್ ರಾಜ್ ಮತ್ತು ಮಂಚು ವಿಷ್ಣು ಬಣಗಳ ಮಧ್ಯೆ ತೀವ್ರ ಹಣಾಹಣಿಯನ್ನು ನಿರೀಕ್ಷಿಸಲಾಗುತ್ತಿರುವ ಈ ಚುನಾವಣೆಯಲ್ಲಿ ಸುಮಾರು 900 ಕಲಾವಿದರು ಮತದಾನದ ಹಕ್ಕನ್ನು ಹೊಂದಿದ್ದಾರೆ.ಬೆಳಗ್ಗೆ 8 ಗಂಟೆಯಿಂದ 2 ಗಂಟೆವರೆಗೂ ಮತದಾನ ನಡೆಯಲಿದ್ದು, ಆನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಸಂಜೆ ಹೊತ್ತಿಗೆ ಫಲಿತಾಂಶ ಘೋಷಣೆಯಾಗಲಿದೆ.
ಈಗಾಗಲೇ ಎರಡು ಬಣಗಳ ನಡುವೆ ತೀವ್ರವಾದ ಮಾತಿನ ಯುದ್ಧ, ಜೊತೆಗೆ ಸದಸ್ಯರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಎರಡು ಬಣಗಳ ವರ್ತನೆ ಇಡೀ ತೆಲುಗು ಚಿತ್ರೋದ್ಯಮವನ್ನು ಎರಡು ಹೋಳು ಮಾಡಿದೆ.
ಮೇಲ್ನೋಟಕ್ಕೆ ಇದು ಪ್ರಕಾಶ ರಾಜ್ ವರ್ಸಸ್ ಮಂಚು ವಿಷ್ಣು ಬಣಗಳ ನಡುವಿನ ಹೋರಾಟವಾಗಿ ಕಂಡುಬಂದರೂ ತೆಲುಗು ಸಿನಿಮಾ ಒಳರಾಜಕೀಯ ಇದನ್ನು ಬೇರೆಯದೇ ದೃಷ್ಟಿಕೋನದಿಂದ ಅರ್ಥೈಸುತ್ತಿದೆ. ಹೌದು, ಇದು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ವರ್ಸಸ್ ಅದರ್ಸ್ ಆಗಿ ಪರಿವರ್ತನೆಗೊಂಡಿದೆ. ಪ್ರಕಾಶ್ ರಾಜ್ ಬಣ ಸಂಪೂರ್ಣವಾಗಿ ಚಿರಂಜೀವಿ ಕುಟುಂಬದ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದೆ. ಇದಕ್ಕೆ ಪ್ರತಿಯಾಗಿ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ಮಂಚು ವಿಷ್ಣು ಅವರ ನೇತೃತ್ವದ ಬಣ ಮೆಗಾ ಫ್ಯಾಮಿಲಿ ಹೊರತಾದ ಇತರ ಸೂಪರ್ಸ್ಟಾರ್ಗಳ ಬೆಂಬಲವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆರಂಭದಲ್ಲಿ ಕಂಡುಬಂದ ಚಿತ್ರಣ ಈಗ ಪೂರ್ತಿಯಾಗಿ ಬದಲಾಗಿದೆ. ಮುಂದೆ ಓದಿ...

ಎರಡು ಬಣಗಳ ಮಧ್ಯೆ ತೀವ್ರ ಪೈಪೋಟಿ
ಚುನಾವಣೆ ಘೋಷಣೆಗೆ ಮೊದಲೇ ಕಳೆದ ಎರಡು ತಿಂಗಳಿಂದ ಪ್ರಕಾಶ್ ರಾಜ್, ಮಂಚು ವಿಷ್ಣುವರ್ಧನ್ ಬಾಬು 'ಮಾ' ಚುನಾವಣೆಗೆ ತೀವ್ರ ತಯಾರಿಯನ್ನು ಆರಂಭಿಸಿದ್ದರು. ಆರಂಭದ ಹಂತದಲ್ಲಿ ಚಿರಂಜೀವಿ ಕುಟುಂಬದ ಬೆಂಬಲ ಪಡೆದಿದ್ದ ಪ್ರಕಾಶ್ ರಾಜ್ಗೆ ಗೆಲುವು ಸುಲಭದ ತುತ್ತು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಕಳೆದ ಒಂದು ವಾರದಲ್ಲಿ ಚುನಾವಣಾ ಕಣ ಪೂರ್ತಿಯಾಗಿ ಬದಲಾಗಿದೆ. ನಿರೀಕ್ಷೆಗೂ ಮೀರಿ ಮಂಚು ಬಣ ತೀವ್ರ ಪೈಪೋಟಿ ಒಡ್ಡುವ ಸ್ಥಿತಿಗೆ ಬಂದು ತಲುಪಿದೆ. ಇದಕ್ಕೆ ಮುಖ್ಯ ಕಾರಣ ಚಿರಂಜೀವಿ ಕುಟುಂಬದ ವಿರುದ್ಧ ಪರೋಕ್ಷವಾಗಿ ಎಲ್ಲಾ ಸೂಪರ್ ಸ್ಟಾರ್ಗಳ ಕುಟುಂಬಗಳು ಒಂದಾಗಿ ಮಂಚು ಬಣಕ್ಕೆ ಬೆಂಬಲ ಘೋಷಿಸಿರುವುದು.

ಮಂಚು ಬಣಕ್ಕೆ ಸೂಪರ್ ಸ್ಟಾರ್ ಕುಟುಂಬಗಳ ಬೆಂಬಲ
ಯಾವುದೇ ಸೂಪರ್ ಸ್ಟಾರ್ಗಳ ಕುಟುಂಬಗಳು ಮತ್ತು ಅವರ ಬೆಂಬಲಿಗ ಸದಸ್ಯರು ನೇರವಾಗಿ ಯಾವುದೇ ಒಂದು ಬಣದ ಪರವಾಗಿಲ್ಲ. ಆದರೆ ಪರೋಕ್ಷ ಬೆಂಬಲ ಮಾತ್ರ ಅವರುಗಳ ಕಡೆಯಿಂದ ಮಂಚು ವಿಷ್ಣುವರ್ಧನ್ ಬಣಕ್ಕೆ ಬೆಂಬಲ ಸಿಗುತ್ತಿದೆ ಅಂತ ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಸಂಗತಿ. ಮಂಚು ವಿಷ್ಣುವರ್ಧನ್ ಅವರು ನಂದಮೂರಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕಳೆದ ವಾರ ಕೋರಿಕೊಂಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಾಲಕೃಷ್ಣ ಮಂಚು ಬಣಕ್ಕೆ ಪರೋಕ್ಷ ಸಮ್ಮತಿಯನ್ನು ಸೂಚಿಸಿದ್ದಾರೆ. ಇನ್ನು ಮತ್ತೊಬ್ಬ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಮಂಚು ಬಣಕ್ಕೆ ಬೆಂಬಲಿಸಿದ್ದು, ಅವರ ಕುಟುಂಬಕ್ಕೆ ಸೇರಿದ ನಟ ನರೇಶ್ ಮಂಚು ಬಣಕ್ಕೆ ಬೇಕಾದ ಮತಗಳ ಕ್ರೋಡೀಕರಣವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂ ರಾಜು, ಬೆಂಬಲವನ್ನೂ ಸಹ ಪಡೆಯಲು ಇವರು ಪರೋಕ್ಷವಾಗಿ ಯಶಸ್ವಿಯಾಗಿದ್ದಾರೆ ಅಂತ ಹೇಳಲಾಗುತ್ತಿದೆ.

ಲೋಕಲ್ V/s ನಾನ್ ಲೋಕಲ್
ಇದರ ನಡುವೆ ಹಿರಿಯ ಕಲಾವಿದರಾದ ಕೋಟ ಶ್ರೀನಿವಾಸ ರಾವ್, ನಿರ್ದೇಶಕ ರವಿಬಾಬು ಸೇರಿದಂತೆ ಅನೇಕರು ಪ್ರಕಾಶ್ ರಾಜ್ ಅವರ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. 'ಮೂಲತಃ ಪ್ರಕಾಶ್ ರಾಜ್ ಹೊರಗಿನಿಂದ ಬಂದ ಕಲಾವಿದ, ತೆಲುಗು ಕಲಾವಿದರ ಸಂಘಕ್ಕೆ ತೆಲುಗಿನವರು ಅಧ್ಯಕ್ಷರಾಗಬೇಕು. ಲೋಕಲ್ ಆದ ಮಂಚುಗೆ ಬೆಂಬಲ ನೀಡಿ ನಾನ್ ಲೋಕಲ್ ಪ್ರಕಾಶ್ ರಾಜ್ ಅವರಿಗೆ ಅಲ್ಲ' ಅಂತ ಪ್ರಚಾರ ಕೂಡ ಸೋಷಿಯಲ್ ಮೀಡಿಯಾಗಳ ಮೂಲಕ ಮಾಡುತ್ತಿದ್ದಾರೆ. ತೆಲಂಗಾಣ ವಾದಿ, ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ಹಿರಿಯ ನಟ CVL ನರಸಿಂಹರಾವ್ ಕೊನೆ ಕ್ಷಣಗಳಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ತಮ್ಮ ಬೆಂಬಲ ಎರಡು ಬಣಗಳಿಗೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಮಂಚು ಜಗನ್ ಮೋಹನ್ ರೆಡ್ಡಿ ಕುಟುಂಬದ ಅಳಿಯ
ಮಂಚು ಪರವಾಗಿರುವ ಮತ್ತೊಂದು ಗಮನಾರ್ಹವಾದ ಅಂಶವೆಂದರೆ ಮಂಚು ವಿಷ್ಣುವರ್ಧನ್ ಅವರ ಪತ್ನಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪನ ಮಗಳಾಗಿದ್ದು ವರಸೆಯಲ್ಲಿ ಜಗನ್ ಮೋಹನ್ ರೆಡ್ಡಿಗೆ ತಂಗಿ ಆಗುತ್ತಾಳೆ. ಇತ್ತೀಚೆಗೆ ಪವನ್ ವರ್ಸಸ್ ಜಗನ್ ನಡುವಿನ ರಾಜಕೀಯ ಕಾಳಗ ಕೂಡ ಈ ಚುನಾವಣೆ ಮೇಲೆ ಪ್ರಭಾವ ಬಿದ್ದರೆ ಮಂಚು ಬಣಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಭಾನುವಾರ ಸಂಜೆ ಫಲಿತಾಂಶ
ಒಟ್ಟಿನಲ್ಲಿ ಎರಡು ಬಣಗಳ ನಡುವೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿ ನಡೆಯುತ್ತಿರುವ 'ಮಾ' ಚುನಾವಣೆಯಲ್ಲಿ ತೀವ್ರ ಹಣಾಹಣಿ ಮಾತ್ರ ಖಂಡಿತವಾಗಿಯೂ ನಿರೀಕ್ಷಿಸಲಾಗುತ್ತಿದೆ. ಭಾನುವಾರದ ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಣೆಗಳುವುದರೊಂದಿಗೆ ಎಲ್ಲದಕ್ಕೂ ಅಂತಿಮ ತೆರೆ ಬೀಳಲಿದೆ. ಒಟ್ಟು 18 ಸ್ಥಾನಗಳಿಗಾಗಿ 39 ಅಭ್ಯರ್ಥಿಗಳು ಕಣದಲ್ಲಿದ್ದು ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಚುನಾವಣೆ 2 ಗಂಟೆಯವರೆಗೂ ನಡೆಯಲಿದ್ದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.


Click it and Unblock the Notifications











