"ಬಾಹುಬಲಿ', 'RRR' ಗೆದ್ದಿದ್ಹೇಗೆ?.. 'ಶಾಕುಂತಲಂ' ಸೋತಿದ್ದೇಕೆ? ಅನ್ನೋದು ಅರ್ಥವಾಗ್ತಿಲ್ಲ": ಮಧುಬಾಲ
ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿದೆ. ಗುಣಶೇಖರ್ ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗಪ್ಪಳಿಸಿತ್ತು. ಕಾಳಿದಾಸ ಬರೆದ ನಾಟಕವನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಸಿನಿಮಾ ಪ್ರಚಾರ ಮಾಡಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.
'ಶಾಕುಂತಲಂ' ಸಿನಿಮಾ ಸೋಲಿಗೆ ಕಾರಣ ಏನು ಅನ್ನುವುದು ಅರ್ಥವಾಗುತ್ತಿಲ್ಲ ಎಂದು ನಟಿ ಮಧುಬಾಲ ಹೇಳಿದ್ದಾರೆ. ಇಷ್ಟು ಒಳ್ಳೆಯ ಸಿನಿಮಾವನ್ನಿ ಪ್ರೇಕ್ಷಕರು ಯಾಕೆ ಆಧರಿಸಲಿಲ್ಲ ಅನ್ನೋದು ಗೊತ್ತಾಗ್ತಿಲ್ಲ ಎಂದಿದ್ದಾರೆ. ಚಿತ್ರದಲ್ಲಿ ಶಾಕುಂತಲ ತಾಯಿ ಮೇನಕಾ ಪಾತ್ರದಲ್ಲಿ ಆಕೆ ನಟಿಸಿದ್ದಾರೆ. ಏಪ್ರಿಲ್ 14ರಂದು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬಂದಿತ್ತು. ಅಂದಾಜು 65 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 6 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿತ್ತು.

ನಿರೂಪಣೆ ಬಹಳ ನಿಧಾನಗತಿಯಲ್ಲಿದೆ. ಗ್ರಾಫಿಕ್ಸ್ ಕೆಟ್ಟದಾಗಿದೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಗುಣಶೇಖರ್ ಇಂತಹ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸೋದು ಉತ್ತಮ ಎಂದಿದ್ದರು. ಸಿನಿಮಾ ಸೋಲಿನ ಬಗ್ಗೆ ನಟಿ ಮಧುಬಾಲ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆಕೆಯ ಹೇಳಿಕೆ ಸದ್ಯ ಸಖತ್ ಸದ್ದು ಮಾಡ್ತಿದೆ. ಸಿನಿಮಾ ಯಾಕೆ ಚೆನ್ನಾಗಿ ಓಡಲಿಲ್ಲ ಅನ್ನುವುದೇ ಅರ್ಥವಾಗ್ತಿಲ್ಲ. ಇಂತಹ ಸಿನಿಮಾ ಸೋತಿದ್ದು ನೋವು ತಂದಿದೆ ಎಂದಿದ್ದಾರೆ.
"ಶಾಕುಂತಲಂ' ಚಿತ್ರಕ್ಕಾಗಿ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಎಲ್ಲರೂ ಕಷ್ಟಪಟ್ಟಿದ್ದಾರೆ. ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಪ್ರೀ ಪ್ರೊಡಕ್ಷನ್ನಿಂದ ಸಿನಿಮಾ ರಿಲೀಸ್ ಆಗುವ ತನಕ ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನು ಚಿತ್ರಕ್ಕಾಗಿ ಮಾಡಿದ್ದಾರೆ. ಚಿತ್ರಕ್ಕಾಗಿ ತಮ್ಮ ಬೆಸ್ಟ್ ನೀಡಿದ್ದಾರೆ. ಸಿನಿಮಾ ಸಿಜಿಗಾಗಿ 6 ತಿಂಗಳ ಕಾಲ ಕಷ್ಟಪಟ್ಟಿದ್ದಾರೆ. ಯಾವುದನ್ನು ಕೂಡ ಬೇಕಾಬಿಟ್ಟಿ ಮಾಡಲಿಲ್ಲ"
"ಯಾರು ಕೂಡ ಚಿತ್ರಕ್ಕಾಗಿ ಒತ್ತಡದಿಂದ ಕೆಲಸ ಮಾಡಲಿಲ್ಲ. ಬಹಳ ಸ್ವತಂತ್ರವಾಗಿ ಬಹಳ ಚೆನ್ನಾಗಿ ಕೆಲಸ ಮಾಡಿದರು. ಆದರೂ ಕೂಡ ಸಿನಿಮಾ ಬಾಕ್ಸಾಫೀಸ್ನಲ್ಲಿ ಯಾಕೆ ಗೆಲ್ಲಲಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಬಾಹುಬಲಿ, 'RRR' ರೀತಿಯ ಚಿತ್ರಗಳಿಗೆ ಪ್ರೇಕ್ಷಕರಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾಗಳು ಅಷ್ಟರಮಟ್ಟಿಗೆ ಹೇಗೆ ಹಿಟ್ ಆಯಿತು ಅನ್ನೋದು ಗೊತ್ತಾಗುತ್ತಿಲ್ಲ. ಅದೇ ಸಮಯದಲ್ಲಿ ಶಾಕುಂತಲಂ ಸೋಲಿಗೆ ಕಾರಣ ಏನು ಎನ್ನುವುದು ಅರ್ಥವಾಗುತ್ತಿಲ್ಲ. ನಿಜಕ್ಕೂ ಸಿನಿಮಾ ಸಕ್ಸಸ್ಗೆ ಕಾರಣ ಏನು ಅನ್ನುವುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ" ಎಂದು ಮಧುಬಾಲ ಹೇಳಿದ್ದಾರೆ.

'RRR', 'ಬಾಹುಬಲಿ' ಮಾದರಿಯಲ್ಲೇ 'ಶಾಕುಂತಲಂ' ಚಿತ್ರದಲ್ಲೂ ಸೌತ್ ಫ್ಲೇವರ್ ಇದೆ. ಸಾಲದ್ದಕ್ಕೆ ಇದು ಪುರಾಣದ ಕಥೆ. ಆದರೂ ಈ ಸಿನಿಮಾ ಯಾಕೆ ವರ್ಕೌಟ್ ಆಗಲಿಲ್ಲ. ಈ ಲಾಜಿಕ್ ಏನೋ ನಿಜಕ್ಕೂ ಅರ್ಥವಾಗುತ್ತಿಲ್ಲ ಎಂದು ಬಹುಭಾಷಾ ನಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮದುವೆ ನಂತರ ಮಧು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಆದರೆ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಮಧು ಕನ್ನಡ ಸಿನಿಮಾಗಳಲ್ಲೂ ನಟಿಸಿ ಮೋಡಿ ಮಾಡಿದ್ದಾರೆ. 'ಅಣ್ಣಯ್ಯ' ಚಿತ್ರದಲ್ಲಿ ರವಿಚಂದ್ರನ್ ಜೋಡಿಯಾಗಿ ಚಂದನವನಕ್ಕೆ ಬಂದ ಈ ಚೆಲುವೆ ಮುಂದೆ 'ರನ್ನ', 'ನಾನು ಮತ್ತು ವರಲಕ್ಷ್ಮಿ', 'ಸೀತಾರಾಮ ಕಲ್ಯಾಣ', 'ಪ್ರೀಮಿಯರ್ ಪದ್ಮಿನಿ', 'ರೇಮೋ' ಸಿನಿಮಾಗಳಲ್ಲಿ ನಟಿಸಿದ್ದರು. 'ರನ್ನ' ಚಿತ್ರದಲ್ಲಿ ಸುದೀಪ್ ಸೋದರತ್ತೆ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇನ್ನು 'ಶಾಕುಂತಲಂ' ಮಧು ಜೊತೆಗೆ ಮೋಹನ್ ಬಾಬು, ಕಬೀರ್ ಬೇಡಿ, ಅನನ್ಯಾ ನಗಲ್ಲಾ, ದೇವ್ ಮೋಹನ್, ಅದಿತಿ ಬಾಲನ್ ಸೇರಿದಂತೆ ಹಲವು ನಟಿಸಿದ್ದರು.


Click it and Unblock the Notifications











