SSMB29: ಮಹೇಶ್ ಬಾಬು ಚಿತ್ರಕ್ಕೆ ಟೆಕ್ನಿಕಲ್ ಟೀಂ ಫೈನಲ್; ಭಾರೀ ಬದಲಾವಣೆ ಮಾಡಿದ ಮೌಳಿ
ಟಾಲಿವುಡ್ನಲ್ಲಿ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಬಗ್ಗೆ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ತಮ್ಮ ತಂಡದಲ್ಲಿ ಭಾರೀ ಬದಲಾವಣೆ ಮಾಡಿರುವುದಾಗಿ ಹೇಳಲಾಗ್ತಿದೆ.
ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳನ್ನು ಮೌಳಿ ಕಟ್ಟಿಕೊಡುತ್ತಾ ಬರ್ತಿದ್ದಾರೆ. ಬಾಹುಬಲಿ ಸರಣಿ ಬಳಿಕ ಜಕ್ಕಣ್ಣ ಸಿನಿಮಾ ಮಾಡುವ ರೇಂಜ್ ದೊಡ್ಡದಾಗಿದೆ. ನೂರಾರು ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ಈಗ ಸಿದ್ಧರಿದ್ದಾರೆ. ತಮಗೆ ಬೇಕಾದ ಕಲಾವಿದರು, ತಂತ್ರಜ್ಞರನ್ನು ಜಕ್ಕಣ್ಣ ಆಯ್ಕೆ ಮಾಡಿಕೊಳ್ಳಬಲ್ಲರು.

ರಾಜಮೌಳಿ ಸಿನಿಮಾಗಳಲ್ಲಿ ಕುಟುಂಬ ಸದಸ್ಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್(ಕಥೆಗಾರ) ಪತ್ನಿ ರಮಾ(ಕಾಸ್ಟ್ಯೂಮ್ ಡಿಸೈನರ್), ಪುತ್ರ ಕಾರ್ತಿಕೇಯ(ಲೈನ್ ಪ್ರೊಡ್ಯೂಸರ್), ಸೋದರ ಸಂಬಂಧಿಗಳಾದ ಕೀರವಾಣಿ(ಸಂಗೀತ ನಿರ್ದೇಶಕ), ಅವರ ಪತ್ನಿ ಶ್ರೀವಲ್ಲಿ ಹೀಗೆ ಹಲವರು ತಂಡವಾಗಿ ಕೆಲಸ ಮಾಡುತ್ತಾರೆ. ಜೊತೆಗೆ ಖ್ಯಾತ ತಂತ್ರಜ್ಞರು ಮೌಳಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
SSMB29 ಟೆಂಟಿಟಿವ್ ಟೈಟಲ್ನಲ್ಲಿ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಕಾರಣ ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಇನ್ನು ಈಗಾಗಲೇ ಚಿತ್ರದ ಕಥೆ ಸಿದ್ಧವಾಗಿದೆ. ಇಂಡೋನೇಷ್ಯಾ ನಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಏಪ್ರಿಲ್ 9ರಂದು ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎನ್ನಲಾಗ್ತಿದೆ. ಇನ್ನು ಅದಕ್ಕೂ ಮುನ್ನ ವರ್ಕ್ಶಾಪ್ ನಡೆಸುವ ಆಲೋಚನೆಯಲ್ಲಿದ್ದಾರೆ ರಾಜಮೌಳಿ.
ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕಾಗಿ ಜಕ್ಕಣ್ಣ ತಮ್ಮ ಟೆಕ್ನಿಕಲ್ ಟೀಮ್ನಲ್ಲಿ ಮುಖ್ಯವಾದ ಬದಲಾವಣೆ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಂಗೀತ ನಿರ್ದೇಶಕರಾಗಿ ಎಂ. ಎಂ ಕೀರವಾಣಿ ಹೊರತುಪಡಿಸಿ ಛಾಯಾಗ್ರಾಹಕ, ಸಂಕಲಕನಕಾರ ಎಲ್ಲರನ್ನು ಬದಲಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.

'RRR' ಚಿತ್ರಕ್ಕಾಗಿ ಕೆಲಸ ಮಾಡಿದ ಹಲವರನ್ನು ಕೈಬಿಟ್ಟು ಹೊಸ ತಂಡವನ್ನು ರಾಜಮೌಳಿ ಕಟ್ಟುತ್ತಿದ್ದಾರೆ ಎಂದು ವರದಿಯಾಗಿದೆ. ಛಾಯಾಗ್ರಾಹಕರಾಗಿ ಪಿ.ಎಸ್ ವಿನೋದ್ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಸಂಕಲನಕಾರನಾಗಿ ತಮ್ಮಿರಾಜು, ಪ್ರೊಡಕ್ಷನ್ ಡಿಸೈನರ್ ಆಗಿ ಮೋಹನನಾಥ್ ಬಿಂಗಿನಿ, ಕಮಲ್ ಕಣ್ಣನ್ ತಂಡಕ್ಕೆ ವಿಎಫ್ಎಕ್ಸ್ ಜವಾಬ್ದಾರಿ ವಹಿಸಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ. ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವುದರಿಂದ ಆ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವ ತಂತ್ರಜ್ಞರಿಗೆ ರಾಜಮೌಳಿ ಜವಾಬ್ದಾರಿಯನ್ನು ವಹಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಹಾಲಿವುಡ್ ಸಂಗೀತ ನಿರ್ದೇಶಕ SSMB29 ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎನ್ನುವ ವದಂತಿ ಹರಡಿತ್ತು. ಆದರೆ 'RRR' ಚಿತ್ರದ 'ನಾಟು ನಾಟು' ಗೀತೆಗೆ ಕೀರವಾಣಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಹಾಗಾಗಿ ಹಾಲಿವುಡ್ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದೇ ಕಾರಣಕ್ಕೆ ಇದೊಂದು ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮೌಳಿ ಸಿದ್ಧರಿಲ್ಲ. ಅಲ್ಲದೇ ಜಕ್ಕಣ್ಣ ನಿರ್ದೇಶನದ ಎಲ್ಲಾ ಚಿತ್ರಗಳಿಗೂ ಕೀರವಾಣಿಯೇ ಟ್ಯೂನ್ ಹಾಕಿದ್ದಾರೆ. ಈ ಚಿತ್ರಕ್ಕೂ ಅವರು ಮುಂದುವರೆಯಲಿದ್ದಾರೆ.
ಮೌಳಿ ನಿರ್ದೇಶನದ ಚಿತ್ರಗಳಿಗೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡುತ್ತಾ ಬಂದಿದ್ದರು. ಆದರೆ ಸೆಂಥಿಲ್ ತಮಿಳಿನಲ್ಲಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ತಾವಾಗಿಯೇ SSMB29 ಚಿತ್ರದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎನ್ನುವ ವಾದವೂ ಇದೆ. ಒಟ್ನಲ್ಲಿ ಈ ಬಗ್ಗೆ ರಾಜಮೌಳಿ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಅಲ್ಲಿಯವರೆಗೂ ಇಂತಹ ಅಂತೆಕಂತೆ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ.


Click it and Unblock the Notifications










