ಮಹೇಶ್ ಬಾಬು- ತ್ರಿವಿಕ್ರಮ್ ಶ್ರೀನಿವಾಸ್ ಮಧ್ಯೆ ಕಿರಿಕ್ ? ನಿರ್ಮಾಪಕ ಕೆಂಡಾಮಂಡಲ
ಟಾಲಿವುಡ್ ನಟ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ 3ನೇ ಬಾರಿ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗುತ್ತಿದೆ. ಇದೀಗ ಮಹೇಶ್- ತ್ರಿವಿಕ್ರಮ್ ನಡುವೆ ಮುಸುಕಿನ ಗುದ್ದಾಟ ನಡೀತಿದೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.
'ಅತಡು', 'ಖಲೇಜಾ' ಸಿನಿಮಾಗಳಲ್ಲಿ ಇವರಿಬ್ಬರು ಕೆಲಸ ಮಾಡಿದ್ದರು. 'ಅರವಿಂದ ಸಮೇತಾ', 'ಅಲಾ ವೈಕುಂಠಪುರಂಲೋ' ಸಕ್ಸಸ್ ನಂತರ ತ್ರಿವಿಕ್ರಮ್ ಈ ಸಿನಿಮಾ ಕೈಗೆತ್ತಿಕೊಂಡಿದ್ದು ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವಾರ ಸಿನಿಮಾ ತೆರೆಗೆ ಬರಬೇಕಿತ್ತು. ರಿಲೀಸ್ ಡೇಟ್ ಕೂಡ ಅಫೀಷಿಯಲ್ ಆಗಿ ಅನೌನ್ಸ್ ಆಗಿತ್ತು. ಆದರೆ ಶೂಟಿಂಗ್ ತಡವಾಗಿ ಮುಂದಿನ ಸಂಕ್ರಾಂತಿಗೆ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಯಿತು. ಚಿತ್ರದಲ್ಲಿ ಪೂಜಾ ಹೆಗ್ಡೆ ಹಾಗೂ ಶ್ರೀಲೀಲಾ ನಾಯಕಿಯರಾಗಿ ನಟಿಸ್ತಿದ್ಧಾರೆ.

ತ್ರಿವಿಕ್ರಮ್ ಕೆಲಸದ ಬಗ್ಗೆ ಮಹೇಶ್ ಬಾಬು ಅತೃಪ್ತರಾಗಿದ್ದಾರೆ. ಸಂಗೀತ ನಿರ್ದೇಶಕ ಎಸ್. ತಮನ್ ಹಾಗೂ ನಾಯಕಿಯಾಗಿ ಪೂಜಾ ಹೆಗ್ಡೆ ಬೇಡ ಎಂದು ಮಹೇಶ್ ಹೇಳಿದರೂ ತ್ರಿವಿಕ್ರಮ್ ಕನ್ಸಿನ್ಸ್ ಮಾಡಿದ್ದರಂತ. ಸ್ಕ್ರಿಪ್ಟ್ ಕೂಡ ಬದಲಿಸಲು ಹೇಳಿದರು. ಅಷ್ಟೇ ಅಲ್ಲ, ಫಸ್ಟ್ ಶೆಡ್ಯೂಲ್ನಲ್ಲಿ ಶೂಟ್ ಮಾಡಿದ ಫೈಟ್ ಬೇಡ ಎಂದು ಮಹೇಶ್ ಬಾಬು ಹೇಳಿದ್ರೆ, ಅದನ್ನು ತೆಗೆದು ಫೈಟ್ ಮಾಸ್ಟರ್ ಬದಲಿಸಿದರು, ಮಹೇಶ್- ಶ್ರೀಲೀಲಾ ಜೊತೆಗಿನ ಸನ್ನಿವೇಶಗಳು ಸರಿಯಾಗಿ ಬಂದಿಲ್ಲ, ಅದನ್ನು ಹೊಸದಾಗಿ ಮಾಡೋಣ ಎಂದಿದ್ದಕ್ಕೆ ಮಹೇಶ್ ಒಪ್ಪಲಿಲ್ಲ, ಹೀಗೆ ಸಾಕಷ್ಟು ವದಂತಿಗಳು ಹರಿದಾಡ್ತಿದೆ.
ಸದ್ಯ ಮಹೇಶ್- ತ್ರಿವಿಕ್ರಮ್ ಕುರಿತು ಹರಿದಾಡುತ್ತಿರುವ ಗಾಳಿಸುದ್ದಿ ಬಗ್ಗೆ ಸಿತಾರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯ ಮುಖ್ಯಸ್ಥ ನಾಗವಂಶಿ ಖಂಡಿಸಿದ್ದಾರೆ. ಟ್ವೀಟ್ ಮಾಡಿ ವದಂತಿ ಹಬ್ಬಿಸಿದವರಿಗೆ ಕ್ಲಾಸ್ ತಗೊಂಡಿದ್ದಾರೆ. ಸದ್ಯ ನಾಗ್ವಂಶಿ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. SSMB28 ಸಿನಿಮಾ ನಿರ್ಮಾಪಕರಾದ ಎಸ್. ರಾಧಾಕೃಷ್ಣಗೆ ನಾಗ್ವಂಶಿ ಸಂಬಂಧಿಕರು. ನಾಗ್ವಂಶಿ ಕೂಡ SSMB28 ಸಿನಿಮಾ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಮ್ಮ ಸಿನಿಮಾ ಸೆಟ್ನಲ್ಲಿ ಏನೇನೋ ನಡೀತಿದೆ ಅಂತ ವದಂತಿಗಳು ಹರಿದಾಡುತ್ತಿರುವುದು ನಾಗವಂಶಿಗೆ ಬೇಸರ ತಂದಿದೆ. ಅದೇ ಕಾರಣಕ್ಕೆ ಸರಣಿ ಟ್ವೀಟ್ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪಕ್ಷಿಗಳು ಆಹಾರ ಹುಡುಕುತ್ತಿರುವಾಗ ಜೋರಾಗಿ ಶಬ್ದ ಮಾಡುತ್ತವೆ. ಯಾರಾದರೂ ಗಮನ ಸೆಳೆಯಲು ಪ್ರಯತ್ನಿಸುವಾದ ಈ ರೀತಿ ವದಂತಿ ಹಬ್ಬಿಸುತ್ತಾರೆ. ಅದನ್ನೆಲ್ಲಾ ನೋಡಿ ನಗುವುದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಸುಲಭ. ನಮ್ಮ ಕೆಲಸ ನಾವು ಮಾಡಿಕೊಂಡು ಮುಂದೆ ಹೋಗಬೇಕು. SSMB 28 ಸಿನಿಮಾ ಸದಾ ನೆನೆಪಿನಲ್ಲಿ ಉಳಿಯುತ್ತದೆ. ನೀವು ಕೇಳಲು ಬಯಸುವದನ್ನು ಕೇಳಿ. ಆದರೆ ಮಾತು ನೆನಪಿರಲಿ" ಎಂದು ಬರೆದುಕೊಂಡಿದ್ದಾರೆ.

ಸದ್ಯ ನಿರ್ಮಾಪಕ ನಾಗ್ವಂಶಿ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಕೂಡ ಅವರ ಬೆಂಬಲಕ್ಕೆ ನಿಂತಿದ್ದಾರೆ. SSMB 28 ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ತೆರೆಗೆ ತರಲಾಗುತ್ತಿದೆ. ಸ್ಟೈಲಿಶ್ ಲುಕ್ನಲ್ಲಿ ಮಹೇಶ್ ಬಾಬು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶೀಘ್ರದಲ್ಲೆ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.
ಮಹೇಶ್ ಬಾಬು- ತ್ರಿವಿಕ್ರಮ್ ಜೋಡಿಯ 'ಅತಡು' ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. 'ಖಲೇಜಾ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡದಿದ್ದರೂ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತ್ತು. ಇದೀಗ SSMB28 ಸಿನಿಮಾ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. 'ಸರ್ಕಾರುವಾರಿ ಪಾಟ' ರಿಲೀಸ್ ಆಗಿ ವರ್ಷ ಕಳೆದರೂ ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ಬರಲಿಲ್ಲ. ಈ ಸಿನಿಮಾ ಕೂಡ ಬಹಳ ತಡವಾಗುತ್ತಿದೆ. ಆದರೂ ಕೂಡ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ಧಾರೆ.


Click it and Unblock the Notifications











