ದತ್ತು ಪಡೆದ ಊರಿನ ಗ್ರಾಮಸ್ಥರಿಗೆ ವ್ಯಾಕ್ಸಿನ್ ಕೊಡಿಸಿದ ಮಹೇಶ್ ಬಾಬು
ನಟ ಮಹೇಶ್ ಬಾಬು ಕೇವಲ ಸಿನಿಮಾಗಳಲ್ಲಿ ಮಾತ್ರವೇ ನಾಯಕನಲ್ಲ, ನಿಜ ಜೀವನದಲ್ಲಿಯೂ ಅವರು ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಗುಣವಂತ ಎನಿಸಿಕೊಂಡಿದ್ದಾರೆ.
ಮಹೇಶ್ ಬಾಬು ನಟಿಸಿದ್ದ 'ಶ್ರೀಮಂತುಡು' ಸಿನಿಮಾದಲ್ಲಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಕತೆಯನ್ನು ಹೇಳಲಾಗಿತ್ತು. ಆ ಸಿನಿಮಾದಿಂದ ಪ್ರೇರೇಪಿತರಾಗಿ ಸ್ವತಃ ಮಹೇಶ್ ಬಾಬು ಬುರಿಪಾಲೆಂ ಮತ್ತು ಸಿದ್ದಾಪುರಂ ಹೆಸರಿನ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದರು.
ಆ ಹಳ್ಳಿಗಳಿಗೆ ಸಾಕಷ್ಟು ಸಹಾಯ ಮಾಡಿರುವ, ಮೂಲಸೌಕರ್ಯಗಳನ್ನು ದೊರಕಿಸಿಕೊಟ್ಟಿರುವ ಮಹೇಶ್ ಬಾಬು, ಇದೀಗ ಆ ಎರಡೂ ಗ್ರಾಮಗಳ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಡಿಸಿದ್ದಾರೆ. ಸರ್ಕಾರದ ಅಧಿಕಾರಿಗಳೊಟ್ಟಿಗೆ ಮಾತನಾಡಿ ಎರಡೂ ಗ್ರಾಮದ ಜನರಿಗೆ ಏಕಕಾಲದಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಿದ್ದಾರೆ ಮಹೇಶ್ ಬಾಬು.

ಮಹೇಶ್ ಬಾಬು ಅವರು ಈ ಎರಡು ಹಳ್ಳಿಗಳನ್ನು 2015 ರಲ್ಲಿ ದತ್ತು ತೆಗೆದುಕೊಂಡರು. ಮಹೇಶ್ ಬಾಬು ಅವರ ನಂತರ ಪ್ರಕಾಶ್ ರೈ ಸೇರಿದಂತೆ ಇನ್ನೂ ಕೆಲವು ನಟರು ಹಳ್ಳಿಗಳನ್ನು ದತ್ತು ಪಡೆದು ಹಳ್ಳಿ ಜನರಿಗೆ ಸವಲತ್ತುಗಳನ್ನು ನೀಡುವ ಕಾರ್ಯ ಮಾಡಿದ್ದರು.
ಹಳ್ಳಿ ದತ್ತು ತೆಗೆದುಕೊಳ್ಳುವುದು ಮಾತ್ರವೇ ಅಲ್ಲದೆ ಮಹೇಶ್ ಬಾಬು ಅವರು ಬಡ ಕುಟುಂಬದ ಅನಾರೋಗ್ಯ ಪೀಡಿತ ಮಕ್ಕಳಿಗೆ ಆಪರೇಷನ್ ಸಹ ಮಾಡಿಸುತ್ತಾರೆ. ತಾವೇ ಹಣ ತೆತ್ತು ಹಲವಾರು ಮಕ್ಕಳ ಜೀವ ಉಳಿಸಿದ್ದಾರೆ ಮಹೇಶ್ ಬಾಬು.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಮಹೇಶ್ ಬಾಬು ಪ್ರಸ್ತುತ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ನಾಯಕಿಯಾಗಿರುವ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣವು ಕೊರೊನಾ ಕಾರಣಕ್ಕೆ ಪ್ರಸ್ತುತ ಸ್ಥಗಿತಗೊಂಡಿದೆ.
Recommended Video
'ಸರ್ಕಾರು ವಾರಿ ಪಾಟ' ಸಿನಿಮಾದ ನಂತರ ರಾಜಮೌಳಿ ಜೊತೆಗೆ ಒಂದು ಹಾಗೂ ತ್ರಿವಿಕ್ರಮ್ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಮಹೇಶ್ ಬಾಬು.


Click it and Unblock the Notifications











