ದಟ್ಟ ಅರಣ್ಯಕ್ಕೆ ನುಗ್ಗಲಿದ್ದಾರೆ ರಾಜಮೌಳಿ-ಮಹೇಶ್ ಬಾಬು
ಖ್ಯಾತ ನಿರ್ದೇಶಕ ರಾಜಮೌಳಿ ಪ್ರಸ್ತುತ ಆರ್ಆರ್ಆರ್ ಸಿನಿಮಾದ ಪೋಸ್ಟ್ ಪ್ರೋಡಕ್ಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಬಹುಬೇಗ ಮುಗಿಸಿದ ರಾಜಮೌಳಿ, ಸಿನಿಮಾಕ್ಕೆ ಅಂದ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ಖ್ಯಾತ ನಟ ಮಹೇಶ್ ಬಾಬು ಜೊತೆ ಕೈಜೋಡಿಸಲಿದ್ದಾರೆ ರಾಜಮೌಳಿ. ಆರ್ಆರ್ಆರ್ ಸಿನಿಮಾ ಘೋಷಿಸಿ ಚಿತ್ರೀಕರಣ ಆರಂಭಿಸಿದ ಕೂಡಲೇ ತಮ್ಮ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ ಎಂದು ಘೋಷಿಸಿದ್ದರು ನಿರ್ದೇಶಕ ರಾಜಮೌಳಿ.
ಲಾಕ್ಡೌನ್ ಕಾರಣದಿಂದ ಆರ್ಆರ್ಆರ್ ಚಿತ್ರೀಕರಣ ವಿಳಂಬವಾಗದೇ ಇದ್ದಿದ್ದರೆ ಈ ವೇಳೆಗಾಗಲೇ ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಚಿತ್ರೀಕರಣ ಆರಂಭವಾಗಿಬಿಡುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಈ ಇಬ್ಬರು ಪ್ರತಿಭಾವಂತರ ಸಿನಿಮಾ ತಡವಾಗಿದೆ.
ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಅರಣ್ಯದಲ್ಲಿ ನಡೆಯಲಿದೆ. ಅರಣ್ಯವು ಸಿನಿಮಾದಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಈ ವಿಷಯವನ್ನು ಹೇಳಿರುವುದು ರಾಜಮೌಳಿ ತಂದೆ, ಕತೆಗಾರ ವಿಜಯೇಂದ್ರ ಪ್ರಸಾದ್.

ಆಫ್ರಿಕಾ ಕಾಡುಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ: ವಿಜಯೇಂದ್ರ ಪ್ರಸಾದ್
ಮಾಧ್ಯಮದೊಟ್ಟಿಗೆ ಮಾತನಾಡಿರುವ ವಿಜಯೇಂದ್ರ ಪ್ರಸಾದ್, 'ಆಫ್ರಿಕಾ ಕಾಡುಗಳಲ್ಲಿ ನಡೆವ ಸಾಹಸಮಯ ಕತೆಯನ್ನು ಇನ್ನಷ್ಟು ತಿದ್ದುತಿದ್ದೇನೆ. ಆಫ್ರಿಕಾ ಕಾಡುಗಳು, ಅಲ್ಲಿನ ಪರಿಸ್ಥಿತಿ, ಅಲ್ಲಿ ನಡೆವ ಸಾಹಸಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ಅರಣ್ಯದ ಕುತೂಹಲಕಾರಿ ಕತೆ
ಆಫ್ರಿಕನ್ ಕಾಡುಗಳಲ್ಲಿ ನಡೆವ ಕುತೂಹಲಕಾರಿ ಸಂಗತಿಗಳು, ಕಾಡುಜನರ ಸಾಹಸಗಳು ಇನ್ನೂ ಕೆಲವು ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಮಹೇಶ್ ಬಾಬು ಗಾಗಿ ಕತೆ ಹೆಣೆಯುತ್ತಿದ್ದಾರೆ ವಿಜಯೇಂದ್ರ ಪ್ರಸಾದ್. ಅರಣ್ಯದ ಕುತೂಹಲಗಳ ಬಗ್ಗೆ ಭಾರತದಲ್ಲಿ ಹೆಚ್ಚು ಸಿನಿಮಾಗಳು ಬಂದಿಲ್ಲವಾದ್ದರಿಂದ ಇದೇ ವಿಷಯವನ್ನು ಸಿನಿಮಾ ಕತೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ಹಾಲಿವುಡ್ ಮಾದರಿ ಸಿನಿಮಾ ಇದಾಗಿರಲಿದೆ
ಆರ್ಆರ್ಆರ್ ಸೇರಿದಂತೆ ಸತತವಾಗಿ ಎರಡು ಐತಿಹಾಸಿಕ ಮಾದರಿ ಸಿನಿಮಾಗಳನ್ನು ಮಾಡಿರುವ ರಾಜಮೌಳಿ ಈ ಸಿನಿಮಾದಲ್ಲಿ ಭಿನ್ನ ರೀತಿಯ ಕತೆ ಹೇಳಲು ಹೊರಟಿದ್ದಾರೆ. 'ಇಂಡಿಯಾನಾ ಜೋನ್ಸ್', 'ಜುಮಾಂಜಿ' ಮಾದರಿಯಲ್ಲಿ ಈ ಸಿನಿಮಾ ಇರಲಿದೆ ಎನ್ನಲಾಗುತ್ತಿದೆ.
Recommended Video

ಅಕ್ಟೋಬರ್ 13 ಕ್ಕೆ ಆರ್ಆರ್ಆರ್ ಬಿಡುಗಡೆ
ಆರ್ಆರ್ಆರ್ ಸಿನಿಮಾವು ಅಕ್ಟೋಬರ್ 13 ಕ್ಕೆ ಬಿಡುಗಡೆ ಆಗಲಿದ್ದು. ಸಿನಿಮಾ ಬಿಡುಗಡೆ ಆದ ಕೆಲವೇ ತಿಂಗಳಲ್ಲಿ ಮಹೇಶ್ ಬಾಬು ಜೊತೆಗಿನ ಸಿನಿಮಾ ಸೆಟ್ಟೇರಲಿದೆ. ಮಹೇಶ್ ಬಾಬು ಸಹ ಪ್ರಸ್ತುತ 'ಸರ್ಕಾರು ವಾರಿ ಪಾಟ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ವೇಳೆಗೆ ಅವರೂ ಚಿತ್ರೀಕರಣ ಮುಗಿಸಿರುತ್ತಾರೆ.


Click it and Unblock the Notifications











