SSMB29 ಚಿತ್ರದ ಕುಂಭನನ್ನು ಪರಿಚಯಿಸಿದ ರಾಜಮೌಳಿ; ಅಭಿಮಾನಿಗಳಿಗೆ ನಿರಾಸೆ
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಚಿತ್ರದ ಬಗ್ಗೆ ಹೆಚ್ಚು ಅಪ್ಡೇಟ್ ಬಂದಿಲ್ಲ. ನವೆಂಬರ್ 15ಕ್ಕೆ ಟೀಸರ್ ಬಿಡುಗಡೆಗೆ ಜಕ್ಕಣ್ಣ ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮುನ್ನ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕ ಚೋಪ್ರಾ ಫಸ್ಟ್ ರಿಲೀಸ್ ಮಾಡುತ್ತಿದ್ದಾರೆ.
ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯಕ್ಕೆ SSMB29 ಅಥವಾ ಗ್ಲೋಬ್ಟ್ರಾಟರ್ ಎಂದು ಕರೆಯಲಾಗ್ತಿದೆ. 'ವಾರಣಾಸಿ' ಎಂಬ ಟೈಟಲ್ ಅನ್ನು ರಾಜಮೌಳಿ ಪರಿಶೀಲಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಪೋಸ್ಟರ್ ಸಮೇತ ಆ ವಿಚಾರವನ್ನು ಮಹೇಶ್ ಬಾಬು ಬಹಿರಂಗಪಡಿಸಿದ್ದಾರೆ.

ಚಿತ್ರದಲ್ಲಿ ಕುಂಭ ಅನ್ನೋ ಖಡಕ್ ವಿಲನ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಬಣ್ಣ ಹಚ್ಚಿದ್ದಾರೆ. ನಡೆದಾಡಲು ಆಗದೇ ವೀಲ್ಚೇರ್ನಲ್ಲಿ ಕೂತಿರುವ ಕುಂಭ ಹೇಗೆ ನಾಯಕನಿಗೆ ಸವಾಲು ಹಾಕುತ್ತಾನೆ ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ. ಇನ್ನು ಪೋಸ್ಟರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸೂಪರ್ ಎಂದರೆ ಮತ್ತೆ ಕೆಲವರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.
ರಾಜಮೌಳಿ ತಮ್ಮ ಸಿನಿಮಾಗಳ ಪ್ರಮೋಷನ್ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ಪೋಸ್ಟರ್, ಟೀಸರ್, ಟ್ರೈಲರ್ ಹೀಗೆ ಎಲ್ಲವನ್ನು ಸೊಗಸಾಗಿ ಬಹಿರಂಗಪಡಿಸುತ್ತಾರೆ. ಕುಂಭನ ಅವತಾರದಲ್ಲಿ ಪೃಥ್ವಿರಾಜ್ ಲುಕ್ ಗಮನ ಸೆಳೆಯುತ್ತಿದೆ. ಆವೇಶದಿಂದ ನುಗ್ಗಿ ಬರುತ್ತಿರುವ ಕುಂಭ ಓಡಾಡಲು ಆಗದೇ ಕೈಗಳಲ್ಲಿ ಸ್ವಾಧಿನ ಇಲ್ಲದೇ ಬರೀ ರಿಮೋಟ್ ಕಂಟ್ರೋಲ್ ಮಾಡುತ್ತಾ ಕೂತಿದ್ದಾನೆ. ಕುಂಭ ತನ್ನ ವೀಲ್ ಚೇರ್ ಅನ್ನು ರೋಬೊ ರೀತಿ ಬದಲಾಯಿಸಿ ಆಯುಧವನ್ನಾಗಿ ಮಾಡಿಕೊಂಡಿದ್ದಾನೆ. ಆ ಮೂಲಕ ನಾಯಕನಿಗೆ ಸವಾಲು ಹಾಕುತ್ತಿದ್ದಾನೆ.
ಒರಿಸ್ಸಾದಲ್ಲಿ SSMB29 ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮಾಡಿದ್ದರು. ಅದಕ್ಕೆ ಸಂಬಧಿಸಿದ ವೀಡಿಯೋಗಳು ವೈರಲ್ ಆಗಿತ್ತು. ವೀರ್ಚೇರ್ನಲ್ಲಿ ಪೃಥ್ವಿರಾಜ್ ಕುಳಿತಿರುವಂತೆ ಅದರಲ್ಲಿ ಕಂಡಿತ್ತು. ಅದು ಈಗ ನಿಜವಾಗಿದೆ. ಅಲ್ಲಿ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದರು ಅನ್ನಿಸುತ್ತದೆ. ಅದೇ ದೃಶ್ಯಕ್ಕೆ ಸಂಬಂಧಿಸಿದ ಪೋಸ್ಟರ್ ಈಗ ಬಿಡುಗಡೆ ಆಗಿದೆ. ಸದ್ಯ ಈ ಪೋಸ್ಟರ್ ಅನ್ನು ಬೇರೆ ಬೇರೆ ಸಿನಿಮಾಗಳ ಜೊತೆ ಹೋಲಿಸಲಾಗುತ್ತಿದೆ.
'ಸೂಪರ್ಮ್ಯಾನ್' ಚಿತ್ರದಲ್ಲಿ ಡಾ ಆಕ್ಟೋಪಸ್, ಇನ್ನು 'ಕ್ರಿಶ್'- 3 ಚಿತ್ರದ 'ಕಾಲ್' ಪಾತ್ರಗಳ ಲುಕ್ ಜೊತೆ ಹೋಲಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದೇ ಪೋಸ್ಟರ್ಗಳನ್ನು ನೋಡಿ ಜಕ್ಕಣ್ಣ ಕಾಪಿ ಪೇಸ್ಟ್ ಮಾಡಿದ್ದಾರೆ ಎಂದು ಕುಹಕವಾಡುತ್ತಿದ್ದಾರೆ. ವೀಲ್ಚೇರ್ ಮೇಲೆ ಕೂತುಬಿಟ್ಟರೆ ಕಾಪಿ ಪೇಸ್ಟ್ ಹೇಗೆ ಆಗುತ್ತದೆ. ಪ್ರತಿ ಪಾತ್ರವೂ ಬೇರೆ ಬೇರೆ ಎಂದು ಕೆಲವರು ತಿರುಗೇಟು ಕೊಡುತ್ತಿದ್ದಾರೆ.
ಪೋಸ್ಟರ್ ಹಂಚಿಕೊಂಡು "ಪೃಥ್ವಿ ಜೊತೆ ಮೊದಲ ಶಾಟ್ ಮಾಡಿದ ನಂತರ, ನಾನು ಅವರ ಬಳಿಗೆ ಹೋಗಿ ನೀನು ನನಗೆ ತಿಳಿದಿರುವ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ಹೇಳಿದ್ದೆ. ಈ ದುಷ್ಟ, ನಿರ್ದಯ, ಶಕ್ತಿಶಾಲಿ ಪ್ರತಿಸ್ಪರ್ಧಿ ಕುಂಭಾಗೆ ಜೀವ ತುಂಬುವುದು ಸೃಜನಾತ್ಮಕವಾಗಿ ತುಂಬಾ ತೃಪ್ತಿಕರವಾಗಿತ್ತು. ತನ್ನ ಕುರ್ಚಿಗೆ ಜಾರಿದ ಪೃಥ್ವಿ, ಧನ್ಯವಾದಗಳು" ಎಂದು ರಾಜಮೌಳಿ ಕ್ಯಾಪ್ಷನ್ ಕೊಟ್ಟಿದ್ದಾರೆ.
ಮಹೇಶ್ ಬಾಬು ಟ್ವೀಟ್ ಮಾಡಿ "ಇನ್ನೊಂದು ಬದಿಯಲ್ಲಿ ನಿಂತಿದ್ದೆ.. ಕುಂಭ ನಿನ್ನನ್ನು ನೇರವಾಗಿ ಭೇಟಿಯಾಗುವ ಸಮಯ ಬಂದಿದೆ" ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. 'ಇಲ್ಲಿಂದ ಚಿತ್ರದ ಪ್ರಚಾರ ಆರಂಭಿಸುತ್ತಿದ್ದೇವೆ, ಈತ ಕುಂಭ' ಎಂದು ಪ್ರಿಯಾಂಕ ಚೋಪ್ರಾ ಬರೆದುಕೊಂಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ಈ ಚಿತ್ರಕ್ಕೆ ಇರಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











