Guntur Kaaram Trailer: ಮಹೇಶ್- ತ್ರಿವಿಕ್ರಮ್ ಮಾಸ್ ಗ್ರಾಮರ್, ಶ್ರೀಲೀಲಾ ಗ್ಲಾಮರ್: ಘಾಟು ಟ್ರೈಲರ್ ಸೂಪರ್
ತೆಲುಗಿನ ಬಹುನಿರೀಕ್ಷಿತ 'ಗುಂಟೂರು ಖಾರಂ' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ತ್ರಿವಿಕ್ರಮ್ ಮಾರ್ಕ್, ಮಹೇಶ್ ಬಾಬು ಮಾಸ್ ಪರ್ಫಾರ್ಮನ್ಸ್ ಸೇರಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಕೊಡುವ ಸುಳಿವು ಸಿಗುತ್ತಿದೆ. ಶ್ರೀಲೀಲಾ ಗ್ಲಾಮರ್ ಟಚ್ ಕೂಡ ಚಿತ್ರಕ್ಕಿದೆ. ಜನವರಿ 12ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.
ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು 'ಅತಡು' ಹಾಗೂ 'ಖಲೇಜಾ' ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವರಿಬ್ಬರ ಹ್ಯಾಟ್ರಿಕ್ ಪ್ರಾಜೆಕ್ಟ್ 'ಗುಂಟೂರು ಖಾರಂ'. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿದೆ. ಇನ್ನು ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಜಬರ್ದಸ್ತ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಪವರ್ ಪ್ಯಾಕ್ಡ್ ಟ್ರೈಲರ್ನಲ್ಲಿ ಮಹೇಶ್ ಬಾಬು ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಮ್ಯಾನರಿಸಂ ಟ್ರೈ ಮಾಡಿರೋದು ಗೊತ್ತಾಗುತ್ತಿದೆ. ಪ್ರಕಾಶ್ ರಾಜ್, ಈಶ್ವರಿ ರಾವ್, ರಮ್ಯಾಕೃಷ್ಣ, ಜಯರಾಂ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಜೊತೆಗೆ ಕಾಮಿಡಿಯನ್ನು ಬೆರೆಸಿ ತ್ರಿವಿಕ್ರಮ್ ತಮ್ಮದೇ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ತ್ರಿವಿಕ್ರಮ್ ಹಿಂದಿನ ಸಿನಿಮಾಗಳಂತೆ ಇಲ್ಲೂ ಫ್ಯಾಮಿಲಿ ಡ್ರಾಮಾ ಇದೆ. ಇದರ ನಡುವೆ ಮಹೇಶ್ ಬಾಬು ಅಭಿಮಾನಿಗಳು ಕೇಳುವ ಮಾಸ್ ಎಲಿಮೆಂಟ್ಸ್ ಕೂಡ ಇದೆ.
ಭಾವನಾತ್ಮಕ ಸನ್ನಿವೇಶದೊಂದಿಗೆ ಟ್ರೈಲರ್ ಶುರುವಾಗುತ್ತದೆ. ಹಿರಿಯ ಮಗ ರಮಣನನ್ನು (ಮಹೇಶ್ ಬಾಬು) ಚಿಕ್ಕವನಿದ್ದಾಗಲೇ ತಾಯಿ(ರಮ್ಯಾಕೃಷ್ಣ) ದೂರ ಮಾಡಿರುತ್ತಾಳೆ. ಹಾಗಾಗಿ ಗುಂಟೂರು ಮಿರ್ಚಿ ಯಾರ್ಡ್ನಲ್ಲೇ ರಮಣ ಬೆಳೆದದ್ದು. ಬಳಿಕ ಜೀಪ್ ಏರಿ ಗುಂಟೂರು ಮಿರ್ಚಿ ಮಾರುಕಟ್ಟೆಗೆ ರಮಣ ಖಡಕ್ ಎಂಟ್ರಿ ಕೊಡ್ತಾನೆ. ನೋಡ್ತಿದ್ದಂಗೆ ಮಜಾ ಬಂತಾ? ಹಾರ್ಟ್ ಬೀಟ್ ಹೆಚ್ಚಾಯ್ತಾ? ಅಂತ ಡೈಲಾಗ್ಸ್ ಹೊಡೆದು ಬಿಲ್ಡಪ್ ಕೊಟ್ಟುಕೊಂಡು ತನ್ನನ್ನು ತಾನು ಪರಿಚಯಿಸಿಕೊಳ್ತಾನೆ.
ಬಳಿಕ ನಾಯಕಿ ಕೀರ್ತಿ(ಶ್ರೀಲೀಲಾ) ಪರಿಚಯ. ಅಲ್ಲಿಂದ ಕೊಂಚ ಲವ್, ರೊಮ್ಯಾನ್ಸ್ ಶುರುವಾಗುತ್ತದೆ. ಆಕೆಯನ್ನು ನೋಡುತ್ತಿದ್ದಂತೆ ರಮಣ ಪ್ರೀತಿಲಿ ಬೀಳ್ತಾನೆ. ಬಳಿಕ ಒಂದಷ್ಟು ಆಕ್ಷನ್ ಸೀಕ್ವೆನ್ಸ್, ಪಂಚಿಂಗ್ ಡೈಲಾಗ್ಸ್. ಜಗಪತಿ ಬಾಬು ಹಾಗೂ ಪ್ರಕಾಶ್ ರಾಜ್ ವಿಲನ್ಗಳಾಗಿ ನಟಿಸಿದ್ದು ಅವರಿಬ್ಬರು ಸವಾಲು ಹಾಕೋದು, ಅದಕ್ಕೆ ಮಹೇಶ್ ಬಾಬು ತಿರುಗೇಟು ನೀಡುವುದನ್ನು ನೋಡಬಹುದು. ಬ್ರೇಕ್ ಇಲ್ಲದ ಲಾರಿ ರೀತಿ ಗುದ್ದಾಡುವ ರಮಣ ತಾಯಿಗೆ ಮಾತ್ರ ತಲೆ ಬಗ್ಗಿಸುತ್ತಾನೆ ಎಂದು ಹೇಳಿ ಮದರ್ ಸೆಂಟಿಮೆಂಟ್ ಇಟ್ಟು ತ್ರಿವಿಕ್ರಮ್ ಕಥೆ ಹೇಳಿದ್ದಾರೆ.
ಗುಂಟೂರು ಭಾಗದ ರಾಜಕೀಯ ಅಂಶಗಳ ಸುತ್ತಾ ಈ ಸಿನಿಮಾ ಕಥೆ ಸಾಗುತ್ತದೆ ಅನ್ನೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಮಹೇಶ್ ಬಾಬು ಹೊಸ ಮ್ಯಾನರಿಸಂನಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಪದೇ ಪದೇ ಬೀಡಿ ಸೇದುತ್ತಾ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ. ಇನ್ನು ಶ್ರೀಲೀಲಾ ಲಂಗಾ ದಾವಣಿ ಮಾತ್ರವಲ್ಲ ವೆಸ್ಟರ್ನ್ ಡ್ರೆಸ್ನಲ್ಲೂ ಕಾಣಿಸಿಕೊಂಡು ರಂಗೇರಿಸಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಸಂಕ್ರಾಂತಿ ಸಂಭ್ರಮಕ್ಕೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರೆಸಿ ಅರೆದಿರುವ ಘಾಟು ಖಾರ ಇದು.

ಎಸ್. ತಮನ್ ಮ್ಯೂಸಿಕ್, ಮನೋಜ್ ಪರಮಹಂಸ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. 'ಅಲಾ ವೈಕುಂಠಪುರಂಲೊ' ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 'ಸರ್ಕಾರುವಾರಿ ಪಾಟ' ಬಳಿಕ ಈ ಸಿನಿಮಾ ಮಾಡಿದ್ದಾರೆ. ಹಾಗಾಗಿ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಂಕ್ರಾಂತಿಗೆ ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿದ್ದು 'ಗುಂಟೂರು ಖಾರಂ' ಬಹಳ ನಿರೀಕ್ಷೆ ಹುಟ್ಟಾಕ್ಕಿರೋದು ಸುಳ್ಳಲ್ಲ.


Click it and Unblock the Notifications











