ಮಗ ಜನಿಸಿದಾಗ ಅನುಭವಿಸಿದ ಸಂಕಟದ ಬಗ್ಗೆ ಮಹೇಶ್ ಬಾಬು ಮಾತು
ನಟ ಮಹೇಶ್ ಬಾಬು ಸಂಕೋಚದ ವ್ಯಕ್ತಿತ್ವದ ನಟ. ತಮ್ಮ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಅವರು ಚುಟುಕಾಗಿ ಮಾತನಾಡಿ ಕೈ ಮಗಿದು ಹೊರಟು ಬಿಡುತ್ತಾರೆ. ಸಂದರ್ಶನಗಳಂತೂ ದೂರದ ಮಾತು. ಆದರೆ ಇದೀಗ ವಿಶೇಷ ಟಾಕ್ ಶೋ ಒಂದಕ್ಕೆ ಅತಿಥಿಯಾಗಿ ಬಂದಿರುವ ಮಹೇಶ್ ಬಾಬು ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
Recommended Video
ತೆಲುಗಿನ ಆಹಾ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ 'ಅನ್ಸ್ಟಾಪೆಬಲ್ ಬಾಲಯ್ಯ' ಟಾಕ್ ಶೋ ಬಹಳ ಜನಪ್ರಿಯತೆ ಗಳಿಸಿದೆ. ತೆಲುಗಿನ ಹಲವು ಸ್ಟಾರ್ ನಟರು, ಸೂಪರ್ ಸ್ಟಾರ್ ನಟರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ನಟ ಬಾಲಕೃಷ್ಣ ಕೇಳುವ ದಿಟ್ಟ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ, ಬಾಲಯ್ಯನ ಜೊತೆ ಆಟವೂ ಆಡುತ್ತಾರೆ.
ಇದೀಗ ನಟ ಮಹೇಶ್ ಬಾಬು, 'ಅನ್ಸ್ಟಾಪೆಬಲ್ ಬಾಲಯ್ಯ' ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ನಟ ಬಾಲಕೃಷ್ಣ ಜೊತೆ ಮಾತನಾಡಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ತಾವು ಮಾಡುವತ್ತಿರುವ ಸಮಾಜ ಸೇವೆಗೆ ಕಾರಣವೇನು ಎಂಬುದನ್ನು ಮಹೇಶ್ ಬಾಬು ಬಹಿರಂಗಪಡಿಸಿದ್ದಾರೆ.

ಹಲವು ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ
ಮಹೇಶ್ ಬಾಬು ಈವರೆಗೆ ಸಾವಿರಾರು ಮಕ್ಕಳಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದಾರೆ. ಬಡ, ನವಜಾತ ಶಿಶುಗಳ ಜೀವ ಉಳಿಸುವ ಕಾರ್ಯವನ್ನು ಮಹೇಶ್ ಬಾಬು ಮಾಡುತ್ತಾ ಬಂದಿದ್ದಾರೆ. ಮಹೇಶ್ ಬಾಬು ಮಾಡುವ ಈ ಸಮಾಜ ಕಾರ್ಯದ ಮಾಹಿತಿಯನ್ನು ಅವರ ಪತ್ನಿ ನಮ್ರತಾ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ತಾವು ಏಕೆ ಮಕ್ಕಳ ಆರೋಗ್ಯದ ಬಗ್ಗೆ ಅದರಲ್ಲಿಯೂ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಅಷ್ಟೋಂದು ಕಾಳಜಿ ವಹಿಸುತ್ತೇವೆ ಎಂಬುದನ್ನು ಮಹೇಶ್ ಬಾಬು, 'ಅನ್ಸ್ಟಾಪೆಬಲ್ ಬಾಲಯ್ಯ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಮಗ ಗೌತಮ್ ಜನಿಸಿದಾಗ ಎದುರಿಸಿದ್ದ ಸಮಸ್ಯೆ ಬಗ್ಗೆ ಮಹೇಶ್ ಮಾತು
ಸಮಾಜ ಸೇವೆ, ಮಕ್ಕಳ ಜೀವ ಉಳಿಸುವ ಕಾರ್ಯದ ಬಗ್ಗೆ ಬಾಲಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಬಾಬು, ''ನನ್ನ ಮಗ ಗೌತಮ್ ಜನಿಸಿದಾಗ ಅವನಿಗೆ ಬಹಳ ಸಮಸ್ಯೆ ಆಗಿತ್ತು. ಅವನು ಜನಿಸಿದಾಗ ನನ್ನ ಅಂಗೈನಷ್ಟೆ ಅಗಲ ಎತ್ತರ ಇದ್ದ. ಅವನ ಉಳಿವು ಕಷ್ಟವಾಗಿಬಿಟ್ಟಿತ್ತು. ಆ ಸಮಯದಲ್ಲಿ ನಾವು ತೀವ್ರ ನೋವು, ಆತಂಕ ಎದುರಿಸಿದೆವು, ಹೇಗೋ ಹಣ ಖರ್ಚು ಮಾಡಿ ಎಲ್ಲವನ್ನೂ ಸರಿ ಮಾಡಿಕೊಂಡೆವು. ಈಗ ಅವನು ನನಗಿಂತಲೂ ಎತ್ತರ ಇದ್ದಾನೆ'' ಎಂದಿದ್ದಾರೆ ಮಹೇಶ್ ಬಾಬು.

''ಹಣ ಇತ್ತು ಸರಿಹೋಯ್ತು, ಹಣ ಇಲ್ಲದವರ ಪರಿಸ್ಥಿತಿ ಏನು?''
''ನಮ್ಮ ಬಳಿ ಹಣ ಇತ್ತು ಎಲ್ಲವೂ ಸರಿ ಹೋಯಿತು. ಆದರೆ ಎಲ್ಲರ ಬಳಿಯೂ ಹಣ ಇರುವುದಿಲ್ಲ ಅವರ ಪರಿಸ್ಥಿತಿ ಏನು? ಮಕ್ಕಳು ಎಲ್ಲರಿಗೂ ಮಕ್ಕಳೇ ನಾವಾದರೂ ಅಷ್ಟೆ, ಇನ್ನೊಬ್ಬರಾದರೂ ಅಷ್ಟೆ'' ಎಂದಿದ್ದಾರೆ ಮಹೇಶ್ ಬಾಬು. ಆ ಮೂಲಕ ತಾವು ಏಕೆ ನವಜಾತ ಶಿಶುಗಳ ಆರೋಗ್ಯ ಕಾಪಾಡಲು ಹಣ ಸಹಾಯ ಮಾಡುವುದೆಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಬಾಲಯ್ಯ ಮತ್ತೊಂದು ಪ್ರಶ್ನೆಯನ್ನು ಮಹೇಶ್ ಬಾಬುಗೆ ಕೇಳುತ್ತಾರೆ. 'ಅಸಲಿಗೆ ಮಹೇಶ್ ಬಾಬು ಯಾರು? ಅವರೊಬ್ಬ ಸೂಪರ್ ಸ್ಟಾರ್ರಾ?' ಎಂದು ಕೇಳಿದಾಗ, 'ಮಹೇಶ್ ಬಾಬು ತಮ್ಮ ಮಕ್ಕಳಿಗೆ ಅಪ್ಪ ಅಷ್ಟೆ. ನನಗೆ ಹಾಗೆ ಇರಲು ಇಷ್ಟ'' ಎನ್ನುತ್ತಾರೆ. ಆ ಮೂಲಕ ತಾವೊಬ್ಬ ಸರಳ ಕುಟುಂಬಸ್ಥ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಪಕ್ಕಾ ಫ್ಯಾಮಿಲಿ ಮ್ಯಾನ್ ಮಹೇಶ್ ಬಾಬು
ಮಹೇಶ್ ಬಾಬು ಪಕ್ಕಾ ಫ್ಯಾಮಿಲಿ ಮ್ಯಾನ್. ತಮ್ಮ 'ವಂಶಿ' ಸಿನಿಮಾದ ಸಹ ನಟಿ ನಮ್ರತಾ ಶಿರೋಡ್ಕರ್ ಅನ್ನು 2005ರಲ್ಲಿ ವಿವಾಹವಾದ ಮಹೇಶ್ ಬಾಬು, ಗೌತಮ್ ಹಾಗೂ ಸಿತಾರಾ ಹೆಸರಿನ ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಅವರ ಬಗ್ಗೆಯೂ ಅನ್ಸ್ಟಾಪೆಬಲ್ ಬಾಲಯ್ಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಹೇಶ್ ಬಾಬು, ಗೌತಮ್ ಶಾಂತವಾಗಿರುತ್ತಾನೆ, ಆದರೆ ಸಿತಾರಾ ಬಹಳ ತರ್ಲೆ ಅವಳಿಗೆ ಆಟವಾಡುವುದು ಬಹಳ ಇಷ್ಟ ಸಾಕಷ್ಟು ಸಮಸ್ಯೆ ಕೊಡುತ್ತಾಳೆ ಎಂದು ಹೇಳಿದ್ದಾರೆ. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.


Click it and Unblock the Notifications











