"ರಾಜಮೌಳಿ ಆ ಮಾತು ಕೇಳಿ ನನ್ನ ಹೃದಯ ಒಡೆದು ಹೋಗಿತ್ತು": ಮಮತಾ ಮೋಹನ್ ದಾಸ್
ನಟಿಯಾಗಿ ಗಾಯಕಿಯಾಗಿ ಸಿನಿರಸಿಕರು ಮನಗೆದ್ದ ಮಲಯಾಳಿ ಚೆಲುವೆ ಮಮತಾ ಮೋಹನ್ ದಾಸ್. ಕನ್ನಡದ 'ಗೂಳಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿಯೂ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ಗೆ ತುತ್ತಾಗಿದ್ದ ಚೆಲುವೆ ಅದರ ವಿರುದ್ಧ ಹೋರಾಡಿ ಗೆದ್ದಿದ್ದರು.
ಅನುಷ್ಕಾ ಶೆಟ್ಟಿ ನಟನೆಯ 'ಅರುಂಧತಿ' ಸಿನಿಮಾ ಯಾವ ರೀತಿ ಸದ್ದು ಮಾಡಿತ್ತು ಎನ್ನುವುದು ಗೊತ್ತೇಯಿದೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಹಾರರ್ ಫ್ಯಾಂಟಸಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿರಸಿಕರನ್ನು ರಂಜಿಸಿತ್ತು. ಅನುಷ್ಕಾ ಶೆಟ್ಟಿ ಸಿನಿ ಕರಿಯರ್ಗೆ ದೊಡ್ಡ ತಿರುವು ಕೊಟ್ಟ ಸಿನಿಮಾ ಇದು. ಅಸಲಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಮೊದಲು ಮಮತಾ ಮೋಹನ್ ದಾಸ್ಗೆ ಸಿಕ್ಕಿತ್ತು.

ಇತ್ತೀಚೆಗೆ ನಟಿ ಮಮತಾ ಮೋಹನ್ ದಾಸ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಯಾಕೆ ಆ ಸಿನಿಮಾದಲ್ಲಿ ನಟಿಸಲಿಲ್ಲ. ಮುಂದೆ ಏನೆಲ್ಲಾ ಆಯಿತು ಎನ್ನುವುದನ್ನು ಆಕೆ ವಿವರಿಸಿದ್ದಾರೆ. 2007ರಲ್ಲಿ ಮಮತಾ ರಾಜಮೌಳಿ ನಿರ್ದೇಶನದ 'ಯಮದೊಂಗ' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಆದರೆ ಅದಕ್ಕೂ ಮುನ್ನ 'ಅರುಂಧತಿ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಮ್ಯಾನೇಜರ್ ಮಾತು ಕೇಳಿ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.
"ನಾನು ಮಲಯಾಳಿ. ಅದರಲ್ಲೂ ಎನ್ಆರ್ಐ. ಹಾಗಾಗಿ ನನಗೆ ತೆಲುಗು ಗೊತ್ತಿರಲಿಲ್ಲ. ಇಂಡಸ್ಟ್ರಿ ಬಗ್ಗೆ ಕೂಡ ಗೊತ್ತಿರಲಿಲ್ಲ. ನನಗೆ ಅರುಂಧತಿ ಅವಕಾಶ ಬಂದಾಗ ಟಾಲಿವುಡ್ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಮ್ಯಾನೇಜರ್ ಹೇಳಿದ್ರು. ಆ ಪ್ರೊಡಕ್ಷನ್ ಸಂಸ್ಥೆ ಒಳ್ಳೆದ್ದಲ್ಲ. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಬಳಿ ಹಣ ಇಲ್ಲ ಎಂದಿದ್ದರು. ಅದನ್ನು ಕೇಳಿ ಮೊದಲಿಗೆ ಓಕೆ ಮಾಡಿದ್ದ ನಾನು ನಂತರ ಆ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದೆ."
"ಪಾಪ ಶ್ಯಾಮ್ ಪ್ರಸಾದ್ ರೆಡ್ಡಿ ಎರಡ್ಮೂರು ತಿಂಗಳು ಸತತವಾಗಿ ಕೇಳುತ್ತಿದ್ದರು. ನೀವೇ ಅರುಂಧತಿ ಪಾತ್ರಕ್ಕೆ ಸೂಕ್ತ ಎನ್ನುತ್ತಿದ್ದರು. ಅಷ್ಟೆಲ್ಲಾ ಹೇಳಿದರೂ ನಾನು ಕೇಳಲಿಲ್ಲ. ಮ್ಯಾನೇಜರ್ ಮಾತು ಕೇಳಿ ಶ್ಯಾಮ್ ಪ್ರಸಾದ್ ಅವರ ಬಳಿ, "ಇಲ್ಲ ಸರ್, ನನಗೆ ಭಯ ಆಗುತ್ತಿದೆ, ನಟಿಸಲ್ಲ" ಎಂದು ಹೇಳಿದ್ದೆ. ಅದಾಗಿ ಒಂದೂವರೆ ವರ್ಷದ ನಂತರ ನಾನು ರಾಜಮೌಳಿ ಅವರನ್ನು ಭೇಟಿ ಮಾಡಿದೆ. 'ಯಮದೊಂಗ' ಚಿತ್ರಕ್ಕಾಗಿ ಆಡಿಷನ್ ಮಾಡಿದ್ದರು."

"ಬಾಬ ಕಲ್ಯಾಣಿ ಎನ್ನುವ ನನ್ನ ಮಲಯಾಳಂ ಸಿನಿಮಾ ತೆಲುಗಿಗೆ 'ಪೋಕಿರಿ ಪಿಲ್ಲ' ಹೆಸರಿನಲ್ಲಿ ಡಬ್ ಆಗಿತ್ತು. ಅದನ್ನು ನೋಡಿ 'ಯಮದೊಂಗ' ಚಿತ್ರದ ಧನಲಕ್ಷ್ಮಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆಗ ರಾಜಮೌಳಿ ಹೇಳಿದರು. ಶ್ಯಾಮ್ ಪ್ರಸಾದ್ ರೆಡ್ಡಿಯವರ 'ಅರುಂಧತಿ' ಸಿನಿಮಾ ನೀನು ಒಪ್ಪಿಕೊಳ್ಳಬೇಕಿತ್ತು. ಅದು ನಿನಗೆ ಒಳ್ಳೆ ಅವಕಾಶ ಆಗುತ್ತಿತ್ತು ಎಂದರು. ಆ ಮಾತು ಕೇಳಿ ನನ್ನ ಹೃದಯವೇ ಒಡೆದು ಹೋಗಿತ್ತು. ಅದನ್ನು ಕೇಳಿ ನನಗೆ ಬಲೂನಿನ ಗಾಳಿ ತೆಗೆದಂತಹ ಅನುಭವ ಆಗಿತ್ತು."
"ರಾಜಮೌಳಿ ಈ ಮಾತು ಹೇಳಿದಾಗ 'ಅರುಂಧತಿ' ಸಿನಿಮಾ ಇನ್ನು ರಿಲೀಸ್ ಆಗಿರಲಿಲ್ಲ. ಆದರೆ ಇಂಡಸ್ಟ್ರಿಯವರಿಗೆ ಗೊತ್ತಿತ್ತು, ಅದು ಒಳ್ಳೆ ಸಿನಿಮಾ ಅಂತ. ಯಾಕಂದರೆ ಅಷ್ಟೊತ್ತಿಗೆ ಆ ಸಿನಿಮಾ ಬಗ್ಗೆ ಇಂಡಸ್ಟ್ರಿ ಮಾತನಾಡಲು ಶುರು ಮಾಡಿತ್ತು. ಮುಂದೆ ಸಿನಿಮಾ ಹಿಟ್ ಆಗಿ ಹಲವು ವರ್ಷಗಳ ಕಾಲ ಜನ ಮಾತನಾಡಿದರು" ಎಂದು ಮಮತಾ ಮೋಹನ್ ದಾಸ್ ವಿವರಿಸಿದ್ದಾರೆ. ಒಂದೊಳ್ಳೆ ಅವಕಾಶ ಮಿಸ್ ಮಾಡಿಕೊಂಡ ಬೇಸರ ಇದೆ ಎಂದಿದ್ದಾರೆ.


Click it and Unblock the Notifications











