ಲಸಿಕೆ ಕೊಡುತ್ತೇನೆಂದು ಹೇಳಿ ನಿರ್ಮಾಪಕನ ಬಳಿ ಹಣ ದೋಚಿದ ಖದೀಮ
ಕೊರೊನಾ ಸಂಕಷ್ಟ ಕಾಲವನ್ನು ಸಹ ಹಲವರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಳ ಮಾರುಕಟ್ಟೆಯಲ್ಲಿ ಔಷಧ ಮಾರುವುದು, ಬೆಡ್ ಬ್ಲಾಕ್ ದಂಧೆ ಮಾಡುವುದು. ನಕಲಿ ಲಸಿಕೆ ಮಾರಾಟ ಹೀಗೆ ಹಲವು ವಿಧದ ಕಳ್ಳ ವ್ಯಾಪಾರಗಳು ಕೊರೊನಾ ಸಂಕಷ್ಟದ ನಡುವೆ ನಡೆಯುತ್ತಲೇ ಇವೆ.
ಇತ್ತೀಚಿಗೆ ಮೋಸಗಾರನೊಬ್ಬ ನಿರ್ಮಾಪಕರೊಬ್ಬರಿಗೆ 500 ಡೋಸ್ ಲಸಿಕೆ ಮಾರಾಟ ಮಾಡುವುದಾಗಿ ಹೇಳಿ ಒಂದು ಲಕ್ಷ ರು ಹಣ ಪಡೆದು ಕಾಲ್ಕಿತ್ತಿದ್ದಾನೆ. ತೆಲುಗು ಸಿನಿಮಾ ಉದ್ಯಮದ ಅನುಭವಿ ನಿರ್ಮಾಪಕ ಸುರೇಶ್ ಬಾಬು ಮೋಸ ಹೋಗಿರುವ ವ್ಯಕ್ತಿ.
ಸುರೇಶ್ ಬಾಬು, ತಮ್ಮ ನಿರ್ಮಾಣ ಸಂಸ್ಥೆ ಉದ್ಯೋಗಿಗಳಿಗೆ, ಸಿನಿಮಾ ರಂಗದ ಇತರರಿಗೆ ಸಾಮೂಹಿಕವಾಗಿ ತಮ್ಮ ಖರ್ಚಿನಲ್ಲಿಯೇ ಕೊರೊನಾ ಲಸಿಕೆ ಕೊಡಿಸಲು ಮುಂದಾಗಿದ್ದರು. ಅದೇ ಸಮಯದಲ್ಲಿ ನಾಗಾರ್ಜುನ ರೆಡ್ಡಿ ಎಂಬ ವ್ಯಕ್ತಿಯೊಬ್ಬ ಸುರೇಶ್ ಬಾಬು ಅವರನ್ನು ಸಂಪರ್ಕಿಸಿ ತಾವು 500 ಡೋಸ್ ಲಸಿಕೆಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದಾರೆ.

ಪತ್ನಿ ಖಾತೆಗೆ ಒಂದು ಲಕ್ಷ ಹಣ
ಸುರೇಶ್ ಬಾಬು, ನಾಗಾರ್ಜುನ ರೆಡ್ಡಿಯನ್ನು ನಂಬಿ ಆತ ತಿಳಿಸಿದಂತೆಯೇ ಆತನ ಪತ್ನಿಯ ಖಾತೆಗೆ ಒಂದು ಲಕ್ಷ ರುಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಆ ನಂತರ ಆತನಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಿಲ್ಲ. ಕೊನೆಗೆ ಗೊತ್ತಾಗಿದೆ ಆತ ಮೋಸ ಮಾಡಿದ್ದಾನೆಂದು.

ಜ್ಯೂಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸುರೇಶ್ ಬಾಬು ಹೈದರಾಬಾದ್ನ ಜ್ಯೂಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಹುಡುಕಿ ಆತನನ್ನು ಬಂಧಿಸಿದ್ದಾರೆ. ಆತನ ಜೊತೆಗೆ ಇನ್ನೂ ಕೆಲವು ಪ್ರಮುಖರು ಇರುವುದಾಗಿಯೂ ತನಿಖೆ ವೇಳೆ ಪತ್ತೆ ಮಾಡಿದ್ದಾರೆ.

ಟಿವಿ ಚಾನೆಲ್ ಒಂದರ ಮುಖ್ಯಸ್ಥ ಶಾಮೀಲು
ತೆಲುಗಿನ ಟಿವಿ ಚಾನೆಲ್ ಒಂದರ ಮುಖ್ಯಸ್ಥನ ಕೈವಾಡವೂ ಪ್ರಕರಣದಲ್ಲಿದ್ದ ಕಾರಣ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಟಿವಿ ಚಾನೆಲ್ ಮುಖ್ಯಸ್ಥ ತಾನು ತೆಲಂಗಾಣ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಇನ್ನೂ ಕೆಲವರಿಗೆ ಲಸಿಕೆ ವಿಷಯವಾಗಿಯೇ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
Recommended Video

ಆರೋಪಿ ಮೇಲೆ ಮೂರು ಪ್ರಕರಣ ದಾಖಲಾಗಿವೆ
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಸೈಬರಾಬಾದ್ ಎಸಿಪಿ ಬಾಲಕೃಷ್ಣ ರೆಡ್ಡಿ, ''ಆರೋಪಿಯು ತನ್ನನ್ನು ತಾನು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಯೆಂದು ತನ್ನನ್ನು ಸಿನಿಮಾ ಉದ್ಯಮದವರಿಗೆ ಲಸಿಕೆ ನೀಡಲೆಂದೇ ಸರ್ಕಾರ ನೇಮಿಸಿದೆ ಎಂದು ಹೇಳಿ, ಒಂದು ಡೋಸ್ಗೆ 100 ರು. ನಂತೆ ಒಟ್ಟಿಗೆ ಹಲವು ಡೋಸ್ಗಳನ್ನು ನೀಡುತ್ತೇನೆಂದು ಹೇಳಿ ಅಡ್ವಾನ್ಸ್ ರೂಪದಲ್ಲಿ ಲಕ್ಷಾಂತರ ರು ಹಣ ವಸೂಲಿ ಮಾಡಿದ್ದಾನೆ. ಈಗಾಗಲೇ ಆರೋಪಿಯ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ'' ಎಂದಿದ್ದಾರೆ.


Click it and Unblock the Notifications











