ಏಕಾಏಕಿ ಪಾದಕ್ಕೆರಗಿದ ಅಭಿಮಾನಿ, ಬೆಚ್ಚಿ ಬಿದ್ದ ಮಂಚು ಲಕ್ಷ್ಮಿ ; ಆಮೇಲೆ ಏನಾಯ್ತು..?
ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ.. ಈ ಕಾರಣಕ್ಕೆ ಅನೇಕರು ಇಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ಅಭಿಮಾನಿಯಾಗಿದ್ದಾರೆ. ಅಭಿಮಾನಿಗಳಿಂದ ಬಿರುದುಗಳನ್ನ ಪಡೆಯುವ ಕಲಾವಿದರು ಅಭಿಮಾನಿಗಳಿಗೆ ತಾವೇ ವಿಶೇಷ ಬಿರುದುಗಳನ್ನೂ ನೀಡಿದ್ದಾರೆ. ಸದ್ಯಕ್ಕೆ ಪಕ್ಕದ ಆಂಧ್ರದಲ್ಲಿ ಇದೇ ಅಭಿಮಾನದಿಂದ ಮಂಚು ಲಕ್ಷ್ಮೀ ಗಲಿಬಲಿಗೊಂಡಿದ್ದಾರೆ. ಗಾಬರಿ ಬಿದ್ದಿದ್ದಾರೆ.
ಹೌದು, ಮಂಚು ಲಕ್ಷ್ಮೀ.. ಟಾಲಿವುಡ್ ನ ಬಹುಮುಖ ಪ್ರತಿಭೆ. ತನ್ನ ಅಭಿನಯ ಹಾಗೂ ಅಂದ ಚೆಂದದಿಂದನೇ ಅನೇಕರ ಹೃದಯವನ್ನ ಗೆದ್ದ ಮಂಚು ಲಕ್ಷ್ಮೀ ಸಾರ್ವಜನಿಕವಾಗಿ ಕಣ್ಣಿಗೆ ಬಿದ್ದು ಅನೇಕ ದಿನಗಳಾಗಿತ್ತು. ಯಾಕೆಂದರೆ ಥಳಕು ಬಳುಕಿನ ಪ್ರಪಂಚದಿಂದ ಸ್ವಲ್ಪ ಅಂತರವನ್ನ ಕಾಪಾಡಿಕೊಂಡಿದ್ದ ಮಂಚು ಲಕ್ಷ್ಮೀ, ಸಮಾಜ ಸೇವೆಯಲ್ಲಿ ತಲ್ಲೀನರಾಗಿದ್ದರು. ಟೀಚ್ ಫಾರ್ ಚೇಂಜ್ ಎಂಬ ಚಾರಿಟಿಯ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಲವು ಬೆಂಬಲ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಇಂಥ ಮಂಚು ಲಕ್ಷ್ಮೀ ಅಭಿನಯದ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರದ ಹೆಸರು ಆದಿ ಪರ್ವಂ. ಈ ಚಿತ್ರದಲ್ಲಿ ಮಂಚು ಲಕ್ಷ್ಮೀ ಅವರೆ ಪ್ರಮುಖ ಕೇಂದ್ರ ಬಿಂದು. ಇಡೀ ಕಥೆ ಇವರ ಸುತ್ತವೇ ಸುತ್ತುತ್ತೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನ ಹೈದ್ರಾಬಾದ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಸಹಜವಾಗಿ ಬಹುದಿನಗಳ ನಂತರ ಚಿತ್ರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಕಾರಣ ಮಂಚು ಲಕ್ಷ್ಮೀ ಸಿಕ್ಕಾಪಟ್ಟೆ ಎಕ್ಸಾಯಟ್ ಆಗಿದ್ದರು. ಚಿತ್ರದ ಬಗ್ಗೆ ಮಾತನಾಡಲು ಮುಂದೆ ಬಂದರು. ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಅಭಿಮಾನಿ ವೇದಿಕೆಯನ್ನೇರಿದ್ದಾನೆ. ಹಿಂದೆ ಮುಂದೆ ನೋಡದೇ ಸೀದಾ ಮಂಚು ಲಕ್ಷ್ಮೀಯ ಪಾದಕ್ಕೇರಗಿದ್ದಾನೆ. ಅಭಿಮಾನಿಯ ಈ ವರ್ತನೆಯನ್ನ ನಿರೀಕ್ಷೆ ಮಾಡದ ಮಂಚು ಲಕ್ಷ್ಮೀ ಅಭಿಮಾನಿ ಕಾಲಿಗೆ ಬೀಳುತ್ತಿದ್ದಂತೆ ಗಲಿಬಿಲಿಗೊಂಡು ಹಿಂದೆ ಸರಿದಿದ್ದಾರೆ.
ಆ ನಂತರ ಅವರ ಅಂಗರಕ್ಷಕರು ಬಂದು ಆ ಅಭಿಮಾನಿಯನ್ನ ಮೇಲೆತ್ತಿ ಕೆಳಗಿಳಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿ ಆ ನಂತರ ಕಣ್ಣೀರನ್ನೂ ಹಾಕಿದ್ದಾನೆ. ಇದನ್ನ ಗಮನಿಸಿರುವ ಮಂಚು ಲಕ್ಷ್ಮೀ ಕಾರ್ಯಕ್ರಮ ಮುಕ್ತಾಯವಾದ ನಂತರ ಅಭಿಮಾನಿಯನ್ನ ಕರೆದು ಫೋಟೋವನ್ನ ಕ್ಲಿಕಿಸಿಕೊಂಡಿದ್ದಾರೆ. ಅಭಿಮಾನಿಯ ವಿವರವನ್ನೂ ಪಡೆದು ಚಿತ್ರದ ವಿಶೇಷ ಪ್ರದರ್ಶನಕ್ಕೆ ಆಹ್ವಾನ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಸದ್ಯಕ್ಕೆ ಅಭಿಮಾನಕ್ಕೆ ಕೈಗನ್ನಡಿ ಹಿಡಿಯುವಂತೆ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಥರೇವಾರಿ ಕಮೆಂಟ್ ಗಳು ಹರಿದು ಬರ್ತಿವೆ. ಕೆಲವರು ಈ ಅಭಿಮಾನಿಗೆ ವೀರ ಅಭಿಮಾನಿ ಪಟ್ಟವನ್ನ ಕಟ್ಟಿದ್ದರೆ, ಇನ್ನೂ ಕೆಲವರು ಅಲ್ಲಿ ಏನ್ ನಡೆಯುತ್ತಿದೆ ಎಂಬ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ. ಬಹುತೇಕರು ಈ ವಿಡಿಯೋಗೆ ಮಜವಾದ ಕಮೆಂಟ್ ಗಳನ್ನೂ ಕೂಡ ಹಾಕಿದ್ದಾರೆ.
ಅಂದ್ಹಾಗೇ ಆದಿ ಪರ್ವಂ ಕೇವಲ ತೆಲುಗು ಚಿತ್ರವಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಇದು. ಕನ್ನಡದಲ್ಲಿ ಆದಿ ಪರ್ವ ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನೂ ವಿಶೇಷ ಅಂದರೆ ಈ ಚಿತ್ರದ ನಿರ್ದೇಶಕ ಸಂಜೀವ್ ಕುಮಾರ್ ಮೆಗೋಟಿ ಕನ್ನಡಿಗರು. ಪೂಜಾ ಗಾಂಧಿ ಅಭಿನಯದ "ಆಪ್ತ", "ದಂಡು", "ಕ್ಯೂ" ಚಿತ್ರಗಳನ್ನ ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು. ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಚಿತ್ರರಂಗದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ 5 ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ತೆರೆಗೆ ಬರಲಿದೆ.


Click it and Unblock the Notifications











