ರಾಜಕೀಯದ ಅಖಾಡಕ್ಕೆ ಖ್ಯಾತ ಹೀರೋ ಪತ್ನಿ ಎಂಟ್ರಿ ; ಖುದ್ದು ಘೋಷಿಸಿದ ನಟ - ಪಕ್ಷ ಯಾವುದು ?
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಇಷ್ಟೇ ಅಲ್ಲ ವಿಜಯ್ ಅವರ ಐತಿಹಾಸಿಕ ಸಾಧನೆ ಕೂಡ ಕಣ್ಮುಂದೆಯೇ ಇದೆ.
ಇನ್ನು ತಮಿಳುನಾಡಿನಲ್ಲಿ ವಿಜಯ್ ಗೆದ್ದಿದ್ದೇ ತಡ ಇಲ್ಲಿಯವರೆಗೆ ಹಲವರ ಮನದಲ್ಲಿದ್ದ ಸುಪ್ತವಾದ ಬಯಕೆಯೊಂದು ಮತ್ತೆ ಚಿಗುರೊಡೆದಿದೆ. ಚಿತ್ರರಂಗದಲ್ಲಿ ಹಲವರಿಗೆ ಈಗ ರಾಜಕೀಯದ ಮೇಲೆ ಮತ್ತೆ ಒಲವು ಮೂಡಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಕ್ಕದ ಆಂಧ್ರ ಪ್ರದೇಶದಲ್ಲಿ ರಾಜಕೀಯ ಬೆಳವಣಿಗೆ ನಡೆದಿದ್ದು ಮುಂಬರುವ ಚುನಾವಣೆಯಲ್ಲಿ ತಮ್ಮ ಪತ್ನಿ ಭೂಮಾ ಮೌನಿಕಾ ಸ್ಫರ್ಧಿಸಲಿದ್ದಾರೆ ಎಂದು ತೆಲುಗಿನ ಖ್ಯಾತ ನಟ ಮಂಚು ಮನೋಜ್ ಘೋಷಿಸಿದ್ದಾರೆ.

ಹೌದು, ನಾಳೆ (ಮೇ 20) ಮಂಚು ಮನೋಜ್ ಅವರ ಜನ್ಮದಿನ. ಈ ಹಿನ್ನೆಲೆ ಸಮಾಜ ಸೇವೆ ಮಾಡಲು ಅಣಿಯಾಗಿರುವ ಮಂಚು ಮನೋಜ್ ''ಐಕ್ಯ ಧೈರ್ಯ ಸೇನಾ ಸಮಿತಿ'' ಎಂಬ ಟ್ರಸ್ಟ್ನ ಸ್ಥಾಪಿಸಿದ್ದಾರೆ.
ತಮ್ಮ ಈ ಮಹತ್ತರ ಯೋಜನೆಯ ಕುರಿತು ಮಾತನಾಡಲು ಮಾಧ್ಯಮದವರ ಮುಂದೆ ಬಂದಿದ್ದ ಮಂಚು ಮನೋಜ್, ''ಐಕ್ಯ ಧೈರ್ಯ ಸೇನಾ ಸಮಿತಿ'' ಯಾವುದೇ ರಾಜಕೀಯ ಪಕ್ಷವಲ್ಲ ಬದಲಿಗೆ ಇದೊಂದು ಸಾರ್ವಜನಿಕ ಟ್ರಸ್ಟ್ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳ ದತ್ತು, ರಕ್ತದಾನ ಮತ್ತು ಇತರ ಸಾಮಾಜಿಕ ಸೇವೆಗಳನ್ನು ನಾವು ಈ ಟ್ರಸ್ಟ್ ಮೂಲಕ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿರುವ ಮಂಚು ಮನೋಜ್, ಮುಂಬರುವ ಚುನಾವಣೆಯಲ್ಲಿ ಪತ್ನಿ ಭೂಮಾ ಮೌನಿಕಾ ರಾಜಕೀಯದ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಮಂಚು ಮನೋಜ್ ಅವರ ಈ ಹೇಳಿಕೆಯಿಂದ ಸದ್ಯ ಆಂಧ್ರ ಮತ್ತು ತೆಲುಗು ಉದ್ಯಮದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಇನ್ನೂ ಭೂಮಾ ಮೌನಿಕಾ ಅವರ ರಕ್ತದಲ್ಲಿಯೇ ರಾಜಕೀಯ ಇದೆ. ಇವರ ತಂದೆ ಭೂಮಾ ನಾಗಿರೆಡ್ಡಿ ಮತ್ತು ತಾಯಿ ಶೋಭಾ ನಾಗಿರೆಡ್ಡಿ ರಾಜಕೀಯದಲ್ಲಿಯೇ ಬೆಳೆದವರು. ಗುರುತಿಸಿಕೊಂಡವರು. ವೈಎಸ್ಆರ್ ಕಾಂಗ್ರೆಸ್, ಟಿಡಿಪಿಯಲ್ಲಿ ಪ್ರಮುಖ ಪಾತ್ರಗಳನ್ನು ಇವರು ಇಬ್ಬರು ನಿರ್ವಹಿಸಿದ್ದಾರೆ.

ಇವರು ಮಾತ್ರವಲ್ಲ ಭೂಮಾ ಮೌನಿಕಾ ಅವರ ಸಹೋದರಿ ಭೂಮಾ ಅಖಿಲಪ್ರಿಯಾ ಕೂಡ ಈಗಾಗಲೇ ರಾಜಕೀಯದಲ್ಲಿದ್ದಾರೆ. ಟಿಡಿಪಿ ಶಾಸಕಿಯಾಗಿದ್ದಾರೆ. ಈಗ ಭೂಮಾ ಮೌನಿಕಾ ಕೂಡ ರಾಜಕೀಯಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆ ಹಲವರಲ್ಲಿ ಕುತೂಹಲ ಮನೆ ಮಾಡಿದೆ. ಮಂಚು ಮನೋಜ್ ಅವರ ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ಇದೆ.
ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಭೂಮಾ ಮೌನಿಕಾ ?
ಮಂಚು ಮನೋಜ್ ತಮ್ಮ ಪತ್ನಿಯ ರಾಜಕೀಯ ರಂಗ ಪ್ರವೇಶದ ಕುರಿತು ಮಾತನಾಡಿದ ಬೆನ್ನಲ್ಲೇ, ಭೂಮಾ ಮೌನಿಕಾ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ರಾಜಕೀಯದ ಪಡಸಾಲೆಯಲ್ಲಿ ಕೂಡ ಈ ಕುರಿತು ಚರ್ಚೆ ನಡೆಯುತ್ತಿದೆ.
ಯಾಕೆಂದರೆ ಮಂಚು ಮನೋಜ್ ಅವರ ಕುಟುಂಬ ವೈಎಸ್ ಜಗನ್ ಮೋಹನ್ ರೆಡ್ಡಿಗೆ ತುಂಬಾನೇ ಆಪ್ತ. ಅದೇ ಮತ್ತೊಂದು ಕಡೆ ಭೂಮಾ ಕುಟುಂಬ ಚಂದ್ರಬಾಬು ನಾಯ್ಡು ಅವರ ಟಿಡಿಪಿಗೆ ತುಂಬಾನೇ ಹತ್ತಿರ. ಇನ್ನು ಇದರ ನಡುವೆ ಈ ಹಿಂದೆ ಪವನ್ ಕಲ್ಯಾಣ್ ಅವರ ''ಜನಸೇನಾ ಪಕ್ಷ''ವನ್ನು ಮಂಚು ಮನೋಜ್ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆ ಭೂಮಾ ಮೌನಿಕಾ ಯಾವ ಪಕ್ಷದ ಜೊತೆ ಕೈ ಜೋಡಿಸುತ್ತಾರೆ..? ಯಾವ ಪಕ್ಷದಿಂದ ಇವರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications