'ಬೇಡರ ಕಣ್ಣಪ್ಪ' ರೀಮೆಕ್ ತೆಲುಗಿನ 'ಕಣ್ಣಪ್ಪ' ಟೀಸರ್ ಹೇಗಿದೆ? ಮತ್ತೊಂದು 'ಆದಿಪುರುಷ್' ಅಂತಿರೋದ್ಯಾಕೆ?
ಡಾ. ರಾಜ್ಕುಮಾರ್ ನಟನೆಯ 'ಬೇಡರ ಕಣ್ಣಪ್ಪ' ಸಿನಿಮಾ ಇತ್ತೀಚೆಗೆ 70 ವರ್ಷ ಪೂರೈಸಿತ್ತು. ನಾಟಕವಾಗಿ ಬಹಳ ಜನಪ್ರಿಯವಾಗಿದ್ದ ಕಣ್ಣಪ್ಪನ ಕಥೆಯನ್ನು ಸಿನಿಮಾ ಮಾಡಿ ಯಶಸ್ಸು ಸಾಧಿಸಿದ್ದರು. ಬಳಿಕ ತೆಲುಗಿಗೆ ಈ ಸಿನಿಮಾ ರೀಮೆಕ್ ಆಗಿತ್ತು. ಕನ್ನಡದಲ್ಲಿ ಮತ್ತೆ 'ಶಿವಮೆಚ್ಚಿನ ಕಣ್ಣಪ್ಪ' ಆಗಿ ಹೆಚ್ಚು ಕಮ್ಮಿ ಅದೇ ಕಥೆ ತೆರೆಗೆ ಬಂದಿತ್ತು.
ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಮ್ಮೆ ಆ ಕಥೆಯನ್ನು ತೆರೆಗೆ ತರಲಾಗುತ್ತದೆ. ತೆಲುಗಿನಲ್ಲಿ ಮಂಚು ವಿಷ್ಣು ಹೀರೊ ಆಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ಕುಮಾರ್ ರೀತಿಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಈ ಹಿಂದೆ 'ಆದಿಪುರುಷ್' ಸಿನಿಮಾ ಇದೇ ರೀತಿ ನಿರಾಸೆ ಮೂಡಿಸಿತ್ತು. ರಾಮಾಯಣದ ಕಥೆಯನ್ನು ಇವತ್ತಿನ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ಕಟ್ಟಿಕೊಡುವ ಚಿತ್ರತಂಡದ ಪ್ರಯತ್ನ ವಿಫಲವಾಗಿತ್ತು. 'ಕಣ್ಣಪ್ಪ' ಚಿತ್ರದ ಟೀಸರ್ ನೋಡಿದವರಿಗೂ ನೈಜತೆಗಿಂತ ಬಹಳ ದೂರವಾಗಿ ಕಥೆಯನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಮುಖೇಶ್ ಕುಮಾರ್ ಸಿಂಗ್ ಈ ಭಕ್ತಿ ಪ್ರಧಾನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಪ್ರಸಿದ್ಧನಾದವನು ಕಣ್ಣಪ್ಪ. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಕೃಪೆಗೆ ಪಾತ್ರನಾದವನು. ಶ್ರೀಕಾಳಹಸ್ತಿಯಲ್ಲಿ ಕಣ್ಣಪ್ಪ ಜೀವನ ಸಾಗಿಸಿದ್ದನು ಎಂದು ಕಾವ್ಯಗಳಲ್ಲಿ ಹೇಳಲಾಗಿದೆ. ನಾಸ್ತಿಕನೂ ಆಗಿದ್ದ ಮುಗ್ಧ ಬೇಡ ದಿಣ್ಣ ಮುಂದೆ ಮಹಾನ್ ಶಿವಭಕ್ತನಾದ ಕಥೆಯಿತು. ಆದರೆ ಕಣ್ಣಪ್ಪ ಚಿತ್ರವನ್ನು ಸಂಪೂರ್ಣವಾಗಿ ನ್ಯೂಜಿಲೆಂಡ್ ಕಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ವಾಸ್ತವ ಕಥೆಗೆ ಸಿನಿಮಾ ಬಹಳ ದೂರ ಇರುವಂತೆ ಕಾಣುತ್ತಿದೆ.
ಯಾವುದೇ ಕೋನದಲ್ಲೂ ಬೇಡರ ಕಣ್ಣಪ್ಪನ ಟೀಸರ್ ಕನೆಕ್ಟ್ ಆಗುತ್ತಿದೆ. ಬಹಳ ಅದ್ಧೂರಿಯಾಗಿ ತೋರಿಸಿದ ಮಾತ್ರಕ್ಕೆ ವಾಸ್ತವ ಚಿತ್ರಣ ಕಾಣಿಸದಿದ್ದರೆ ಹೇಗೆ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರನ್ನು ಬಳಸಿಕೊಂಡು ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಆದರೆ ಕಾಳಹಸ್ತಿಯ ದಿಣ್ಣ ಹಾಲಿವುಡ್ ವೈಕಿಂಗ್ಸ್ನ ನೆನಪಿಸುತ್ತಿರುವುದು ವಿಪರ್ಯಾಸ. ಕೆಲವರು ಇದು ಕಣ್ಣಪ್ಪನ ಜೀವನಧರಿಸಿ ಸಿನಿಮಾ ರೀತಿ ಕಾಣುತ್ತಿಲ್ಲ ಯಾವುದೇ ಹಿಂದಿ ಪೌರಾಣಿಕ ಧಾರಾವಾಹಿಯನ್ನು ನೆನಪಿಸುತ್ತಿದೆ ಎನ್ನುತ್ತಿದ್ದಾರೆ.

ಶಿವನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿದ್ದಾರೆ. ನಂದಿಯಾಗಿ ಪ್ರಭಾಸ್ ನಟಿಸಿದ್ದಾರೆ ಎನ್ನಲಾಗ್ತಿದ್ದು ಬರೀ ಸಣ್ಣ ಝಲಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. ಇಡೀ ಟೀಸರ್ನಲ್ಲಿ ಪ್ರಭಾಸ್ ಎಂಟ್ರಿ ಹೈಲೆಟ್ ಎನ್ನುವಂತಾಗಿದೆ. ಇನ್ನುಳಿದಂತೆ ಬೇಡರ ಗುಂಪಿನ ನಾಯಕನ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿರುವಂತೆ ಕಾಣುತ್ತಿದೆ. ಕಣ್ಣಿಗೆ ಹಬ್ಬ ಎನಿಸುವಂತೆ ಇರುವ ಟೀಸರ್ ಗಮನ ಸೆಳೆದರೂ ಕಣ್ಣಪ್ಪನ ಕಥೆಗೆ ಕನೆಕ್ಟ್ ಆಗುತ್ತಿಲ್ಲ ಎನ್ನುವ ಟೀಕೆ ವ್ಯಕ್ಯವಾಗುತ್ತಿದೆ.
ಮಂಚು ವಿಷ್ಣು ತಂದೆ ಮೋಹನ್ ಬಾಬು 'ಕಣ್ಣಪ್ಪ' ಚಿತ್ರವನ್ನು ನಿರ್ಮಿಸುತ್ತಿದ್ದಾರ. ಸದ್ಯ ರಾಮೋಜಿ ಫಿಲ್ಮ್ಸಿಟಿಯಲ್ಲಿ ಸೆಟ್ ಹಾಕಿ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ. 'ಕಣ್ಣಪ್ಪ' ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಛಾಯಾಗ್ರಹಣವಿದೆ. ಈ ವರ್ಷವೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೀತಿದೆ.


Click it and Unblock the Notifications











