ಹಣದಾಸೆ ; 10 ಕೋಟಿ ಪಂಗನಾಮ - ವಕೀಲನ ವಿರುದ್ಧ ದೂರು ದಾಖಲಿಸಿದ ರಾಬರ್ಟ್ ಗಾಯಕಿ ಮಂಗ್ಲಿ
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.
ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಪೀಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಮಂಗ್ಲಿ ಸುತ್ತ ಮುತ್ತ ಎದ್ದಿರುವ ವಿವಾದದ ಹುತ್ತ.

ಹೌದು. ಮಂಗ್ಲಿ.. ಪಕ್ಕದ ಮನೆಯ ಪ್ರಖ್ಯಾತ ಗಾಯಕಿ. ದರ್ಶನ್ ಅಭಿನಯದ ''ರಾಬರ್ಟ್'' ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಮಂಗ್ಲಿ ತಮ್ಮ ಹಾಡುಗಳಿಗಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು.
ಗ್ರಾಮ ದೇವತೆಗೆ ಅವಮಾನ ಮಾಡಿದ ವಿಚಾರ ಇರಬಹುದು, ಗಾಂಜಾ ಅಥವಾ ಡ್ರಗ್ಸ್ ವಿವಾದ ಇರಬಹುದು, ಇಷ್ಟೆಲ್ಲಾ ಯಾಕೆ ಮೊನ್ನೆ ಮೊನ್ನೆ ಪ್ರೇಮ್ ಅವರ ಕುಖ್ಯಾತ ಹಾಡು ''ಸರ್ಕೆ ಚುನ್ನರ್ ತೇರಿ ಸರ್ಕೆ'' ಇರಬಹುದು.
ಹೀಗೆ ಸದಾ ವಿವಾದದ ಕೇಂದ್ರ ಬಿಂದುವಾದ ಮಂಗ್ಲಿ ಹೆಸರು ಮೊನ್ನೆ ಮೊನ್ನೆಯಷ್ಟೇ 150 ಕೋಟಿ ಹಗರಣದಲ್ಲಿ ಕೇಳಿ ಬಂದಿತ್ತು. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮಂಗ್ಲಿ ತನ್ನ ಸಹೋದರ ಶಿವ ಜೊತೆ ಸೇರಿ ಹಲವಾರು ಜನರಿಗೆ ಪಂಗನಾಮ ಹಾಕಿದ್ದಾರೆ ಎನ್ನುವ ಸುದ್ದಿ ಆಂಧ್ರದೆಲ್ಲೆಡೆ ಸಂಚಲನ ಸೃಷ್ಟಿಸಿತ್ತು. ಮಂಗ್ಲಿ ವಿರುದ್ಧ ಆಕ್ರೋಶದ ಅಲೆ ಕೂಡ ಎದ್ದಿತ್ತು.
ತನ್ನ ವಿರುದ್ಧ ಎದ್ದ ಈ ಆಕ್ರೋಶದ ಅಲೆ ಕಂಡು ಬೆದರಿದ್ದ ಮಂಗ್ಲಿ, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಣ ನೀಡಿದ್ದರು. ನಗೂ ಅಥವಾ ನನ್ನ ಕುಟುಂಬಕ್ಕೂ ಈ ಮೈಕ್ರೋ ಫೈನಾನ್ಸ್ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ನನ್ನ ಬಗ್ಗೆ ಪ್ರಸಾರವಾಗುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದಿದ್ದರು. ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದ ಮಂಗ್ಲಿ ಸಂಗೀತ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ವ್ಯವಹಾರಗಳಿಲ್ಲ ಎಂದಿದ್ದರು.

ಆದರೆ, ಅದ್ಯಾಕೋ ಮಂಗ್ಲಿ ಮಾತಿನ ಮೇಲೆ ಮೈಕ್ರೋ ಫೈನಾನ್ಸ್ ವ್ಯವಹಾರದಲ್ಲಿ ಮೋಸ ಹೋದವರಿಗೆ ಇನ್ನೂ ನಂಬಿಕೆ ಬಂದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಣ ಕಳೆದುಕೊಂಡ ಸಂತ್ರಸ್ತರು ವಕೀಲರಾದ ಸುಬ್ಬಾರಾವ್ ಅವರನ್ನು ಸಂಪರ್ಕ ಮಾಡಿದ್ದರು.
ಈ ಹಿನ್ನೆಲೆ ತಮ್ಮನ್ನೂ ಸೇರಿದಂತೆ ಹಲವು ಹೂಡಿಕೆದಾರರಿಗೆ ಮಂಗ್ಲಿ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಡ್ವೊಕೇಟ್ ಸುಬ್ಬಾರಾವ್ ಮಂಗ್ಲಿ ಮತ್ತು ಇತರರ ವಿರುದ್ಧ ಆರೋಪ ಮಾಡಿದ್ದರು.
ಇಷ್ಟೇ ಅಲ್ಲ ಮೈಕ್ರೋ ಫೈನಾನ್ಸ್ ಹಾಗೂ ಬಿಸಿನೆಸ್ ಹೂಡಿಕೆ ಸ್ಕೀಮ್ಗೆ ಸೇರುವಂತೆ, ಹೆಚ್ಚಿನ ಬಡ್ಡಿ ನೀಡುವುದಾಗಿ ಆಸೆ ತೋರಿಸಿ, ರಿಯಲ್ ಎಸ್ಟೇಟ್, ಟ್ರೇಡಿಂಗ್, ಇಂಪೋರ್ಟ್, ಎಕ್ಸ್ಪೋರ್ಟ್ಗಳಲ್ಲಿ ಹೂಡಿಕೆ ಮಾಡಿದರೆ ಅಧಿಕ ದುಡ್ಡು ಕೊಡಿಸುವುದಾಗಿ ಆಮಿಷವೊಡ್ಡಿ ಸುಮಾರು 100 ರಿಂದ 150 ಮಂದಿಗೆ ವಂಚಿಸಿದ್ದಾರೆ ಎಂದು ಇಂದು (ಏಪ್ರಿಲ್ 11)ಹೈದರಾಬಾದ್ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಹಣ ಮರಳಿ ಕೊಡುವಂತೆ ಕೇಳಿದರೆ ಮಂಗ್ಲಿ ಮತ್ತು ಅವರ ಸಹೋದರ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದರು.
ಸುಬ್ಬರಾವ್ ಅವರ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಮಂಗ್ಲಿ ಮತ್ತು ಅವರ ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು ಖುದ್ದು ಮಂಗ್ಲಿ ತಮ್ಮ ವಿರುದ್ಧ ದೂರು ಸಲ್ಲಿಸಿರುವ ವಕೀಲರ ವಿರುದ್ಧ ತಿರುಗಿ ಬಿದ್ದಿದ್ಧಾರೆ. ಪ್ರತಿ ದೂರನ್ನು ಕೂಡ ಸಲ್ಲಿಸಿದ್ಧಾರೆ.
ವಕೀಲ ಸುಬ್ಬಾರಾವ್ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪವನ್ನು ಮಾಡಿರುವ ಮಂಗ್ಲಿ, ಸುಬ್ಬಾರಾವ್ ದೂರು ನೀಡುವ ಮೊದಲೇ ತಾವು ನಾರ್ಸಿಂಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ಹೇಳಿದ್ದಾರೆ. ಹಣದಾಸೆಗೆ ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ, ನನ್ನ ಹೆಸರಿಗೆ ಮಸಿ ಬಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿರುವ ಮಂಗ್ಲಿ ಆ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ಧಾರೆ.
ಸುಬ್ಬಾರಾವ್ ತಮ್ಮ ಮೇಲೆ ₹150 ಕೋಟಿ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿರುವ ಮಂಗ್ಲಿ, ಮಾರ್ಚ್ 21ರಂದು ಸುಬ್ಬಾರಾವ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ತನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ. ನನಗೆ ಅಪಮಾನ ಮಾಡುವುದಲ್ಲದೇ ಭೇಟಿ ಮಾಡಲು ನಿರಾಕರಿಸಿದರೆ ಪ್ರತಿಷ್ಠೆ ಮತ್ತು ಗೌರವವನ್ನು ಮಣ್ಣು ಪಾಲು ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ಹೇಳಿದ್ದಾರೆ. ನನಗೆ ಸಂಬಂಧವೇ ಇಲ್ಲದ ಕರೆನ್ಸಿ ನೋಟುಗಳಿರುವ ವೀಡಿಯೊವನ್ನು ತೋರಿಸಿ ಬೆದರಿಸಿದ್ದಾರೆ ಎಂದಿದ್ದಾರೆ.
ಈ ಘಟನೆಗಳಿಂದಾಗಿ ನನ್ನ ಕುಟುಂಬದ ಸದಸ್ಯರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಿರುವ ಮಂಗ್ಲಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಕೂಡ ಪೊಲೀಸರ ಬಳಿ ಮಾಡಿದ್ದಾರೆ. ಸದ್ಯ ಹೀಗೆ ದೂರು-ಪ್ರತಿ ದೂರು ದಾಖಲಾಗಿದ್ದು ಇಬ್ಬರಲ್ಲಿ ಯಾರು ಸರಿ..? ಯಾರು ತಪ್ಪು..? ಎನ್ನುವುದು ವಿಚಾರಣೆಯ ನಂತರ ಗೊತ್ತಾಗಲಿದೆ.


Click it and Unblock the Notifications











