Allu Arjun; ಇವ್ನು ಹೀರೊನಾ? ಕನ್ನಡೀಲಿ ಮುಖ ನೋಡ್ಕೊಳ್ಳೊಕೆ ಹೇಳಿ ಅಂದಿದ್ರು
ಚಿತ್ರರಂಗದಲ್ಲಿ ಅವತ್ತಿಗೂ ಇವತ್ತಿಗೂ ಹೀರೊ ಆಗಿ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಏನೇ ಸಿನಿಮಾ ಹಿನ್ನೆಲೆ ಇದ್ದರೂ ಸ್ವತಂ ಪರಿಶ್ರಮದಿಂದ ಮಾತ್ರ ಇಲ್ಲಿ ಉಳಿಯಲು ಸಾಧ್ಯ. ಯಾವುದೇ ಬ್ಯಾಕ್ಗ್ರೌಂಡ್ ಮೊದಲ ಸಿನಿಮಾ ರಿಲೀಸ್ವರೆಗೆ ಸಹಾಯ ಮಾಡಬಹುದು. ಸಿನಿಮಾ ತೆರೆಗೆ ಬಂದಮೇಲೆ ಅಸಲಿ ಕಥೆ ಶುರುವಾಗೋದು.
ಟಾಲಿವುಡ್ ನಟ ಅಲ್ಲು ಅರ್ಜುನ್ ಇವತ್ತು ಸ್ಟೈಲಿಶ್ ಸ್ಟಾರ್, ಐಕಾನ್ ಸ್ಟಾರ ಅಂತೆಲ್ಲಾ ಬಿರುದು ಪಡೆದುಕೊಂಡಿದ್ದಾರೆ. ಆದರೆ ಒಂದು ಕಾಲದಲ್ಲಿ ಬನ್ನಿ ಲುಕ್ ನೋಡಿ ಮೂಗು ಮುರಿದವರೇ ಹೆಚ್ಚು. ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಎನ್ನುವ ಕಾರಣಕ್ಕೆ ಹೀರೊ ಆಗಿಬಿಟ್ಟಿದ್ದಾನೆ. ಅವ್ನ ಮುಖ ನೋಡಿದ್ರೆ ಹೀರೊ ತರ ಇದ್ದಾನಾ? ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಇವತ್ತಿಗೂ ಬೇರೆ ನಟರ ಅಭಿಮಾನಿಗಳು ಅಲ್ಲು ಅರ್ಜುನ್ನ ಟ್ರೋಲ್ ಮಾಡೋಕೆ 'ಗಂಗೋತ್ರಿ' ಚಿತ್ರದ ಫೋಟೊಗಳನ್ನು ಬಳಸುತ್ತಾರೆ. ಆಗಿನ್ನು ಅಲ್ಲು ಅರ್ಜುನ್ ವಯಸ್ಸು 21 ವರ್ಷ. ಮೀಸೆ ಇಲ್ಲದೇ ಟೀನೇಜ್ ಹುಡುಗನ ರೀತಿ ಕಾಣಿಸಿಕೊಂಡಿದ್ದರು. ಸನ್ನಿವೇಶವೊಂದರಲ್ಲಿ ಲಂಗಾ ದಾವಣಿ ತೊಟ್ಟು ಹುಡುಗಿ ರೀತಿಯೂ ದರ್ಶನ ಕೊಟ್ಟಿದ್ದರು. ಹಾಗಾಗಿ ಲುಕ್ಸ್ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
ಅಲ್ಲು ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ಖ್ಯಾತ ತೆಲುಗು ಹಾಸ್ಯನಟರಾಗಿದ್ದರು. ತಂದೆ ಅಲ್ಲು ಅರವಿಂದ್ ದೊಡ್ಡ ನಿರ್ಮಾಪಕರು. ಇನ್ನು ಸೋದರ ಮಾವ ಚಿರಂಜೀವಿ. ಹಾಗಾಗಿ ಚಿತ್ರರಂಗಕ್ಕೆ ಬರೋದು ಕಷ್ಟವೇನು ಆಗಲಿಲ್ಲ. ತಂದೆ ಅಲ್ಲು ಅರವಿಂದ್ 'ಗಂಗೋತ್ರಿ' ಸಿನಿಮಾ ನಿರ್ಮಿಸಿದ್ದರು. ಕೆ. ರಾಘವೇಂದ್ರ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 'ಗಂಗೋತ್ರಿ' ಸಿನಿಮಾ ಹಿಟ್ ಆದರೂ ಬನ್ನಿನ ಹೀರೊ ಬಹುತೇಕರು ಸ್ವೀಕರಿಸಲಿಲ್ಲ.
ತಂದೆ ದುಡ್ಡು, ಮಾವನ ಹೆಸರು ಏನೋ ಚಿತ್ರರಂಗಕ್ಕೆ ಬಂದುಬಿಟ್ಟ. ಕಥೆ, ಸಾಂಗ್ಸ್ ಚೆನ್ನಾಗಿತ್ತು. ಸಿನಿಮಾ ಹಿಟ್ ಆಗಿಬಿಡ್ತು. ಮುಂದೆ ನೋಡೋಣ ಎಂದಿದ್ದರು. ಆದರೆ ಮರುವರ್ಷ ಬಂದ 'ಆರ್ಯ' ಚಿತ್ರದಲ್ಲಿ ಸ್ಟೈಲಿಶ್ ಲುಕ್ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿ ಆಗಿ ಮೋಡಿ ಮಾಡಿದರು. ಸಿನಿಮಾ ಹಿಟ್ ಆಯಿತು. ಇನ್ನು ಚಿಕ್ಕಂದಿನಿಂದಲೂ ಡ್ಯಾನ್ಸ್ ಮಾಡುವುದರಲ್ಲಿ ಬನ್ನಿ ನಿಸ್ಸೀಮರು.
'ಗಂಗೋತ್ರಿ' ಚಿತ್ರದಲ್ಲಿ ನಟಿಸುವ ಮುನ್ನ ಮಾವ ಚಿರಂಜೀವಿ ಚಿತ್ರಗಳಲ್ಲಿ ಬಾಲನಟನಾಗಿ ಮಿಂಚಿದ್ದರು. 'ಡ್ಯಾಡಿ' ಚಿತ್ರದಲ್ಲಿ ಡ್ಯಾನ್ಸ್ ಕೂಡ ಮಾಡಿ ರಂಜಿಸಿದ್ದರು. 'ಆರ್ಯ' ಬಳಿಕ ಬನ್ನಿ ಹಿಂತಿರುಗಿ ನೋಡಲೇಯಿಲ್ಲ. 'ಬನ್ನಿ', 'ಹ್ಯಾಪಿ', 'ದೇಶಮುದುರು' ಎಲ್ಲಾ ಸಿನಿಮಾಗಳನ್ನು ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡು ಸ್ಟೈಲಿಶ್ ಸ್ಟಾರ್ ಬಿರುದು ಪಡೆದುಕೊಂಡರು.

'ಜುಲಾಯಿ', 'ರೇಸುಗುರಂ', 'ಸರೈನೋಡು', 'ಅಲಾವೈಕುಂಠಪುರಂ' ರೀತಿಯ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಲ್ಲು ಅರ್ಜುನ್ ಸದ್ದು ಮಾಡಿದರು. 'ಪುಷ್ಪ' ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದರು. ಪುಷ್ಪರಾಜ್ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯೂ ಮುಡಿಗೇರಿತು. ಮಾವ ಚಿರಂಜೀವಿ ಪ್ರಭಾವಳಿಯಿಂದ ಹೊರ ಬಂದು ತನ್ನದೇ ಪರಿಶ್ರಮದಿಂದ ಅಲ್ಲು ಅರ್ಜುನ್ ತಮ್ಮನ್ನು ತಾವು ಸಾಬೀತು ಮಾಡಿಕೊಂಡರು.
ಲುಕ್ಸ್ ಬಗ್ಗೆ ಮಾತನಾಡಿದವರ ಮುಂದೆಯೇ ಸ್ಟೈಲಿಶ್ ಸ್ಟಾರ್ ಆಗಿ ಬೆಳೆದುನಿಂತರು. ಅಪಾರ ಅಭಿಮಾನಿ ಬಳಗ ಸಂಪಾದಿಸಿದರು. ಡ್ಯಾನ್ಸ್ ವಿಚಾರದಲ್ಲಿ ಯಾವತ್ತೂ ಪ್ರೇಕ್ಷಕರನ್ನು ಬನ್ನಿ ನಿರಾಸೆಗೊಳಿಸಲಿಲ್ಲ. ಈ ಹಿಂದೆ ನಟಿ ಅನಸೂಯ ಕೂಡ 'ಗಂಗೋತ್ರಿ' ಚಿತ್ರದಲ್ಲಿ ಅಲ್ಲು ಅರ್ಜುನ್ ಲುಕ್ಸ್ ಬಗ್ಗೆ ಮಾಡಿದ್ದ ಕಾಮೆಂಟ್ ವೈರಲ್ ಆಗಿತ್ತು.
"ಅಲ್ಲು ಅರ್ಜುನ್ 'ಗಂಗೋತ್ರಿ' ಚಿತ್ರದಲ್ಲಿ ನಟಿಸಿ ಹೀರೊ ಆದಾಗ ಬೇಸರವಾಗಿತ್ತು. ಮೆಗಾ ಫ್ಯಾಮಿಲಿ ಅಂದ್ರೆ ಹೀರೊ ಆಗಿಬಿಡ್ತಾರಾ? ಆ ಹಾಡಿನಲ್ಲಿ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡರು. ನನ್ನಿಂದ ನೋಡೋಕೆ ಆಗಲಿಲ್ಲ" ಎಂದಿದ್ದರು. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಅಲ್ಲು ಅರ್ಜುನ್ ಸೆಲ್ಫ್ ಮೇಡ್ ಸ್ಟಾರ್. ಆದರೆ 'ಗಂಗೋತ್ರಿ' ಚಿತ್ರದಲ್ಲಿ ಅವರನ್ನು ನೋಡಿ ಹಾಗೆ ಅನ್ನಿಸಿತ್ತು. ಆದರೆ ಬಳಿಕ ಅವರ ಲುಕ್ಸ್, ನಟನೆ ಅಂದ್ರೆ ಇಷ್ಟ ಎಂದಿದ್ದರು. ಸದ್ಯ 'ಪುಷ್ಪ'-2 ಚಿತ್ರದಲ್ಲಿ ಬನ್ನಿ ನಟಿಸುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications










