Don't Miss!
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರ ನಡುವೆ ನಡೆಯಲಿದೆ ಯುದ್ಧ
ಸಂಕ್ರಾಂತಿ ಹಬ್ಬ ತೆಲುಗು ರಾಜ್ಯಗಳಲ್ಲಿ ಬಹಳ ಮುಖ್ಯವಾದ ಹಬ್ಬ. ಉಳಿದೆಲ್ಲ ಹಬ್ಬಗಳಿಗಿಂತಲೂ ಸಂಕ್ರಾಂತಿಗೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಹೆಚ್ಚಿನ ಮಹತ್ವ.
ತೆಲುಗು ಚಿತ್ರರಂಗದ ಜನರಿಗೆ ಸಹ ಸಂಕ್ರಾಂತಿ ಬಹಳ ಪ್ರಿಯವಾದ ಹಬ್ಬ. ಸಂಕ್ರಾಂತಿ ಹಬ್ಬದಂದೇ ಹಲವು ಸ್ಟಾರ್ ನಟರು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಹಲವು ಸ್ಟಾರ್ ನಟರು ಸಂಕ್ರಾಂತಿ ಷೆಡ್ಯೂಲ್ ನೋಡಿಕೊಂಡು ಸಿನಿಮಾಗಳನ್ನು ಒಪ್ಪಿಕೊಳ್ಳುವ ಪರಿಪಾಟವೂ ಇದೆ. ಸಿನಿಮಾ ಹಿಟ್ ಆದರೆ ಪತ್ರಿಕೆಗಳಲ್ಲಿ 'ಸಂಕ್ರಾಂತಿ ಹಿಟ್' ಎಂಬ ಪ್ರತ್ಯೇಕ ಹೆಡ್ಲೈನ್ ತಪ್ಪದೇ ಮೂಡುತ್ತದೆ.
ತೆಲುಗು ಸಿನಿಮಾ ಉದ್ಯಮದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರು ಹಲವರಿದ್ದಾರೆ. 2020 ರಿಂದಲೂ ಕೊರೊನಾ ಕಾರಣದಿಂದ ಯಾವುದೇ ಮುಖ್ಯ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ, ಮೂರನೇ ಅಲೆಯ ಭೀತಿಯಲ್ಲಿ ಈ ವರ್ಷವೂ ಚಿತ್ರಮಂದಿರಗಳು ಸುಗಮವಾಗಿ ಕಾರ್ಯ ನಿರ್ವಹಿಸುವುದು ಅನುಮಾನವೇ. ಹಾಗಾಗಿ ಬಹುತೇಕರು ತಮ್ಮ ಸಿನಿಮಾಗಳನ್ನು ಸಂಕ್ರಾಂತಿಗೆ ಅಂದರೆ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಹಾಗಾಗಿ ಮುಂದಿನ ಸಂಕ್ರಾಂತಿಗೆ ತೆಲುಗು ರಾಜ್ಯಗಳಲ್ಲಿ ಸ್ಟಾರ್ ನಟರು ಪೈಪೋಟಿಗೆ ಇಳಿಯುವುದು ಪಕ್ಕಾ ಆಗಿದೆ.
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾವು ಮುಂದಿನ ವರ್ಷ ಜನವರಿ 13 ರಂದು ತೆರೆಗೆ ಬರುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಇಂದಷ್ಟೆ ಚಿತ್ರತಂಡ ಘೋಷಿಸಿದೆ. ಸಂಕ್ರಾಂತಿ ಹಬ್ಬ ಅದೇ ಸಮಯ ಇರುವ ಕಾರಣ ಸಿನಿಮಾವನ್ನು ಜನವರಿ 13ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಿಂದೆ ಮಹೇಶ್ ಬಾಬು ನಟನೆಯ 'ಒಕ್ಕಡು', 'ಅರ್ಜುನ್', 'ಅತಡು' ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಿದ್ದವು ಮತ್ತು ಸೂಪರ್-ಡೂಪರ್ ಹಿಟ್ ಆಗಿದ್ದವು. ಜನವರಿಯಲ್ಲಿ ಬಿಡುಗಡೆ ಆಗುತ್ತಿರುವ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬಾಬು ಅವರದ್ದು ಜೂಜು ಅಡ್ಡೆ ನಡೆಸುವವನ ಪಾತ್ರ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ. ಇದೇ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ.
ಜನವರಿ 14ಕ್ಕೆ ಬಿಡುಗಡೆ ಆಗಲಿದೆ 'ರಾಧೆ-ಶ್ಯಾಮ್' ಸಿನಿಮಾ
ಇನ್ನು ಸೂಪರ್ ಸ್ಟಾರ್ ನಟ ಪ್ರಭಾಸ್ ನಟಿಸಿರುವ 'ರಾಧೆ-ಶ್ಯಾಮ್' ಸಿನಿಮಾವು ಮುಂದಿನ ವರ್ಷ ಜನವರಿ 14ಕ್ಕೆ ಬಿಡುಗಡೆ ಆಗಲಿದೆ. 'ರಾಧೆ-ಶ್ಯಾಮ್' ಸಿನಿಮಾ ತಂಡ ಸಹ ತಮ್ಮ ಸಿನಿಮಾವನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುವ ಯೋಜನೆಯೊಂದಿಗೆ ಬಿಡುಗಡೆ ದಿನಾಂಕ ಘೋಷಿಸಿದೆ. 'ರಾಧೆ-ಶ್ಯಾಮ್' ಚಿತ್ರತಂಡವು ಬಿಡುಗಡೆ ದಿನಾಂಕವನ್ನು ನಿನ್ನೆಯಷ್ಟೆ ಘೋಷಿಸಿದ್ದರು. ಇನ್ನು ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾವು 1970ರ ಕಾಲದಲ್ಲಿ ಯುರೋಪ್ ದೇಶಗಳಲ್ಲಿ ನಡೆವ ಅಪ್ಪಟ ಪ್ರೇಮಕತೆಯಾಗಿದೆ. ಸಿನಿಮಾದಲ್ಲಿ ಒಂದೂ ಫೈಟ್ ದೃಶ್ಯಗಳು ಇಲ್ಲವೆನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.
ಪವನ್ ಕಲ್ಯಾಣ್ ಸಿನಿಮಾವು ಅದೇ ಸಮಯಕ್ಕೆ
'ವಕೀಲ್ ಸಾಬ್' ಸಿನಿಮಾ ಮೂಲಕ ತನ್ನ ಕ್ರೇಜ್ ಪ್ರದರ್ಶನ ಮಾಡಿರುವ ನಟ ಪವನ್ ಕಲ್ಯಾಣ್ರ ಮುಂದಿನ ಸಿನಿಮಾವು ಜನವರಿ ತಿಂಗಳಲ್ಲಿಯೇ ತೆರೆಗೆ ಬರಲಿದೆ. ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದು, ಇದೇ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಸಹ ಇದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಸಿನಿಮಾವು ಜನವರಿ ತಿಂಗಳಿನಲ್ಲಿಯೇ ತೆರೆಗೆ ಬರುವ ಸಕಲ ಸಾಧ್ಯತೆ ಇದೆ.
ವೆಂಕಟೇಶ್ ನಟನೆಯ 'ಏಫ್ 3'
ವೆಂಕಟೇಶ್, ವರುಣ್ ತೇಜ ನಟನೆಯ 'ಎಫ್ 3' ಕಾಮಿಡಿ ಸಿನಿಮಾ ಸಹ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗುವ ಸಕಲ ಸಾಧ್ಯತೆ ಇದೆ. ಈ ಹಿಂದೆ ಹಲವು ಬಾರಿ ವೆಂಕಟೇಶ್ ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿವೆ. ವೆಂಕಟೇಶ್ ನಟನೆಯ 'ಸಂಕ್ರಾಂತಿ' ಹೆಸರಿನ ಸಿನಿಮಾವೊಂದು ಸಂಕ್ರಾಂತಿಗೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಚಿತ್ರೀಕರಣವಾಗುತ್ತಿರುವ 'ಎಫ್ 3' ಸಿನಿಮಾ 'ಎಫ್ 2' ಸಿನಿಮಾದ ಮುಂದುವರೆದ ಭಾಗ.
ವಿಜಯ್ ನಟನೆಯ ಬೀಸ್ಟ್
ತಮಿಳಿನ ವಿಜಯ್ ನಟನೆಯ ಹೊಸ ಸಿನಿಮಾ 'ಬೀಸ್ಟ್' ಸಹ ಜನವರಿ ತಿಂಗಳಲ್ಲಿಯೇ ತೆರೆಗೆ ಬರುವ ಸಕಲ ಸಾಧ್ಯತೆ ಇದೆ. ಈ ಸಿನಿಮಾ ಜನವರಿಯಲ್ಲಿಯೇ ಚಿತ್ರಮಂದಿರಕ್ಕೆ ಬಂದರೆ ಎಲ್ಲ ಸಿನಿಮಾಗಳಿಗೆ ದೊಡ್ಡ ಪೈಪೋಟಿಯನ್ನು ನೀಡಲಿದೆ. ತೆಲುಗು ರಾಜ್ಯಗಳಲ್ಲಿಯೂ ವಿಜಯ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇರುವ ಕಾರಣ ತೆಲುಗು ಸ್ಟಾರ್ ನಟರು ಆತಂಕಿತರಾಗಿದ್ದಾರೆ.
ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇತ್ತು
'ರಾಧೆ-ಶ್ಯಾಮ್' ಸಿನಿಮಾವು ಇದೇ ವರ್ಷ ಬಿಡುಗಡೆ ಆಗುವ ಸಕಲ ನಿರೀಕ್ಷೆ ಇತ್ತು. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿ ಕೇವಲ ಹತ್ತು ದಿನದ ಚಿತ್ರೀಕರಣವಷ್ಟೆ ಬಾಕಿ ಇದೆ ಎಂದು ಚಿತ್ರದ ನಟಿ ಪೂಜೆ ಹೆಗ್ಡೆ ಅವರೇ ಹೇಳಿದ್ದರು. ಆದರೆ ಒಂದೇ ಬಾರಿ ಸಿನಿಮಾದ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಹಾಕಿರುವುದು ಪ್ರಭಾಸ್ ಅಭಿಮಾನಿಗಳನ್ನೂ ಗೊಂದಲಕ್ಕೆ ನೂಕಿದೆ . ಇನ್ನು 'ಸರ್ಕಾರು ವಾರಿ ಪಾಟ' ಸಿನಿಮಾವು ಕೆಲವು ದಿನಗಳ ಹಿಂದಷ್ಟೆ ದುಬೈನಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದ್ದು, ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ. ಸಿನಿಮಾದ ಚಿತ್ರೀಕರಣದ ಕೆಲವು ಫೊಟೊಗಳು, ವಿಡಿಯೋಗಳು ಕೆಲವು ದಿನಗಳ ಹಿಂದಷ್ಟೆ ಲೀಕ್ ಆಗಿದ್ದವು. ಇದು ಮಹೇಶ್ ಬಾಬು ಅವರನ್ನು ಬಹುವಾಗಿ ಕೆರಳಿಸಿತ್ತು.
ಅಭಿಮಾನಿಗಳ ನಡುವೆ ಗಲಭೆ ಸಾಧ್ಯತೆ
ಸೂಪರ್ ಸ್ಟಾರ್ ನಟರಾದ ಇವರ ಸಿನಿಮಾಗಳು ಏಕಕಾಲಕ್ಕೆ ಚಿತ್ರಮಂದಿರಕ್ಕೆ ಬರುತ್ತಿರವುದು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ತೆಲುಗು ಸಿನಿಮಾ ಪ್ರೇಮಿಗಳಿಗೆ ಈ ಬಾರಿಯ ಸಂಕ್ರಾಂತಿ ಇನ್ನಷ್ಟು ರಂಗೇರಲಿದೆ. ಈ ಸ್ಟಾರ್ ನಟರ ಸಿನಿಮಾಗಳಲ್ಲಿ ಯಾರ ಸಿನಿಮಾಕ್ಕೆ ಅಭಿಮಾನಿಗಳು ಹೆಚ್ಚಿನ ಆಧರ ತೋರಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ರೀತಿ ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ಚಿತ್ರಮಂದಿರಕ್ಕೆ ಬಂದಾಗ ಅಭಿಮಾನಿಗಳ ನಡುವೆ ಜಗಳಗಳಾಗಿ ಹೊಡೆದಾಡಿ, ಆಸ್ತಿ ನಷ್ಟವಾದ ಹಲವು ಉದಾರಣೆಗಳು ತೆಲುಗು ರಾಜ್ಯಗಳಲ್ಲಿ ಇವೆ.