ಟಾಕ್ಸಿಕ್-ಧುರಂಧರ್ ಕ್ರೇಜ್ಗೆ 'ಪವರ್' ಬ್ರೇಕ್ ? ಯಶ್-ರಣವೀರ್ ಸಿಂಗ್ಗೆ ಮುಳ್ಳಾಗುತ್ತಾರಾ ಪವನ್ ಕಲ್ಯಾಣ್ ?
ಪವನ್ ಕಲ್ಯಾಣ್ ಈಗ ಕೇವಲ ಆಕ್ಟರ್ ಅಲ್ಲ ಬದಲಿಗೆ ಫುಲ್ ಟೈಮ್ ರಾಜಕಾರಣಿ ಕೂಡ ಹೌದು. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಕಳೆದೊಂದು ವರ್ಷದಿಂದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಜನಸೇನಾ ಪಕ್ಷದ ನಾಯಕ. ಇನ್ನೂ.. ಸಾಮಾನ್ಯವಾಗಿ ಸ್ಟಾರ್ ಆದವರು ರಾಜಕಾರಣದತ್ತ ಹೊರಳಿದರೆ ಅವರ.. ಚಿತ್ರರಂಗದ ಬದುಕು ಮುಗಿದಂತೆಯೇ. ಹಲವರು ರಾಜಕೀಯಕ್ಕೆ ಹೋದ ನಂತರ ನಿವೃತ್ತಿ ಪಡೆದಿದ್ದು ಇದೆ. ನಿವೃತ್ತಿಯನ್ನು ಮೊದಲ ಘೋಷಿಸಿ ರಾಜಕೀಯದ ಚದುರಂಗವಾಡಲು ಮುಂದಾಗಿದ್ದು ಇದೆ.
ಆದರೆ.. ಪವನ್ ಕಲ್ಯಾಣ್ ಇದಕ್ಕೆ ತದ್ವಿರುದ್ದ. ರಾಜಕಾರಣದಲ್ಲಿ ಕಳೆದು ಹೋಗಿದ್ದರು ಕೂಡ ಪವನ್ ಕಲ್ಯಾಣ್ಗೆ ಬಣ್ಣದ ಮೇಲಿನ ಮೋಹ ಕಡಿಮೆಯಾಗಿಲ್ಲ. ಇಷ್ಟೇ ಅಲ್ಲ ಇವತ್ತು ಕೂಡ ಆಂಧ್ರದ ಪವರ್ ಸ್ಟಾರ್ನ ಪವರ್ ಚಿತ್ರರಂಗದಲ್ಲಿ ಕಡಿಮೆಯಾಗಿಲ್ಲ. ಪವನ್ ಕಲ್ಯಾಣ್ ಅವರನ್ನು ರಾಜಕೀಯದ ಪಡಸಾಲೆಯಲ್ಲಿ ನೋಡುವುದಕ್ಕಿಂತ ಬೆಳ್ಳಿತೆರೆಯ ಮೇಲೆಯೇ ನೋಡಲು ಜನ ಇಷ್ಟ ಪಡುತ್ತಾರೆ. ಈ ವಿಚಾರ ಪವನ್ ಕಲ್ಯಾಣ್ಗೂ ಗೊತ್ತು.

ಹೀಗಾಗಿಯೇ ರಾಜಕೀಯ ಮತ್ತು ಚಿತ್ರರಂಗ ಎಂಬ ಎರಡು ದೋಣಿಯ ಮೇಲೆ ಕಾಲಿಟ್ಟಿರುವ ಪವನ್ ಕಲ್ಯಾಣ್ ಕಳೆದ ವರ್ಷ ಎರಡು ಬಾರಿ ಬೆಳ್ಳಿತೆರೆಯಲ್ಲಿ ಪ್ರತ್ಯಕ್ಷರಾಗಿದ್ದರು. ಆ ಪೈಕಿ ''ಹರಿಹರ ವೀರಮಲ್ಲು'' ಮಕಾಡೆ ಮಲಗಿದ್ದರೆ ''ಓಜಿ'' ಕೂಡ ಅಂದುಕೊಂಡಂತೆ ವ್ಯಾಪಾರ ಮಾಡಲಿಲ್ಲ. ಹೀಗಿರುವಾಗ ಇದೀಗ ಪವನ್ ಕಲ್ಯಾಣ್ ತಮ್ಮ ''ಉಸ್ತಾದ್ ಭಗತ್ ಸಿಂಗ್''ನ ಪ್ರೇಕ್ಷಕರ ಮಡಿಲಿಗೆ ಹಾಕಲು ಅಣಿಯಾಗಿದ್ದಾರೆ.
ಹೌದು, ''ಉಸ್ತಾದ್ ಭಗತ್ ಸಿಂಗ್''.. ಹೆಚ್ಚು ಕಡಿಮೆ ಮೂರು, ಮೂರುವರೆ ವರ್ಷದ ಹಿಂದಿನ ಚಿತ್ರ. ಪವನ್ ಕಲ್ಯಾಣ್ ರಾಜಕೀಯ ಪ್ರವೇಶದಿಂದ ತೆವಳುತ್ತಾ ಸಾಗಿದ ಈ ಚಿತ್ರ ಈಗ ಕೊನೆಗೂ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಮಾರ್ಚ್ 26ಕ್ಕೆ ''ಉಸ್ತಾದ್ ಭಗತ್ ಸಿಂಗ್'' ಕಣಕ್ಕಿಳಿಯಲಿದ್ದಾನೆ ಎಂದು ಚಿತ್ರತಂಡ ಘೋಷಿಸಿದೆ.
ಆದರೆ.. ಇದರ ಬೆನ್ನಲ್ಲೇ ಇದೀಗ ಪವನ್ ಕಲ್ಯಾಣ್ ಅವರ ಈ ''ಉಸ್ತಾದ್ ಭಗತ್ ಸಿಂಗ್'' ಯಶ್ ಅಭಿನಯದ ''ಟಾಕ್ಸಿಕ್'' ಮತ್ತು ರಣ್ವೀರ್ ಸಿಂಗ್ ಅಭಿನಯದ ''ಧುರಂಧರ್ 2'' ಮೇಲೆ ಪ್ರಭಾವ ಬೀರುತ್ತಾನಾ ಎನ್ನುವ ಚರ್ಚೆ ಶುರುವಾಗಿದೆ.
ಯಾಕೆಂದರೆ.. ದೊಡ್ಡ ಸ್ಟಾರ್ ಗಳ ಸಿನಿಮಾಗಳ ನಡುವೆ ಕೊನೆ ಪಕ್ಷ ಎರಡು ವಾರದ ಅಂತರವಾದರೂ ಇರಬೇಕು. ಆದರೆ ಇಲ್ಲಿ ಕೇವಲ ಒಂದು ವಾರದ ಅಂತರ ಇದೆ. ಸಹಜವಾಗಿ ಇದರಿಂದ ಚಿತ್ರಮಂದಿರದ ಸಂಖ್ಯೆಗಳಲ್ಲಿ ಬದಲಾವಣೆಗಳಾಗುತ್ತವೆ. ಯಾವ ಚಿತ್ರ ನೋಡಬೇಕೆಂದು ಪ್ರೇಕ್ಷಕರು ಗೊಂದಲಕ್ಕೀಡಾಗುವ ಸಾಧ್ಯತೆಯೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತೆಲುಗು ರಾಜ್ಯದಲ್ಲಿ ಪವನ್ ಕಲ್ಯಾಣ್ ಅವರ ವರ್ಚಸ್ಸು ಹೇಗಿದೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ.
ನಿಜಾ. ಯಶ್ ಅಭಿನಯದ ''ಟಾಕ್ಸಿಕ್'' ಮೇಲೆ ಕೇವಲ ಕನ್ನಡಿಗರ ಕಣ್ಣಿಲ್ಲ. ಭಾರತೀಯ ಚಿತ್ರರಂಗದ ಕಣ್ಣಿಲ್ಲ. ವಿಶ್ವದ ಕಣ್ಣಿದೆ. ''ಕೆಜಿಎಫ್'' ನಂತರ ಬೆಳ್ಳಿತೆರೆಯಲ್ಲಿ ಯಶ್ ದರ್ಶನ್ ನೀಡುತ್ತಿರುವ ಹಿನ್ನೆಲೆಯಲ್ಲಿ ತೀವೃವಾದ ಕುತೂಹಲ..ಆತುರ..ಕಾತುರ ಎಲ್ಲವೂ ಅಭಿಮಾನಿಗಳಲ್ಲಿದೆ. ಇನ್ನೂ ''ಧುರಂಧರ್'' ಜ್ವರ 60 ದಿನ ಆದರೂ ಕೂಡ ಕಡಿಮೆಯಾಗಿಲ್ಲ. ಕಡಿಮೆಯಾಗುವ ಲಕ್ಷಣ ಕೂಡ ಕಾಣ್ತಿಲ್ಲ.
ಆದರೂ ಕೇವಲ ಒಂದು ವಾರದ ಅಂತರದಲ್ಲಿ ''ಉಸ್ತಾದ್ ಭಗತ್ ಸಿಂಗ್'' ಬರುತ್ತಿರುವ ಹಿನ್ನೆಲೆ ವ್ಯಾಪಾರ-ವ್ಯವಹಾರ ಹಂಚಿ ಹೋಗುವ ಭಯ ಸದ್ಯ ಟ್ರೇಡ್ ವಿಶ್ಲೇಷಕರನ್ನು ಕಾಡುತ್ತಿದೆ. ಅಂದ್ಹಾಗೇ ಮಾರ್ಚ್ 26ಕ್ಕೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಮ್ ಚರಣ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ''ಪೆದ್ದಿ'' ಬಿಡುಗಡೆಯಾಗಬೇಕಿತ್ತು. ಆದರೆ ಅವಳಿ ಮಕ್ಕಳ ತಂದೆಯಾದ ಖುಷಿಯಲ್ಲಿರುವ ರಾಮ್ ಚರಣ್ ತಮ್ಮ ಚಿಕ್ಕಪ್ಪನಿಗೆ ತಮ್ಮ ಜಾಗ ಬಿಟ್ಟು ಕೊಟ್ಟಿದ್ದಾರೆ.
ಒಟ್ನಲ್ಲಿ ಸದ್ಯ ಮಾರ್ಚ್ನಲ್ಲಿ ಕೇವಲ ಒಂದು ವಾರದ ಅಂತರದಲ್ಲಿ 3 ಚಿತ್ರಗಳು ಬಿಡುಗಡೆಯಾಗುತ್ತಿವೆ. ''ಟಾಕ್ಸಿಕ್'' ಮತ್ತು ''ಧುರಂಧರ್ 2'' ಕ್ರೇಜ್ಗೆ ಪವನ್ ಕಲ್ಯಾಣ್ ಅವರ ''ಉಸ್ತಾದ್ ಭಗತ್ ಸಿಂಗ್'' ಕಡಿವಾಣ ಹಾಕುತ್ತಾ..? ಅಥವಾ ಈ ಎರಡು ಚಿತ್ರಗಳ ಅಬ್ಬರದ ನಡುವೆ ''ಉಸ್ತಾದ್ ಭಗತ್ ಸಿಂಗ್'' ಕಳೆದು ಹೋಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











