'ಕಣ್ಣಪ್ಪ' ಚಿತ್ರದಲ್ಲೂ ಪ್ರಭಾಸ್ ಮದುವೆ ವಿಚಾರ ಪ್ರಸ್ತಾಪ; ಬಿದ್ದು ಬಿದ್ದು ನಗ್ತಿದ್ದಾರೆ ಫ್ಯಾನ್ಸ್
ವಯಸ್ಸು 40 ದಾಟಿದ್ರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮದುವೆ ಆಗಿಲ್ಲ. ಫ್ಯಾನ್ಸ್ ಈ ಬಗ್ಗೆ ಪ್ರಶ್ನೆ ಕೇಳಿ ಕೇಳಿ ಸುಸ್ತಾಗಿದ್ದಾರೆ. ಈ ಹಿಂದೆ ಸಂದರ್ಶನಗಳಲ್ಲಿ ಕೂಡ ಈ ಪ್ರಶ್ನೆ ಎದುರಾಗುತ್ತಿತ್ತು. ಆದಷ್ಟು ಬೇಗ ಮದುವೆ ಎಂದು ಹೇಳಿ ಸುಮ್ಮನಾಗುತ್ತಿದ್ದರು. ಇದೀಗ 'ಕಣ್ಣಪ್ಪ' ಚಿತ್ರದಲ್ಲೂ ಅದೇ ಟಾಪಿಕ್ ಬಂದಿದೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ 'ಕಣ್ಣಪ್ಪ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ತೆಲುಗು ನಟ ಮಂಚು ವಿಷ್ಣು 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸಿದ್ದಾರೆ. ರುದ್ರ ಎಂಬ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. 10-15 ನಿಮಿಷ ಯಂಗ್ ರೆಬಲ್ ಸ್ಟಾರ್ ತೆರೆಮೇಲೆ ದರ್ಶನ ಕೊಟ್ಟಿದ್ದಾರೆ. ರುದ್ರ ಪಾತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಪ್ರಭಾಸ್ಗೋಸ್ಕರ ಸಿನಿಮಾ ನೋಡುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ.

'ಕಣ್ಣಪ್ಪ' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಪ್ರಭಾಸ್ ಎಂಟ್ರಿ ಬಳಿಕ ಸಿನಿಮಾ ಚೆನ್ನಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದೇ ಕಾರಣಕ್ಕೆ ಕೆಲವರು ಇಷ್ಟಪಡುತ್ತಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಅಂಶಗಳು ಇಲ್ಲ. ಎಲ್ಲರಿಗೂ ಗೊತ್ತಿರುವ 'ಕಣ್ಣಪ್ಪ' ಕಥೆಯನ್ನೇ ಕೊಂಚ ವಿಭಿನ್ನವಾಗಿ ಹೇಳುವ ಸಾಹಸ ಮಾಡಲಾಗಿದೆ.
ನಾಸ್ತಿಕ ದಿಣ್ಣ ಶಿವಭಕ್ತ ಕಣ್ಣಪ್ಪನಾಗಿ ಬದಲಾಗುವ ಸನ್ನಿವೇಶದಲ್ಲಿ ರುದ್ರನ ಆಗಮನವಾಗುತ್ತದೆ. ಈ ಸನ್ನಿವೇಶದಲ್ಲಿ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತದೆ. ಆಗ ರುದ್ರ(ಪ್ರಭಾಸ್) ಮಾತನಾಡುತ್ತಾ ಮಡದಿ ಜೊತೆ ಜಗಳ ಮಾಡಿ ಪ್ರಶಾಂತವಾಗಿ ಇರುವವನು ಇಲ್ಲ ಎಂದು ಹೇಳುತ್ತಾನೆ. ಕೂಡಲೇ ದಿಣ್ಣ(ಮಂಚು ವಿಷ್ಣು) "ಚೆನ್ನಾಗಿ ಹೇಳ್ದೆ.. ನಿನಗೆ ಮದುವೆ ಆಗಿದ್ಯಾ? ಎಂದು ಕೇಳುತ್ತಾನೆ. ಅದಕ್ಕೆ "ನನ್ನ ಮದುವೆ ವಿಚಾರ ಯಾಕೆ?" ಎಂದು ರುದ್ರ ಮುಖ ತಿರುಗಿಸುತ್ತಾನೆ. ಬಳಿಕ ದಿಣ್ಣ(ಮಂಚು ವಿಷ್ಣು) ಮದುವೆ ಬಗ್ಗೆ ಕೇಳಿದ್ದಕ್ಕೆ ಮುಗಿಸಿಕೊಂಡೆ. ಮದುವೆ ಆಗಿದ್ರೆ ಗೊತ್ತಾಗುತ್ತಿತ್ತು. ಒಮ್ಮೆ ಸುತ್ತಿಕೊಂಡರೆ ಬಿಡಿಸಲಾಗದ ನಂಟು ಇದು" ಎಂದು ಹೇಳುತ್ತಾನೆ. ಇದನ್ನು ನೋಡಿ ಪ್ರಭಾಸ್ ಫ್ಯಾನ್ಸ್ ಬಿದ್ದು ಬಿದ್ದು ನಗ್ತಿದ್ದಾರೆ.
ಮೇಲ್ನೋಟಕ್ಕೆ ಇದು ದಿಣ್ಣ ಹಾಗೂ ರುದ್ರನ ನಡುವಿನ ಸಂಭಾಷಣೆ ಅನ್ನಿಸಿದ್ದರೂ ಪ್ರಭಾಸ್ಗೆ ಇನ್ನು ಮದುವೆ ಆಗಿಲ್ಲ. ಹಾಗಾಗಿ ಅದಕ್ಕೆ ಲಿಂಕ್ ಮಾಡಿ ಡೈಲಾಗ್ಸ್ ಬರೆದಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಬಾಹುಬಲಿ- 2' ಸಿನಿಮಾ ಮುಗಿದ ಬಳಿಕ ಮದುವೆ ಆಗುತ್ತೇನೆ ಎಂದು ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಆ ಸಿನಿಮಾ ಬಂದೋಗಿ 7 ವರ್ಷ ಕಳೆದರೂ ಪ್ರಭಾಸ್ ಮದುವೆ ಆಗಲಿಲ್ಲ.
ಕೆಲ ನಟಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಅನುಷ್ಕಾ ಶೆಟ್ಟಿ ಅವರನ್ನು ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಸ್ವೀಟಿ ಕೂಡ ಇನ್ನು ಮದುವೆ ಆಗಿಲ್ಲ. ಇಬ್ಬರೂ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿ ಇಬ್ಬರೂ ಸೈಲೆಂಟ್ ಆಗಿದ್ದಾರೆ.
ಸದ್ಯಕ್ಕೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ರಾಜಾಸಾಬ್ ಶೂಟಿಂಗ್ ಮುಗಿಸಿದ್ದಾರೆ. 'ಫೌಜಿ' ಚಿತ್ರೀಕರಣ ನಡೀತಿದೆ. 'ಕಲ್ಕಿ 2898AD'-2 ಹಾಗೂ 'ಸಲಾರ್- 2' ಸಿನಿಮಾಗಳು ಶುರುವಾಗಬೇಕಿದೆ. ಹಾಗಾಗಿ ಸದ್ಯಕ್ಕೆ ಮದುವೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನು 'ಕಣ್ಣಪ್ಪ' ಸಿನಿಮಾ ಮೊದಲ ದಿನ 9 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮುಂದಿನ ಸಿನಿಮಾಗಳಲ್ಲಿ ಬಾಕ್ಸಾಫೀಸ್ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











