ಹೀನಾಯ ಸೋಲು ಕಂಡ 'ಆಚಾರ್ಯ': ಆಗಿರುವ ನಷ್ಟ ಎಷ್ಟು?
ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಮೂರು ವರ್ಷಗಳ ನಂತರ ಚಿರಂಜೀವಿ ಸಿನಿಮಾ ಒಂದು ತೆರೆಗೆ ಬಂದಿತ್ತು. ಅದೂ ಅಲ್ಲದೆ ಚಿರಂಜೀವಿ ಜೊತೆಗೆ ರಾಮ್ ಚರಣ್ ತೇಜ ಸಹ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ ಮೆಗಾ ಕುಟುಂಬದ ಅಭಿಮಾನಿಗಳು ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು.
ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಧಾರುಣವಾಗಿ ನೆಲಕಚ್ಚಿದೆ. ಸಿನಿಮಾ ಅದ್ಯಾವ ಪರಿ ಸೋತಿದೆ ಎಂದರೆ ಸಿನಿಮಾಕ್ಕೆ ಬಂಡವಾಳ ಹಾಕಿದ್ದ ವಿತರಕರಿಗೆ ಅರ್ಧದಷ್ಟು ಸಹ ಹಣ ವಾಪಸ್ಸಾಗಿಲ್ಲ. ಕರ್ನಾಟಕ ಸೇರಿದಂತೆ, ಆಂಧ್ರ-ತೆಲಂಗಾಣದ ಸಿನಿಮಾ ವಿತರಕರು ತಮಗೆ ನಷ್ಟ ಪರಿಹಾರ ನೀಡಬೇಕೆಂದು ನಟ ಚಿರಂಜೀವಿ ಹಾಗೂ ನಿರ್ಮಾಪಕರೂ ಆಗಿರುವ ರಾಮ್ ಚರಣ್ಗೆ ಪತ್ರ ಬರೆದಿದ್ದಾರೆ.
'ಆಚಾರ್ಯ' ಸಿನಿಮಾದ್ದು ಸಾಮಾನ್ಯ ಸೋಲಲ್ಲ. ನಟ ಚಿರಂಜೀವಿ ವೃತ್ತಿ ಜೀವನದಲ್ಲಿಯೇ ಅತಿ ಧಾರುಣ ಸೋಲು ಎನ್ನಲಾಗುತ್ತಿದೆ. ಸಿನಿಮಾದ ಬಂಡವಾಳ ಹಾಗೂ ಹಿಂತಿರುಗಿನ ಮೊತ್ತದ ಅನುಗುಣದಲ್ಲಿ ಈ ಸಿನಿಮಾ ಇತ್ತೀಚಿನ ಕೆಲ ವರ್ಷಗಳಲ್ಲಿ ಅತಿ ಕಡಿಮೆ ಮೊತ್ತ ಕಲೆಕ್ಷನ್ ಮಾಡಿದ ಸ್ಟಾರ್ ನಟನ ಸಿನಿಮಾ ಎನಿಸಿಕೊಂಡಿದೆ.

ಹಾಕಿರುವ ಬಂಡವಾಳದ ಅರ್ಧದಷ್ಟೂ ವಾಪಸ್ಸಾಗಿಲ್ಲ!
ಸಿನಿಮಾದ ಒಟ್ಟು ಬಂಡವಾಳ 132 ಕೋಟಿ ರುಪಾಯಿಗಳು ಆದರೆ ಈ ವರೆಗೆ ವಿತರಕರಿಗೆ ಒಟ್ಟಾರೆಯಾಗಿ ವಾಪಸ್ಸು ಬಂದಿರುವುದು ಬಹಳ ಕಡಿಮೆ. ಇನ್ನೂ 85 ಕೋಟಿ ರುಪಾಯಿಗಳು ನಷ್ಟದಲ್ಲಿಯೇ ಸಿನಿಮಾ ನಡೆಯುತ್ತಿದೆ. ಅಂದರೆ ಹಾಕಿದ ಬಂಡವಾಳ ವಾಪಸ್ಸಾಗಬೇಕೆಂದರೆ ಇನ್ನೂ 85 ಕೋಟಿಗಳಷ್ಟು ಸಿನಿಮಾ ಕಲೆಕ್ಷನ್ ಮಾಡಬೇಕಿದೆ. ಆದರೆ ಇದು ಅಸಾಧ್ಯ. ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿದ್ದು, ಈ ಶುಕ್ರವಾರದ ವೇಳೆಗೆ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆಗಲಿದೆ. ಆ ಜಾಗಕ್ಕೆ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಬಂದು ಕೂರಲಿದೆ.

ಮಾಡಿರುವ ಕಲೆಕ್ಷನ್ ಎಷ್ಟು?
ಸಿನಿಮಾ ಬಿಡುಗಡೆ ಆದಾಗಿನಿಂದ ಈಗಿನ ವರೆಗೆ ಆಂಧ್ರ ತೆಲಂಗಾಣದಲ್ಲಿ ಮಾಡಿರುವ ಕಲೆಕ್ಷನ್ ಕೇವಲ 40.67 ಕೋಟಿ. ಕರ್ನಾಟಕ ಮತ್ತು ಭಾರತದ ಇತರೆ ರಾಜ್ಯಗಳಲ್ಲಿ ಮಾಡಿರುವ ಕಲೆಕ್ಷನ್ ಕೇವಲ 4.75 ಕೋಟಿ. ವಿದೇಶಗಳಲ್ಲಿ ಮಾಡಿರುವ ಕಲೆಕ್ಷನ್ 4.75 ಕೋಟಿ ರುಪಾಯಿಗಳಷ್ಟೆ. 132 ಕೋಟಿ ಬಜೆಟ್ನ ಈ ಸಿನಿಮಾ ಈವರೆಗೆ ಗಳಿಸಿರುವುದು 50 ಕೋಟಿಗೂ ಕಡಿಮೆ.

ವಿತರಕರು ಭಾರಿ ನಷ್ಟ ಅನುಭವಿಸಿದ್ದಾರೆ
'ಆಚಾರ್ಯ' ಸಿನಿಮಾದಿಂದಾಗಿ ವಿತರಕರು ಭಾರಿ ನಷ್ಟ ಅನುಭವಿಸಿದ್ದಾರೆ. ಆದರೆ ನಿರ್ಮಾಪಕ ರಾಮ್ ಚರಣ್ ತೇಜ ಸೇಫ್ ಆಗಿದ್ದಾರೆ. ಅವರು ಮೊದಲೇ ಸಿನಿಮಾವನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿದ್ದಾರೆ. ಒಟಿಟಿ ಹಕ್ಕು, ಸ್ಯಾಟಲೈಟ್ ಹಕ್ಕುಗಳನ್ನು ಸಹ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿ ಲಾಭವನ್ನೇ ಗಳಿಸಿದ್ದಾರೆ ರಾಮ್ ಚರಣ್, ಆದರೆ ಇಲ್ಲಿ ನಷ್ಟ ಹೋಗಿರುವುದು ವಿತರಕರು ಮಾತ್ರ.

ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಚಿರು
ನಟ ಚಿರಂಜೀವಿ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಲಯಾಳಂನ 'ಲೂಸಿಫರ್' ಸಿನಿಮಾದ ರೀಮೇಕ್ 'ಗಾಡ್ ಫಾದರ್'ನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳು ಸಿನಿಮಾದ ರೀಮೇಕ್ 'ಭೋಲಾ ಶಂಕರ್'ನಲ್ಲಿ ನಟಿಸುತ್ತಿದ್ದಾರೆ. ಬಳಿಕ ಕೆ.ಎಸ್.ರವೀಂದ್ರ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.


Click it and Unblock the Notifications











