ಸಂಕ್ರಾಂತಿ ರೇಸ್ಗೆ ಚಿರಂಜೀವಿ ಎಂಟ್ರಿ; 'ಪೊಂಗಲ್ ವಿನ್ನರ್' ಪಟ್ಟಕ್ಕಾಗಿ ನಾಲ್ವರು ಸ್ಟಾರ್ಗಳ ನಡುವೆ ಕಾಳಗ!
ದಸರಾ ಹಾಗೂ ಸಂಕ್ರಾಂತಿ ಬಂತೆಂದರೆ ಸಾಕು ತೆಲುಗು ಹಾಗೂ ತಮಿಳು ನಾಡು ಬಾಕ್ಸ್ ಆಫೀಸ್ನಲ್ಲಿ ಸ್ಟಾರ್ ನಟರುಗಳ ನಡುವೆ ಮೆಗಾ ಕದನ ನಡೆಯೇ ತೀರುತ್ತದೆ. ಸಾಲು ಸಾಲು ರಜೆಗಳು ಸಿಕ್ಕಿ, ಹಬ್ಬದ ಸಂಭ್ರಮದಲ್ಲಿ ಮನೆ ಮಂದಿಯೆಲ್ಲಾ ಚಿತ್ರಮಂದಿರಗಳ ಕಡೆ ಹೆಜ್ಜೆ ಇಡುವ ಕಾರಣ ದಸರಾ ಹಾಗೂ ಸಂಕ್ರಾಂತಿ ಹಬ್ಬಗಳಂದು ತೆಲುಗು ಹಾಗೂ ತಮಿಳು ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ತಿಂಗಳುಗಳಿಗೂ ಮುನ್ನವೇ ಸಿದ್ಧರಾಗಿಬಿಡ್ತಾರೆ.
ಇನ್ನು ಪ್ರತೀ ವರ್ಷವೂ ಈ ಹಬ್ಬಗಳಂದು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದು, ಹಬ್ಬದ ವಿನ್ನರ್ ಟೈಟಲ್ಗಾಗಿ ಪೈಪೋಟಿ ನಡೆಸುವುದು ಕಾಮನ್ ಆಗಿದ್ದು, ಈ ವರ್ಷದ ದಸರಾ ಹಬ್ಬದ ಸಮಯದಲ್ಲೂ ಸಹ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಗಾಡ್ಫಾದರ್ ಹಾಗೂ ಕಿಂಗ್ ನಾಗಾರ್ಜುನ ನಟನೆಯ ಘೋಸ್ಟ್ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಇದೀಗ ಮುಂಬರುವ ಜನವರಿ ತಿಂಗಳಿನಲ್ಲಿ ಬರಲಿರುವ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿರುವ ಚಿತ್ರಗಳ ನಡುವೆ ಏರ್ಪಡಲಿರುವ ಚಿತ್ರಗಳ ನಡುವಿನ ಪೈಪೋಟಿಯ ಕಡೆ ಸಿನಿ ಪ್ರೇಕ್ಷಕರ ಚಿತ್ತ ನೆಟ್ಟಿದ್ದು, ಸೌತ್ನ ನಾಲ್ವರು ಸ್ಟಾರ್ ನಟರ ಚಿತ್ರಗಳು ಸಂಕ್ರಾಂತಿಯಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ. ಸದ್ಯ ಈ ನಾಲ್ಕೂ ಚಿತ್ರಗಳ ಬಿಡುಗಡೆ ದಿನಾಂಕ ಬಹುತೇಕ ಘೋಷಣೆಗೊಂಡಿದ್ದು, ಪೊಂಗಲ್ ವಿನ್ನರ್ ಯಾರಾಗಬಹುದು ಎಂಬ ಲೆಕ್ಕಾಚಾರ ಸೌತ್ ಸಿನಿ ದುನಿಯಾದಲ್ಲಿ ಏರ್ಪಟ್ಟಿದೆ.

ಮೆಗಾಸ್ಟಾರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರಲಿರುವ ಚಿತ್ರಗಳು ಯಾವುವು ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಚಿತ್ರದ ಬಿಡುಗಡೆಯ ದಿನಾಂಕ ಮಾತ್ರ ಖಚಿತವಾಗಿರಲಿಲ್ಲ. ಆದರೆ ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಗೊಂಡಿದ್ದು, ಜನವರಿ 13ರಂದು ವಾಲ್ತೇರು ವೀರಯ್ಯ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಮೂಲಕ ಸಂಕ್ರಾಂತಿ ರೇಸ್ಗೆ ಮೆಗಾಸ್ಟಾರ್ ಚಿರಂಜೀವಿ ಸಹ ಎಂಟ್ರಿ ಕೊಟ್ಟಿದ್ದಾರೆ.

ನಾಲ್ವರ ಪೈಕಿ ಪೊಂಗಲ್ ವಿನ್ನರ್ ಯಾರು?
ತೆಲುಗು ಹಾಗೂ ತಮಿಳು ಸೇರಿದಂತೆ ಒಟ್ಟು ನಾಲ್ವರು ಸ್ಟಾರ್ ನಟರ ಚಿತ್ರಗಳು ಸಂಕ್ರಾಂತಿ ಬಿಡುಗಡೆಗೆ ಸಿದ್ಧವಾಗಿದ್ದು ಈ ಪೈಕಿ ಯಾವ ಚಿತ್ರ ಪೊಂಗಲ್ ವಿನ್ನರ್ ಆಗಲಿದೆ ಎಂಬ ಕುತೂಹಲ ಮೂಡಿದೆ. ಜನವರಿ 13ರಂದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಬಿಡುಗಡೆಯಾದರೆ, ಇದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 12ರಂದು ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ನಟನೆಯ ವೀರ ಸಿಂಹ ರೆಡ್ಡಿ ಚಿತ್ರ ಬಿಡುಗಡೆಯಾಗಲಿದೆ. ಅತ್ತ ಕಾಲಿವುಡ್ನ ದಿಗ್ಗಜ ನಟರಾದ ವಿಜಯ್ ಅಭಿನಯದ ವಾರಿಸು ಹಾಗೂ ಅಜಿತ್ ಕುಮಾರ್ ಅಭಿನಯದ ತುನಿವು ನಡುವೆ ಸಂಕ್ರಾಂತಿ ವಾರ್ ಏರ್ಪಡಲಿದೆ.

9 ವರ್ಷಗಳ ಬಳಿಕ ವಿಜಯ್ ಹಾಗೂ ಅಜಿತ್ ನಡುವೆ ಪೈಪೋಟಿ
ಇನ್ನು ಬರೋಬ್ಬರಿ 9 ವರ್ಷಗಳ ಬಳಿಕ ದಳಪತಿ ವಿಜಯ್ ಹಾಗೂ ತಲಾ ಅಜಿತ್ ನಟನೆಯ ಚಿತ್ರಗಳು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಖಾಮುಖಿಯಾಗಲಿವೆ. ಎರಡೂ ಚಿತ್ರಗಳೂ ಸಹ ಸಂಕ್ರಾಂತಿಗೆ ಚಿತ್ರಮಂದಿರಕ್ಕೆ ಬರಲಿವೆ ಎಂಬುದನ್ನು ಘೋಷಿಸಿದ್ದು, ದಿನಾಂಕವನ್ನು ಘೋಷಿಸುವುದು ಬಾಕಿ ಇದೆ. ಕಳೆದ ಬಾರಿ 2014ರ ಸಂಕ್ರಾಂತಿ ಪ್ರಯುಕ್ತ ವಿಜಯ್ ಅಭಿನಯದ ಜಿಲ್ಲಾ ಹಾಗೂ ಅಜಿತ್ ಅಭಿನಯದ ವೀರಮ್ ಬಿಡುಗಡೆಯಾಗಿ ಮುಖಾಮುಖಿಯಾಗಿದ್ದವು. ಈ ಪೈಕಿ ವೀರಮ್ ಜಯಭೇರಿ ಬಾರಿಸಿತ್ತು ಹಾಗೂ ಜಿಲ್ಲಾ ಸೋಲನ್ನು ಅನುಭವಿಸಿತ್ತು.


Click it and Unblock the Notifications











