ಗೇಟ್ ಮುರಿದ ಪುತ್ರ ಮನೋಜ್, ರಿಪೋರ್ಟರ್ ಮೇಲೆ ಮೈಕ್ನಿಂದ ಮೋಹನ್ ಬಾಬು ಹಲ್ಲೆ
ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು ಹಾಗೂ ಪುತ್ರ ಮನೋಜ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇತ್ತೀಚೆಗೆ ತಂದೆ ಮಗ ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೈದರಾಬಾದ್ನಲ್ಲಿರುವ ಮೋಹನ್ ಬಾಬು ಫಾರ್ಮ್ಹೌಸ್ ಬಳಿ ಭಾರೀ ಹೈಡ್ರಾಮಾ ನಡೆದಿದೆ.
ಮನೋಜ್ ಜೊತೆ ಮಾಧ್ಯಮದವರು ಮೋಹನ್ ಬಾಬು ಮನೆ ಬಳಿ ಧಾವಿಸಿದ್ದಾರೆ. ಈ ವೇಳೆ ತಮ್ಮ ಅಭಿಪ್ರಾಯ ತಿಳಿಸುವಂತೆ ಮೋಹನ್ ಬಾಬು ಕಡೆ ಮಾಧ್ಯಮದವರು ಮೈಕ್ ಹಿಡಿದಿದ್ದಾರೆ. ಕೂಡಲೇ ಆ ಮೈಕ್ ಕಿತ್ತುಕೊಂಡು ಮಾಧ್ಯಮ ಪ್ರತಿನಿಧಿ ಮೇಲೆ ಮೋಹನ್ ಬಾಬು ಹಲ್ಲೆ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ. ಕಳೆದೆರಡು ದಿನಗಳಿಂದ ಮಂಚು ಫ್ಯಾಮಿಲಿ ಜಗಳ ಟಾಲಿವುಡ್ನಲ್ಲಿ ಭಾರೀ ಸದ್ದು ಮಾಡ್ತಿದೆ.

ನಟ ಮೋಹನ್ ಬಾಬುಗೆ ಮೂವರು ಮಕ್ಕಳು. ವಿಷ್ಣು ಹಾಗೂ ಮನೋಜ್ ಜೊತೆ ಮಂಚು ಲಕ್ಷ್ಮಿ ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಆದರೆ ಮನೋಜ್ ತಮ್ಮ ತಂದೆ ಹಾಗೂ ಸಹೋದರನಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಮನೋಜ್ ಎರಡನೇ ಮದುವೆ ಆಗಿದ್ದರು. ಒಲ್ಲದ ಮನಸ್ಸಿನಿಂದಲೇ ಮಂಚು ಫ್ಯಾಮಿಲಿ ಇದನ್ನು ಒಪ್ಪಿಕೊಂಡಿತ್ತು. ಆದರೆ ಆ ಮದುವೆ ಬಳಿಕ ಸಂಘರ್ಷ ಹೆಚ್ಚಾಗಿತ್ತು.
ಖಳ ನಟನಾಗಿ, ನಾಯಕ ನಟನಾಗಿ ಮೋಹನ್ ಬಾಬು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಬಂದ ಆದಾಯದಿಂದ ಸಾಕಷ್ಟು ಆಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಅದೇ ಆಸ್ತಿಗಾಗಿ ಮನೋಜ್ ಹಾಗೂ ವಿಷ್ಣು ನಡುವೆ ತಿಕ್ಕಾಟ ನಡೀತಿದೆ. ವಿಷ್ಣು ಪರ ಮೋಹನ್ ಬಾಬು ನಿಂತಿದ್ದಾರೆ. ಇತ್ತೀಚೆಗೆ ತಮ್ಮ ಆಪ್ತರ ಮೂಲದ ತಂದೆ ಮೋಹನ್ ಬಾಬು ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಮನೋಜ್ ಆರೋಪಿಸಿದ್ದರು.
ಮನೋಜ್ ಆರೋಪದ ಬೆನ್ನಲೇ ಮೋಹನ್ ಬಾಬು ಪೊಲೀಸರಿಗೆ ಪತ್ರ ಬರೆದಿದ್ದರು. ಬಳಿಕ ಆಡಿಯೋ ಕೂಡ ರಿಲೀಸ್ ಮಾಡಿದ್ದರು. ತಮ್ಮ ಮಗಳನ್ನು ಮೋಹನ್ ಬಾಬು ಮನೆಯಲ್ಲಿ ಇಟ್ಟುಕೊಂಡಿದ್ದಾರೆ, ಆಕೆಯನ್ನು ಕಳುಹಿಸಿಕೊಡುತ್ತಿಲ್ಲ ಎಂದು ಮನೋಜ್ ದಂಪತಿ ಆರೋಪಿಸಿದ್ದಾರೆ. ಈ ಬಗ್ಗೆ ಕೇಳಲು ಮನೋಜ್ ತಮ್ಮ ತಂದೆ ಮೋಹನ್ ಬಾಬು ಮನೆಗೆ ಹೋದಾಗ ಭಾರೀ ರಾದ್ದಾಂತ ನಡೆದಿದೆ.
ಮನೋಜ್ ಮನೆ ಒಳಗೆ ಪ್ರವೇಶಿಸಿದಂತೆ ಅವರ ಕಾರನ್ನು ಬೌನ್ಸರ್ಸ್ ತಡೆದಿದ್ದಾರೆ. ಕೂಡಲೇ ಗರಂ ಆಗಿರುವ ಮನೋಜ್ ಗೇಟ್ ಅನ್ನು ಮುರಿದು ಮನೆ ಒಳಗೆ ಪ್ರವೇಶಿಸಿದ್ದಾರೆ. ಅಡ್ಡ ಬಂದ ಸಿಬ್ಬಂದಿ ವಿರುದ್ಧ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಮಾಧ್ಯಮದವರನ್ನು ಹೊರಗಡೆ ಕಳುಹಿಸಿದರು. ಬಳಿಕ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಮನೋಜ್ ಆರೋಪಿಸಿದ್ದಾರೆ. ನಂತರ ಮಾಧ್ಯಮದವರನ್ನು ಒಳಗೆ ಕರೆದರು.
ಅಷ್ಟರಲ್ಲಾಗಲೇ ಮೋಹನ್ ಬಾಬು ಗರಂ ಆಗಿದ್ದರು. ಟಿವಿ9 ತೆಲುಗು ಮಾಧ್ಯಮ ಪ್ರತಿನಿಧಿ ಮೈಕ್ ಹಿಡಿದು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಆ ಮೈಕ್ ಕಿತ್ತುಕೊಂಡು ದಾಳಿ ನಡೆಸಿದ್ದಾರೆ. ಅಯ್ಯಪ್ಪ ಮಾಲೆಧಾರಿಯಾಗಿದ್ದ ಮಾಧ್ಯಮ ಪ್ರತಿನಿಧಿ ಒಬ್ಬರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಕ್ಷಮೆ ಕೇಳಬೇಕು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಹಿರಿಯ ನಟ ಮೋಹನ್ ಬಾಬು ಮಗನನ್ನು ಉದ್ದೇಶಿಸಿ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಇದರಲ್ಲಿ ಮನೋಜ್ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಆಸ್ತಿ ಕಾರಣಕ್ಕೆ ಇಷ್ಟೆಲ್ಲಾ ರಾದ್ದಾಂತ ಎನ್ನುವಂತೆ ಮಾತನಾಡಿದ್ದಾರೆ. ಮನೋಜ್ ಕುಡಿದು ಪತ್ನಿ ಜೊತೆ ಸೇರಿ ಪದೇ ಪದೆ ಕಿರಿಕ್ ಮಾಡುತ್ತಿದ್ದೀಯಾ ಇದು ಸರಿಯಲ್ಲ, ಈ ಆಸ್ತಿ ನನ್ನ ಸ್ವಯಾರ್ಜಿತ. ನಾನು ಕೊಟ್ಟರೆ ನೀನು ತೆಗೆದುಕೊಳ್ಳಬೇಕು. ಅದು ಬಿಟ್ಟು ನಿನಗೆ ಕೇಳುವ ಹಕ್ಕು ಇಲ್ಲ.
ಮದ್ಯ ಸೇವಿಸು. ಆದರೆ ಒಂದು ಲಿಮಿಟ್ ಇರಲಿ. ನಾನು ಸೇವಿಸುತ್ತೇನೆ. ಆದರೆ ಕಮ್ಮಿ ಸೇವಿಸುತ್ತೇನೆ. ನಿನ್ನ ಮಗು ನನ್ನ ಬಳಿ ಇದೆ. ಕರೆದುಕೊಂಡು ಹೋಗು. ಸಂತೋಷವಾಗಿರಿ. ಇಲ್ಲದಿದ್ದರೆ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಮೋಹನ್ ಬಾಬು ಆಡಿಯೋ ಕ್ಲಿಪ್ನಲ್ಲಿ ಹೇಳಿದ್ದಾರೆ.
ಸದ್ಯ ಮೋಹನ್ ಬಾಬು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೆರಡು ದಿನಗಳಿಂದ ಮನೆಯಲ್ಲಿ ನಡೆಯುತ್ತಿರುವ ಗಲಾಟೆಯಿಂದ ಮನನೊಂದು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ಮಗ ವಿಷ್ಣು ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಬೆಂಬಲವಾಗಿ ನಿಂತಿದ್ದಾರೆ.


Click it and Unblock the Notifications











