ತೆಲುಗು ಸಿನಿಮಾ ನಿರ್ದೇಶಕ ನಾಗೇಶ್ವರ ರಾವ್ ನಿಧನ
ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ನಾಗೇಶ್ವರ ರಾವ್ ನಿನ್ನೆ (ನವೆಂಬರ್ 26)ರಂದು ರಾತ್ರಿ ನಿಧನರಾಗಿದ್ದಾರೆ.
ಹೈದರಾಬಾದ್ನಿಂದ ಪಾಲಕ್ಕೋಲುಗೆ ಪ್ರಯಾಣಿಸುತ್ತಿದ್ದ ನಾಗೇಶ್ವರ್ ರಾವ್ ಅವರಿಗೆ ದಾರಿ ಮಧ್ಯೆ ಆರೋಗ್ಯ ಸಮಸ್ಯೆ ಎದುರಾಗಿದೆ. ಅವರನ್ನು ಏಲೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಮೃತರಾಗಿದ್ದಾರೆ ಎಂದು ಘೋಷಿಸಲಾಗಿದೆ. ಏಲೂರಿನ ಆಸ್ಪತ್ರೆಗೆ ಬರುವ ಮುನ್ನ ಹಾದಿಯಲ್ಲಿ ಇನ್ನೂ ಕೆಲವು ಆಸ್ಪತ್ರೆಗಳಲ್ಲಿ ತೋರಿಸಲಾಗಿದೆ ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ.
ಕೆಎಸ್ ನಾಗೇಶ್ವರ್ ರಾವ್ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. ನಾಗೇಶ್ವರ ರಾವ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು. ಬಹಳ ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದ ನಾಗೇಶ್ವರ್ ರಾವ್ ಸಾವನ್ನು 'ಗುಡುಂಬ ಶಂಕರ್ ' ಸಿನಿಮಾದ ನಿರ್ದೇಶಕ ವೀರಬಾಬು ಮಾಧ್ಯಮಗಳಿಗೆ ಖಚಿತಪಡಿಸಿದರು. ವೀರಬಾಬು ಹಾಗೂ ನಾಗೇಶ್ವರ್ ರಾವ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರು.

ನಾಗೇಶ್ವರ್ ರಾವ್ ಅವರ ಮೃತದೇಹವನ್ನು ಅವರ ಪತ್ನಿಯ ಊರಾದ ಕೂಲೂರಿನಲ್ಲಿ ಇಡಲಾಗಿತ್ತು, ಅಂತಿಮ ಸಂಸ್ಕಾರ ಸಹ ಅಲ್ಲಿಯೇ ಮಾಡಲಾಗಿದೆ. ನಿರ್ದೇಶಕನ ಅಂತಿಮ ಸಂಸ್ಕಾರದಲ್ಲಿ ಚಿತ್ರರಂಗದ ಕೆಲವು ನಿರ್ದೇಶಕರು, ನಟರು ಭಾಗಿಯಾಗಿದ್ದರು.
1986ರಲ್ಲಿ ಚಿತ್ರರಂಗ ಪ್ರವೇಶಿಸಿದ ನಾಗೇಶ್ವರ ರಾವ್, ಆಗಿನ ಜನಪ್ರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಾಗೇಶ್ವರ ರಾವ್ ಆ ನಂತರ ಸ್ವತಂತ್ರ್ ನಿರ್ದೇಶಕರಾದರು.
ಸ್ವತಂತ್ರ್ಯ ನಿರ್ದೇಶಕರಾದ ಬಳಿಕ, 'ಸಾಂಬಯ್ಯ', ಶ್ರೀಹರಿ ನಟಿಸಿದ್ದ 'ಶ್ರೀಶೈಲಂ', 'ದೇಶದ್ರೋಹಿ' ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ತಮ್ಮ ಮಗನನ್ನು ನಾಯಕ ನಟನನ್ನಾಗಿಸಿ ಹೊಸ ಸಿನಿಮಾ ನಿರ್ದೇಶಿಸಲು ಯೋಜನೆ ರೂಪಿಸಿದ್ದರು. ಸಿನಿಮಾಕ್ಕೆ ಬಂಡವಾಳ ಹೂಡಲು ಚದಲವಾಡ ಅವರನ್ನು ಒಪ್ಪಿಸಿದ್ದರು. ಆದರೆ ಆ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿತ್ತು. ಹೊಸ ನಿರ್ಮಾಪಕರಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ನಾಗೇಶ್ವರ ರಾವ್ ನಿಧನ ಹೊಂದಿದ್ದಾರೆ.


Click it and Unblock the Notifications











