ಯಶ್ ಬಗ್ಗೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ ಚಿನ್ನದಂತಾ ಮಾತು
ಯಶ್ ಖ್ಯಾತಿ ಕನ್ನಡ ಸಿನಿಮಾರಂಗ ದಾಟಿ ಭಾರತದ ಬಹುತೇಕ ಎಲ್ಲ ಚಿತ್ರರಂಗಗಳಲ್ಲಿಯೂ ಹರಡಿದೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಹೆಸರು ಕೇಳಿರದ ಸಿನಿಮಾ ಮಂದಿ ಬಹಳ ಕಡಿಮೆ.
ಎಷ್ಟೇ ಎತ್ತರಕ್ಕೆ ಏರಿದ್ದರೂ ಯಶ್ ಅದೇ ವಿಧೇಯ ಗುಣ, ಸರಳತೆ ಉಳಿಸಿಕೊಂಡು ಬಂದಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯನ್ನು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ನೀಡಿದ್ದಾರೆ.
ಯಶ್ ಅವರನ್ನು ಎರಡು ಭಿನ್ನ ಸಂದರ್ಭದಲ್ಲಿ ದೇವಿ ಶ್ರೀ ಪ್ರಸಾದ್ ಭೇಟಿ ಆಗಿದ್ದರಂತೆ. ಮೊದಲ ಬಾರಿ ಭೇಟಿ ಆಗಿದ್ದಾಗಿನ ಯಶ್ಗೂ ಎರಡನೇ ಬಾರಿ ಭೇಟಿ ಆಗಿದ್ದಾಗಿನ ಯಶ್ಗೂ ಇರುವ ವ್ಯತ್ಯಾಸವನ್ನು ತುಲನೆ ಮಾಡಿ ಯಶ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ ದೇವಿ ಶ್ರೀ ಪ್ರಸಾದ್.
ರೆಡಿಯೋ ಜಾಕಿ ಒಬ್ಬರಿಗೆ ಆನ್ಲೈನ್ ಸಂದರ್ಶನ ನೀಡುವ ವೇಳೆ 'ಕೆಜಿಎಫ್ 3'ಗೆ ನೀವು ಸಂಗೀತ ನೀಡುತ್ತೀರಾ? ಎಂದು ಸಂದರ್ಶಕ ದೇವಿ ಶ್ರೀ ಪ್ರಸಾದ್ ಅಲಿಯಾಸ್ ಡಿಎಸ್ಪಿಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುತ್ತಾ 'ಕೆಜಿಎಫ್' ಒಂದು ಬಹಳ ಪ್ರತಿಭಾನ್ವಿತರ ತಂಡ. ನನಗೆ ಅವರಿಂದ ಆಫರ್ ಬಂದರೆ ನಾನು ಅವರೊಟ್ಟಿಗೆ ಸೇರಿಕೊಳ್ಳುತ್ತೇನೆ ಎಂದಿದ್ದಾರೆ. ಮುಂದುವರೆದು ಯಶ್ ಅವರೊಟ್ಟಿಗಿನ ತಮ್ಮ ಭೇಟಿಯ ಬಗ್ಗೆ ಮಾತನಾಡಿದ್ದಾರೆ ದೇವಿ ಶ್ರೀ ಪ್ರಸಾದ್.

'ಹಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದೆ'
'ನಾನು, ಒಮ್ಮೆ ದುಬೈನಲ್ಲಿ ಲಿಫ್ಟ್ ಒಂದರಲ್ಲಿ ಬರುತ್ತಿದ್ದೆ. ಆಗ ಅದೇ ಲಿಫ್ಟ್ನಲ್ಲಿ ಯಶ್ ಸಹ ಇದ್ದರು. ಅವರೇ ನನ್ನನ್ನು ಮಾತನಾಡಿಸಿ, 'ನನ್ನ ಹೆಸರು ಯಶ್, ನಾನು ನಿಮ್ಮ ಸಂಗೀತದ ಅಭಿಮಾನಿ, ನೀವು ಸಂಗೀತ ನೀಡಿರುವ ಇಂಥಹಾ ಹಾಡುಗಳು ನನಗೆ ಇಷ್ಟ' ಎಂದೆಲ್ಲಾ ಬಹಳ ಪ್ರೀತಿಯಿಂದ ಹೇಳಿದರು. ನನಗೆ ಆಗ ಯಶ್ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾನು ಅವರ ಒಂದು ಸಿನಿಮಾ ಸಹ ನೋಡಿರಲಿಲ್ಲ. ಆದರೆ ಕನ್ನಡದ ಕೆಲವು ಸಂಗೀತ ನಿರ್ದೇಶಕರು ಯಶ್ ಹೆಸರಿನ ಒಬ್ಬ ಹೀರೋ ಬಂದಿದ್ದಾನೆ ಬಹಳ ಚೆನ್ನಾಗಿ ನಟಿಸುತ್ತಿದ್ದಾನೆ ಎಂದು ಹೇಳಿದ್ದನ್ನಷ್ಟೆ ಕೇಳಿದ್ದೆ' ಎಂದಿದ್ದಾರೆ ಡಿಎಸ್ಪಿ.

ಕೆಲವೇ ವರ್ಷಗಳಲ್ಲಿ ಸ್ಟಾರ್ ಆದ ಯಶ್: ಡಿಎಸ್ಪಿ
ಅದಾದ ಕೆಲವು ವರ್ಷಗಳ ಬಳಿಕ ಕೆಜಿಎಫ್ ಸಿನಿಮಾ ಬಿಡುಗಡೆ ಆಯಿತು. ನಾನು ದುಬೈನಲ್ಲಿ ನೋಡಿದ ಅದೇ ಯಶ್ ಕೆಲವೇ ವರ್ಷಗಳಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದುಬಿಟ್ಟರು. ಆವರ ಫಿಸಿಕ್, ಲುಕ್ ಎಲ್ಲ ಬದಲಾಗಿತ್ತು. ಅಬ್ಬಾ ಎಂದುಕೊಳ್ಳುವಂತೆ ಎತ್ತರಕ್ಕೆ ಏರಿದರು ಯಶ್ ಎಂದಿದ್ದಾರೆ ದೇವಿಶ್ರೀಪ್ರಸಾದ್.

ಕೆಜಿಎಫ್ ತಂಡಕ್ಕೆ ಪರಿಚಯ ಮಾಡಿಸಿದರು: ಡಿಎಸ್ಪಿ
ಕೆಜಿಎಫ್ ಬಿಡುಗಡೆ ಆದ ಬಳಿಕ ಒಂದು ಅವಾರ್ಡ್ ಫಂಕ್ಷನ್ನ ಪಾರ್ಟಿಯಲ್ಲಿ ನಾನು ಯಾರೊಟ್ಟಿಗೊ ಮಾತನಾಡುತ್ತಿದ್ದೆ. ನನ್ನ ಹಿಂದೆ ನನ್ನನ್ನು ಮಾತನಾಡಿಸಲು ಯಾರೋ ನಿಂತಂತಾಗಿ ಹಿಂದೆ ತಿರುಗಿದರೆ ಯಶ್ ನಿಂತಿದ್ದರು. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿ 'ಕೆಜಿಎಫ್' ತಂಡಕ್ಕೆ ಪರಿಚಯ ಮಾಡಿಸುತ್ತೇನೆಂದು ಕರೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸಿದರು. ಆ ಇಡೀಯ ತಂಡವೇ ಅದ್ಭುತವಾದ ತಂಡ ಎಂದಿದ್ದಾರೆ ದೇವಿಶ್ರೀಪ್ರಸಾದ್.
Recommended Video

ಯಶ್ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿಲ್ಲ: ಡಿಎಸ್ಪಿ
ನಾನು ಮೊದಲ ಬಾರಿಗೆ ಭೇಟಿಯಾದ ಯಶ್ಗೂ ಎರಡನೇ ಬಾರಿ ಭೇಟಿಯಾದ ಯಶ್ಗೂ ವ್ಯಕ್ತಿತ್ವದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆರಂಭದಲ್ಲಿ ಅವರು ಎಷ್ಟು ವಿಧೇಯರಾಗಿ, ಸರಳವಾಗಿ ಇದ್ದರೋ ದೊಡ್ಡ ಸ್ಟಾರ್ ಆದ ಬಳಿಕ ಈಗಲೂ ಹಾಗೆಯೇ ಇದ್ದಾರೆ' ಎಂದಿದ್ದಾರೆ ದೇವಿಶ್ರೀಪ್ರಸಾದ್. ಸಂದರ್ಶಕ ಆರ್ಜೆ ಸಹ ಡಿಎಸ್ಪಿ ಮಾತಿಗೆ ಸಮ್ಮತಿ ಸೂಚಿಸಿ, 'ನಾನು ಬೆಂಗಳೂರಿನಲ್ಲಿ ಯಶ್ ಅವರನ್ನು ಮೊದಲಿಗೆ ಭೇಟಿಯಾಗಿದ್ದೆ ನಂತರ ಮುಂಬೈನಲ್ಲಿ ಭೇಟಿಯಾದಾಗಲೂ ಯಶ್ ಬಹಳ ಪ್ರೀತಿಯಿಂದ, ಗೌರವದಿಂದ ಮಾತನಾಡಿಸಿದರು' ಎಂದರು.


Click it and Unblock the Notifications











