ಟಾಲಿವುಡ್ ಸ್ಟಾರ್ ನಟರ ಸಿನಿಮಾ ಕಲೆಕ್ಷನ್ ರಿಪೋರ್ಟ್ ಎಲ್ಲಾ ಸುಳ್ಳು, ಮೋಸ!
ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸುವಂತಾಗಿದೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಎಲ್ಲಾ ಕಡೆ ಪರಿಸ್ಥಿತಿ ಹೀಗೆ ಇದೆ. ನಷ್ಟದಲ್ಲಿರುವ ಉದ್ಯಮವನ್ನು ಮೇಲೆತ್ತುವುದು ಹೇಗೆ ಅನ್ನುವ ಚರ್ಚೆ ಎಲ್ಲಾ ಚಿತ್ರರಂಗದಲ್ಲೂ ನಡೀತಿದೆ.
ಸದ್ಯ ತೆಲುಗು ಚಿತ್ರರಂಗದವರು ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಸಿನಿಮಾ ಚಿತ್ರೀಕರಣವನ್ನೇ ನಿಲ್ಲಿಸಿ, ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಪ್ರತಿದಿನ ಚಿತ್ರರಂಗದ ಗಣ್ಯರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಭೆಗಳನ್ನು ನಡೆಸಿ, ಚರ್ಚಿಸಿಸುತ್ತಿದ್ದಾರೆ. ಜನ ಯಾಕೆ ಚಿತ್ರಮಂದಿರಕ್ಕೆ ಬರುತ್ತಿಲ್ಲ? ಅವರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತರುವುದು ಹೇಗೆ? ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು ಮಾಡುವುದು ಹೇಗೆ? ಸಿನಿಮಾ ಬಜೆಟ್ ಕಮ್ಮಿ ಮಾಡಿಕೊಳ್ಳುವುದು ಹೇಗೆ? ಅನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇನ್ನು ಆತ್ಮಾವಲೋಕನ ಸಭೆಗಳಲ್ಲಿ ನಿರ್ಮಾಪಕರು, ಪ್ರದರ್ಶಕರು, ವಿತರಕರ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಗೂಬೆ ಕೂರಿಸುವ ಕೆಲಸವೂ ನಡೀತಿದೆ. ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಮುತ್ಯಾಲ ರಮೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಸ್ಟಾರ್ ನಟರು ಮತ್ತು ಕೆಲ ನಿರ್ಮಾಪಕರೇ ಕಾರಣ ಎಂದು ಹೇಳಿದ್ದಾರೆ. ಈ ವಿಚಾರ ಈಗ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಫೇಕ್ ಕಲೆಕ್ಷನ್ ರಿಪೋರ್ಟ್ ತೋರಿಸಿಕೊಂಡು ಹೆಚ್ಚು ಸಂಭಾವನೆ ಪಡೆಯುತ್ತಾ ಸ್ಟಾರ್ ಹೀರೊಗಳು ಮಾತ್ರ ಖುಷಿಯಾಗಿದ್ದಾರೆ ಅನ್ನುವ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಚಿತ್ರರಂಗದಲ್ಲಿ ಕೋಟಿಗಳಿಗೆ ಲೆಕ್ಕವೇ ಇಲ್ಲ ಅನ್ನುವಂತಾಗಿದೆ. ಕಲಾವಿದರ ಸಂಭಾವನೆ, ಪ್ರೊಡಕ್ಷನ್ ಕಾಸ್ಟ್ ಎಲ್ಲವೂ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಿದೆ. ಆದರೆ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಲು ಬರುತ್ತಿಲ್ಲ. ತಿಂಗಳಿಗೆ 15 ರಿಂದ 20 ಸಿನಿಮಾಗಳು ರಿಲೀಸ್ ಆದರೆ ಒಂದೋ ಎರಡೋ ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ. ಉಳಿದ ಸಿನಿಮಾಗಳೆಲ್ಲಾ ಭಾರೀ ನಷ್ಟ ತಂದೊಡ್ಡುತ್ತಿದ್ದು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಆಸ್ತಿ ಪಾಸ್ತಿ ಮಾರಿಕೊಳ್ಳುವಂತಾಗುತ್ತಿದೆ. ಇದೇ ಪರಿಸ್ಥಿತಿ ಈಗ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ.

ಚಿತ್ರರಂಗದ ಈ ಪರಿಸ್ಥಿತಿ ಅದೇ ಕಾರಣ?
ಅಷ್ಟಕ್ಕೂ ಚಿತ್ರರಂಗದ ಈ ಪರಿಸ್ಥಿತಿಗೆ ಕಾರಣ ಏನು ಅನ್ನೋದನ್ನು ನೋಡಿದರೆ ಮೊದಲು ಕಣ್ಣಮುಂದೆ ಬರೋದು ಒಟಿಟಿ. ಹೌದು ಈಗ ಪ್ರೇಕ್ಷಕರು ಸಿನಿಮಾ ನೋಡುವ ರೀತಿ ಬದಲಾಗಿದೆ. ಮೊದಲಿನ ಹಾಗೆ ಥಿಯೇಟರ್ಗೆ ಹೋಗಿ ಸಿನಿಮಾ ನೋಡಬೇಕು ಅನ್ನುವ ಕಾಲ ಈಗಿಲ್ಲ. ಕೆಲ ಸಿನಿಮಾಗಳು ಓಟಿಟಿಗೆ ನೇರವಾಗಿ ಬರುತ್ತಿದೆ. ಸ್ಟಾರ್ ನಟರು, ನಿರ್ಮಾಪಕರು ಡಿಜಿಟಲ್ ಫ್ಲಾಟ್ಫಾರ್ಮ್ಗಾಗಿ ಸಿನಿಮಾಗಳನ್ನು ಮಾಡಲು ಆರಂಭಿಸಿದ್ದಾರೆ. ಟಿಕೆಟ್, ಸ್ನ್ಯಾಕ್ಸ್, ಪಾರ್ಕಿಂಗ್ ಅಂತೆಲ್ಲಾ ಖರ್ಚು ಮಾಡುವ ಬದಲು ಒಟಿಟಿಯಲ್ಲಿ ಸಿನಿಮಾ ನೋಡುವುದು ಉತ್ತಮ ಅನ್ನುವುದು ಕೆಲವರ ವಾದ. ಇನ್ನು ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್ಗೆ ಬಂದ ಮೂರ್ನಾಲ್ಕು ವಾರಗಳಿಗೆ ಒಟಿಟಿಗೆ ಬರುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಹಜವಾಗಿಯೇ ಥಿಯೇಟರ್ಗಳು ಪ್ರೇಕ್ಷಕರ ಅಭಾವ ಎದುರಿಸುವಂತಾಗಿದೆ.

ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಮೋಸ!
ಟಾಲಿವುಡ್ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆದ ದಿನವೇ 50 ಕೋಟಿ ರೂ., 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಅನ್ನುವ ಲೆಕ್ಕಾಚಾರ ಶುರುವಾಗುತ್ತಿದೆ. ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆಯೇ ಫಸ್ಟ್ ಡೇ ಕಲೆಕ್ಷನ್, ಫಸ್ಟ್ ವೀಕೆಂಡ್ ಕಲೆಕ್ಷನ್ ಎಷ್ಟಾಗಿದೆ, ಅಷ್ಟಾಗಿದೆ ಎಂದು ಪೋಸ್ಟರ್ಗಳ ಸಮೇತ ಘೋಷಿಸುತ್ತಿದ್ದಾರೆ. ಕೆಲವೊಮ್ಮೆ ಪೈಪೋಟಿಗೆ ಬಿದ್ದು, ಪ್ರೇಕ್ಷಕರನ್ನು ಸೆಳೆಯಲು ಸುಳ್ಳು ಸುಳ್ಳು ಕಲೆಕ್ಷನ್ ರಿಪೋರ್ಟ್ ಕೊಡುತ್ತಿದ್ದಾರೆ. ಅಸಲಿಗೆ ಅಷ್ಟು ಕಲೆಕ್ಷನ್ ಆಗಿರುವುದೇ ಇಲ್ಲ. ಜನ ಮರುಳು ಜಾತ್ರೆ ಮರುಳೋ ಅಂತ ಎಲ್ಲರೂ ಅದೇ ನಂಬುತ್ತಿದ್ದಾರೆ. ಸದ್ಯ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಮುತ್ಯಾಲ ರಮೇಶ್ ಇದೇ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರೀ ಸಂಭಾವನೆ ಪಡೆಯುವ ನಟರು ಮಾತ್ರ ಹ್ಯಾಪಿ!
ಸ್ಟಾರ್ ನಟರ ಸಿನಿಮಾಗಳು ಅಷ್ಟು ಕೋಟಿ ಕಲೆಕ್ಷನ್ ಮಾಡ್ತು, ಇಷ್ಟು ಕೋಟಿ ಬ್ಯುಸಿನೆಸ್ ಮಾಡ್ತು ಅನ್ನುವ ಸುದ್ದಿ ನಂಬಿ ನಿರ್ಮಾಪಕರು ಹೆಚ್ಚು ಹೆಚ್ಚು ಸಂಭಾವನೆ ಕೊಡಲು ಪೈಪೋಟಿ ನಡೆಸುತ್ತಿದ್ದಾರೆ. ನಿರ್ಮಾಪಕರೇ ಸ್ಟಾರ್ ನಟರ ಕಾಲ್ಶೀಟ್ಗಾಗಿ ಅವರು ಕೇಳಿದಷ್ಟು ಸಂಭಾವನೆ ಕೊಟ್ಟು ನಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಸ್ಟಾರ್ ಹೀರೊಗಳು ಮಾತ್ರ ಹ್ಯಾಪಿಯಾಗಿದ್ದಾರೆ ಎಂದು ಮುತ್ಯಾಲ ರಮೇಶ್ ವಿವರಿಸಿದ್ದಾರೆ.

10 ವಾರಗಳ ನಂತರ ಒಟಿಟಿಗೆ ಸಿನಿಮಾ ಕೊಡಿ!
ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಲು ನಡೆಸಿದ ಸಭೆಯಲ್ಲಿ ಒಂದು ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಸಲಾಗಿದೆ. ಅದೇನು ಅಂದರೆ ಯಾವುದೇ ಸಿನಿಮಾ ಆದರೂ ಥಿಯೇಟರ್ನಲ್ಲಿ ಬಿಡುಗಡೆಯಾದ 10 ವಾರಗಳ ನಂತರವೇ ಓಟಿಟಿಯಲ್ಲಿ ರಿಲೀಸ್ ಮಾಡಬೇಕು ಅನ್ನುವುದು. ಒಟಿಟಿಯಲ್ಲಿ ಸಿನಿಮಾ ರಿಲೀಸ್ ತಡವಾದರೇ ಕೊನೆ ಪಕ್ಷ ಪ್ರೇಕ್ಷಕರು ಥಿಯೇಟರ್ಗಳಿಗೆ ಬರುತ್ತಾರೆ. ಇಲ್ಲವಾದರೇ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ಅಂತ ಚರ್ಚಿಸಿದ್ದಾರೆ. ಇದಕ್ಕೆ ಸಿನಿಮಾ ನಿರ್ಮಾಪಕರು ಒಪ್ಪುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











