ನನ್ನ ಮನೆ, ನನ್ನ ನಿಯಮ, ನಿಮ್ಮಂತಹವರಿಗೆ ನನ್ನ ಬಳಿ ಜಾಗವಿಲ್ಲ ; ಸಮಂತಾ ಸಿಡಿಮಿಡಿ - ಕಾರಣವೇನು ?
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ನಾವು ಅಷ್ಟೂ ಮಾಡದೇ ಇದ್ದರೆ ಹೇಗೆ ಎನ್ನುವುದು ಬಹುತೇಕರ ಆಲೋಚನೆ ? ಆದರೆ ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಮತ್ತೂ ಕೆಲವರು ನಿರ್ಲಕ್ಷ್ಯಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿತ್ತಲಾಗುವ ನಕಾರಾತ್ಮಕತೆಯಿಂದ ದೂರ ಇರುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಸಮಂತಾ.

ಹೌದು, ನಿರ್ಮಾಪಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ಸಮಂತಾ ಬೇರೆ ನಾಯಕಿಯರಂತೆ ಮನೆ-ಗಂಡ-ಸಂಸಾರ ಎಂದು ಮುಳುಗಿ ಹೋಗಿಲ್ಲ. ಬದಲಿಗೆ ಚಿತ್ರರಂಗದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ''ಮಾ ಇಂಟಿ ಬಂಗಾರಂ'' ಚಿತ್ರವನ್ನು ಮಾಡಿದ್ದಾರೆ. ಇನ್ನೇನು ಈ ಚಿತ್ರ ಇದೇ ಮೇ 15ರಂದು ಬಿಡುಗಡೆಗೆ ಸಿದ್ಧವಾಗಿದೆ. ಬಹುದಿನಗಳ ನಂತರ ತೆಲುಗು ಚಿತ್ರದಲ್ಲಿ ಸಮಂತಾ ಅವರನ್ನು ಕಣ್ತುಂಬಿಕೊಳ್ಳಲು ಇವರ ಅಭಿಮಾನಿ ಬಳಗ ಕೂಡ ಕಾತುರದಿಂದ ಕಾಯುತ್ತಿದೆ.
ಪ್ರೇಕ್ಷಕರು ತಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸಮಂತಾ ಅವರಲ್ಲಿಯೂ ಇದೆ. ಈ ಹಿನ್ನೆಲೆ ಈ ಚಿತ್ರದ ಪ್ರಚಾರಕ್ಕೆ ಈಗಿಂದಲೇ ಅಡಿಪಾಯ ಹಾಕಲು ಸಮಂತಾ ಶುರು ಮಾಡಿದ್ದಾರೆ. ಇದರ ಒಂದು ಭಾಗವೆನ್ನುವಂತೆ ಸಮಂತಾ ತಮ್ಮ ಅಭಿಮಾನಿಗಳ ಜೊತೆ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಟ್ರೋಲ್ಗಳ ಬಗ್ಗೆ ಮತ್ತು ನೆಗೆಟಿವ್ ಕಾಮೆಂಟ್ಗಳ ಬಗ್ಗೆ ಸಮಂತಾಗೆ ಪ್ರಶ್ನೆಯನ್ನು ಕೇಳಲಾಗಿದ್ದು ಸಮಂತಾ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಕುರಿತು ನಕರಾತ್ಮಕ ವಿಚಾರ ಓದಿದಾಗ ನಿಮಗೆ ಹೇಗೆ ಆಗುತ್ತೆ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಮಂತಾ ನಿಮ್ಮ ಹೊಗಳಿಕೆಯಿಂದ ನನ್ನ ಜೀವನದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ, ನೀವು ನನ್ನನ್ನೂ ಟ್ರೋಲ್ ಮಾಡಿದರೆ ನಾನು ಅದರಿಂದ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ಆದರೆ ನೀವು ನನ್ನ ಮನೆಗೆ (ಸೋಶಿಯಲ್ ಮೀಡಿಯಾ ಪ್ರೊಫೈಲ್) ನಕಾರಾತ್ಮಕವಾದ ವಿಚಾರ ತಂದರೆ, ನಿಮ್ಮಂತಹವರಿಗೆ ನನ್ನ ಬಳಿ ಜಾಗ ಇಲ್ಲ ಎಂದು ಹೇಳಿರುವ ಸಮಂತಾ ಮುಲಾಜಿಲ್ಲದೇ ನಾನು ನಿಮ್ಮನ್ನು ಬ್ಲಾಕ್ ಮಾಡುತ್ತೇನೆ ಎಂದು ಹೇಳಿದ್ಧಾರೆ. ನಾನು ನನ್ನ ಮನೆಯಂತೆಯೇ ಈ ಜಾಗವನ್ನು ಕೂಡ ಸ್ವಚ್ಚವಾಗಿ ಇಡುತ್ತೇನೆ ಎಂದಿದ್ದಾರೆ.

ಈ ಮೂಲಕ ನಮ್ಮ ಮನೆಗೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಹಕ್ಕು ಹೇಗೆ ನಮಗೆ ಇದೆಯೋ ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಜೊತೆ ನಮ್ಮ ಹಿಂದೆ ಯಾರಿರಬೇಕು ಎನ್ನುವುದನ್ನು ಕೂಡ ನಾವೇ ನಿರ್ಧಾರ ಮಾಡಬೇಕು ಎಂಬ ಸಂದೇಶವನ್ನು ಸಮಂತಾ ರವಾನೆ ಮಾಡಿದ್ದಾರೆ.
ನೆಮ್ಮದಿಯ ತಾಣದಲ್ಲಿ ಕೊಳಕು ಮನಸ್ಥಿತಿಯ ವ್ಯಕ್ತಿಗಳಿಗೆ ಜಾಗ ಇಲ್ಲ ಎಂದಿದ್ದಾರೆ.
ಅಂದ್ಹಾಗೇ ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಸಮಂತಾ ಖುದ್ದು ಹಣ ಹೂಡಿದ್ದಾರೆ. ಇವರ ಪತಿ ರಾಜ್ ನಿಡಿಮೋರು ಈ ಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಗುಲ್ಷನ್ ದೇವಯ್ಯ, ಕನ್ನಡದ ದೂದ್ ಪೇಡಾ ದಿಗಂತ್, ಗೌತಮಿ, ಶ್ರೀಮುಖಿ ಮುಂತಾದವರು ಇದ್ದಾರೆ. ಸದ್ಯ ಸಮಂತಾ ಟ್ರೋಲ್ಗಳ ಕುರಿತು ಮಾಡಿರುವ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Click it and Unblock the Notifications











