ಸ್ಟಾರ್ಗಿರಿ ಪಕ್ಕಕ್ಕಿಟ್ಟು ಬೇರೆ ಸ್ಟಾರ್ ಚಿತ್ರಗಳಲ್ಲಿ ನಟಿಸಿದ ದುನಿಯಾ ವಿಜಯ್, ರವಿತೇಜಾಗೆ ಇದೆಂಥ ಅವಮಾನ?
ಸ್ಟಾರ್ ನಟನೊಬ್ಬ ತನ್ನ ಸ್ಟಾರ್ಗಿರಿ ಪಕ್ಕಕ್ಕಿಟ್ಟು ಬೇರೊಬ್ಬ ಸ್ಟಾರ್ ನಟನ ಚಿತ್ರಗಳಲ್ಲಿ ನಟಿಸುವುದು ಸುಲಭದ ಮಾತಲ್ಲ. ಇಷ್ಟು ದಿನಗಳ ಕಾಲ ತನ್ನನ್ನು ದೊಡ್ಡ ನಟನನ್ನಾಗಿ ನೋಡಿದ್ದ ತನ್ನ ಅಭಿಮಾನಿಗಳು ಈಗ ಡಿಢೀರನೇ ತಾನು ಸಪೋರ್ಟಿಂಗ್ ಪಾತ್ರ ಅಥವಾ ಖಳನಾಯಕನ ಪಾತ್ರವನ್ನು ನಿರ್ವಹಿಸುವುದನ್ನು ನೋಡಿ ಏನು ತಿಳಿದುಕೊಳ್ಳಬಹುದು ಎಂಬ ಯೋಚನೆ ಅವರಲ್ಲಿ ಮೂಡದೇ ಇರದು.
ಇಷ್ಟೆಲ್ಲಾ ಇದ್ದರೂ ಸಹ ಸ್ಟಾರ್ ನಟರು ತಮ್ಮ ಸ್ಟಾರ್ಡಂ ಬಿಟ್ಟು ಬೇರೊಬ್ಬ ನಟನ ಚಿತ್ರದಲ್ಲಿ ಖಳನಾಯಕನಾಗಿ ಹಾಗೂ ವಿಶೇಷ ಪಾತ್ರದಲ್ಲಿ ನಟಿಸಿದ ಹಲವಾರು ಉದಾಹರಣೆಗಳಿವೆ. ಹೀಗೆ ಬೇರೊಬ್ಬ ಸ್ಟಾರ್ ನಟನ ಚಿತ್ರದಲ್ಲಿ ಅಭಿನಯಿಸಿದ ಸ್ಟಾರ್ ನಟರಿಗೆ ಅವರಿಗೆ ತಕ್ಕ ಗೌರವವನ್ನು ನೀಡಲಾಗಿದೆ ಹಾಗೂ ಕೆಲವೊಮ್ಮೆ ಚಿತ್ರತಂಡ ಮಾಡುವ ಎಡವಟ್ಟಿನಿಂದ ಆ ಸ್ಟಾರ್ ನಟರಿಗೆ ಅವಮಾನವೂ ಆಗಿದೆ.
ಹೌದು, ಮಲ್ಟಿಸ್ಟಾರ್ ಚಿತ್ರಗಳಲ್ಲಿ ನಟಿಸುವ ನಟರಿಗೆ ಹೊರಗಡೆ ಯಾವ ರೀತಿಯ ಕ್ರೇಜ್ ಇದೆ ಎಂಬುದನ್ನು ಅರಿತು ಚಿತ್ರತಂಡಗಳು ನಡೆದುಕೊಳ್ಳಬೇಕಾಗುತ್ತದೆ. ಆದರೆ ಚಿತ್ರತಂಡಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಆ ಸ್ಟಾರ್ ನಟರಿಗೆ ಅವಮಾನ ಆಗುವಂತಹ ಕೆಲಸಗಳನ್ನು ಪರೋಕ್ಷವಾಗಿ ಮಾಡಿಬಿಟ್ಟಿವೆ ಚಿತ್ರ ನಿರ್ಮಾಣ ಸಂಸ್ಥೆಗಳು. ಇದಕ್ಕೆ ತಾಜಾ ಉದಾಹರಣೆ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿರುವ ವಾಲ್ತೇರು ವೀರಯ್ಯ ಹಾಗೂ ವೀರಸಿಂಹ ರೆಡ್ಡಿ ಚಿತ್ರಗಳು.

ಚಿತ್ರಗಳಲ್ಲಿ ವಿಶೇಷ ಪಾತ್ರ ನಿರ್ವಹಿಸಿದ ಸ್ಟಾರ್ಗಳಿಗಿಲ್ಲ ಪ್ರಾತಿನಿದ್ಯ!
ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾಸ್ ಚಿತ್ರಗಳಲ್ಲಿ ನಟಿಸಿ, ಸಲಗ ರೀತಿಯ ಸೂಪರ್ ಚಿತ್ರವನ್ನು ನಿರ್ದೇಶನ ಮಾಡಿ ಗೆದ್ದಿರುವ ದುನಿಯಾ ವಿಜಯ್ ಅವರ ಫೋಟೊಗಳನ್ನು ವೀರಸಿಂಹ ರೆಡ್ಡಿ ಪೋಸ್ಟರ್ಗಳಲ್ಲಿ ಬಳಸಲಾಗಿಲ್ಲ. ಅಷ್ಟೇ ಅಲ್ಲ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿರುವ ರವಿತೇಜಾಗೂ ಸಹ ಇದೇ ರೀತಿಯ ಉಪಚಾರ ಸಿಕ್ಕಿದೆ. ಚಿತ್ರದ ಯಾವ ಪೋಸ್ಟರ್ನಲ್ಲೂ ಸಹ ರವಿತೇಜಾ ಫೋಟೊಗಳನ್ನು ಬಳಸಿಲ್ಲ. ಮೈತ್ರಿ ಮೂವಿ ಮೇಕರ್ಸ್ ಈ ಎರಡೂ ಚಿತ್ರಗಳಿಗೂ ಬಂಡವಾಳ ಹೂಡಿದ್ದು, ಅಧಿಕೃತವಾಗಿ ಹಂಚಿಕೊಂಡಿರುವ ಬಿಡುಗಡೆ ಪೋಸ್ಟರ್, ಸಂಕ್ರಾಂತಿ ಪೋಸ್ಟರ್, ಮೊದಲ ದಿನದ ಕಲೆಕ್ಷನ್ ಪೋಸ್ಟರ್, ಬ್ಲಾಕ್ಬಸ್ಟರ್ ಪೋಸ್ಟರ್, ಹೀಗೆ ಯಾವ ಪೋಸ್ಟರ್ನಲ್ಲೂ ಸಹ ದುನಿಯಾ ವಿಜಯ್ ಹಾಗೂ ರವಿತೇಜಾ ಮುಖಗಳು ಇಲ್ಲ. ನಿರ್ಮಾಣ ಸಂಸ್ಥೆ ಬೇಕಂತ ಮಾಡಿದೆಯೊ ಅಥವಾ ಅರಿವಿಲ್ಲದೇ ಮಾಡಿದೆಯೋ, ಆದರೆ ಈ ಕಡೆಗಣನೆ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ಬೇಸರ ಮೂಡಿಸಿರುವುದಂತೂ ಖಚಿತ. ಅದರಲ್ಲೂ ವೀರಸಿಂಹ ರೆಡ್ಡಿ ಚಿತ್ರದ ಕರ್ನಾಟಕ ಪೋಸ್ಟರ್ಗಳಲ್ಲಾದರೂ ದುನಿಯಾ ವಿಜಯ್ ಫೋಟೊಗಳನ್ನು ಬಳಸದಿರುವುದು ನಿಜಕ್ಕೂ ಬೇಸರದ ಸಂಗತಿ.

ಪೋಸ್ಟರ್ಗಳಲ್ಲಿ ಹೆಸರೂ ಇಲ್ಲ!
ಇನ್ನು ಪೋಸ್ಟರ್ಗಳಲ್ಲಿ ಈ ಇಬ್ಬರು ಸ್ಟಾರ್ ನಟರ ಚಿತ್ರಗಳು ಮಾತ್ರವಲ್ಲದೇ ಹೆಸರನ್ನೂ ಸಹ ಬಳಸಲಾಗಿಲ್ಲ. ಸ್ಟಾರ್ಗಿರಿ ಬಿಟ್ಟು ಚಿತ್ರದಲ್ಲಿ ನಟಿಸುವ ನಟರ ಹೆಸರುಗಳನ್ನು ಪೋಸ್ಟರ್ಗಳಲ್ಲಿ ಹಾಕದಿರುವುದು ದೊಡ್ಡ ಕಡೆಗಣನೆ ಎಂದೇ ಹೇಳಬಹುದು. ಈ ಹಿಂದೆ ಕನ್ನಡದ ಒಡಹುಟ್ಟಿದವರು ಚಿತ್ರದ ಬಿಡುಗಡೆ ವೇಳೆ ರಾಜ್ಕುಮಾರ್ ರೀತಿಯ ಮೇರು ನಟನೇ ತನ್ನ ಕಿರಿಯ ನಟ ಅಂಬರೀಶ್ ಅವರ ಕಟ್ಔಟ್ ತನ್ನ ಕಟ್ಔಟ್ಗಿಂತ ಎತ್ತರವಿರಬೇಕು ಎಂದು ಹೇಳಿದ್ದದ್ದು ಇಂಥ ಪ್ರಸಂಗಗಳಲ್ಲಿ ನೆನಪಿಗೆ ಬರುತ್ತದೆ.

ದುನಿಯಾ ವಿಜಯ್ ಪಾತ್ರಕ್ಕೂ ಬೇಸರ!
ಇತ್ತ ನಟ ದುನಿಯಾ ವಿಜಯ್ ವೀರಸಿಂಹ ರೆಡ್ಡಿ ಚಿತ್ರದಲ್ಲಿ ನಿರ್ವಹಿಸಿರುವ ಪಾತ್ರದ ಕುರಿತೂ ಸಹ ಸಿನಿ ರಸಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸ್ಟಾರ್ ನಟನಾಗಿ ಮಿಂಚಿ ಅಲ್ಲಿ ಹೋಗಿ ಕಡೆಗಣನೆಗೆ ಒಳಗಾಗಬೇಡಿ, ಇಲ್ಲೇ ಚಿತ್ರಗಳನ್ನು ಮಾಡಿ ರಾಜನಂತಿರಿ ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











