ಕನ್ನಡತಿಯ ತೆಲುಗು ಪ್ರೇಮ ; ಟಾಲಿವುಡ್ ನಲ್ಲಿ ಎರಡನೇ ಇನಿಂಗ್ಸ್ ಆರಂಭ ಮಾಡಿದ ನಭಾ ನಟೇಶ್..!
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದ್ದಲ್ಲ. ಅನೇಕ ವರ್ಷಗಳಿಂದ ಇದು ನಡೆಯುತ್ತಾನೇ ಬಂದಿದೆ. ತಮ್ಮ ತಮ್ಮ ಶಕ್ತಿ ಹಾಗೂ ಪ್ರತಿಭೆ ಅನುಸಾರ, ಬೇರೆ ರಾಜ್ಯದಿಂದ ಇಲ್ಲಿ ಅನೇಕರು ಬಂದಿದ್ದಾರೆ. ಗೆದ್ದಿದ್ದಾರೆ. ಇನ್ನೂ ಅನೇಕರು ಇಲ್ಲಿಂದ ಬೇರೆ ಬೇರೆ ಭಾಗಕ್ಕೆ ವಲಸೆ ಹೋಗಿದ್ದಾರೆ. ಆ ಪೈಕಿ ಕೆಲವರು ಹುಟ್ಟೂರು ಭಾಷೆಯ ಜೊತೆ ಸಂಬಂಧವನ್ನ ಇನ್ನೂ ಉಳಿಸಿಕೊಂಡಿದ್ದಾರೆ. ಇನ್ನು ಬಹುತೇಕರು ಸಂಬಂಧವನ್ನ ಕಡಿದುಕೊಂಡಿದ್ದಾರೆ. ಆ ಪೈಕಿ ನಭಾ ನಟೇಶ್ ಕೂಡ ಒಬ್ಬರು.
ವಜ್ರಕಾಯ ಚಿತ್ರದ ಮೂಲಕ ಬಣ್ಣದ ಬದುಕನ್ನ ಆರಂಭ ಮಾಡಿದ ನಭಾ ಮೊದಲ ಚಿತ್ರದಲ್ಲಿಯೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಕನ್ನಡಿಗರು ಹೃದಯವನ್ನೂ ಗೆದ್ದಿದ್ದರು. ನಭಾ ಅವತ್ತು ಮನಸ್ಸು ಮಾಡಿದ್ದರೆ ಕನ್ನಡದಲ್ಲಿಯೇ ನೆಲೆಯೂರಬಹುದಿತ್ತು. ಅದಕ್ಕೆ ಬೇಕಿದ್ದ ವಾತಾವರಣ ಕೂಡ ನಿರ್ಮಾಣವಾಗಿತ್ತು.

ಇನ್ನೂ ಅಭಿಮಾನದಿಂದ ಅನೇಕರು ನಭಾ ನಟೇಶ್ ಅವರಿಗೆ ಕನ್ನಡ ಚಿತ್ರರಂಗದ ಪಟಾಕ ಎಂಬ ಬಿರುದನ್ನೂ ಕೊಟ್ಟಿದ್ದರು. ಆದರೂ ಕನ್ನಡದಲ್ಲಿ ನಭಾ ನಟೇಶ್ ಮುಂದುವರೆಯಲಿಲ್ಲ. ಎರಡು ಹೆಜ್ಜೆಯ ಮೇಲೆ ಒಂದು ಹೆಜ್ಜೆಯನ್ನೂ ಗಾಂಧಿನಗರದಲ್ಲಿ ಇಡಲಿಲ್ಲ. ಬದಲಿಗೆ ಆಂಧ್ರಕ್ಕೆ ವಲಸೆ ಹೋದರು. ಇವತ್ತು ಕೂಡ ನಭಾ ನಟೇಶ್ ಕನ್ನಡ ಚಿತ್ರರಂಗದಿಂದ ಕಾಲ್ಕಿತ್ತಿದ್ದೇಕೆ ಅನ್ನುವ ಪ್ರಶ್ನೆ ಅನೇಕರಲ್ಲಿದೆ. ಆದರೆ ಅದಕ್ಕೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.
ಕನ್ನಡದಿಂದ ಕಣ್ಮರೆಯಾದ ನಂತರ ತೆಲುಗು ಚಿತ್ರರಂಗದಲ್ಲಿ ಎರಡ್ಮೂರು ಸಿನಿಮಾ ಮಾಡಿದ ನಭಾ ನಟೇಶ್ ಅದೃಷ್ಟ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿತ್ತು. ಅಲ್ಲಿಂದಾಚೆ.. ನಾಲ್ಕು ಸಿನಿಮಾಗಳನ್ನ ನಭಾ ಮಾಡಿದರು. ಆದರೆ ಬದುಕು ಹಲವು ಮುಖಗಳನ್ನ ಹೊಂದಿದ ಕ್ರಿಯೆ. ಇಲ್ಲಿಯೇ ಯಾವುದು ಶಾಶ್ವತ ಅಲ್ಲ. ಬದುಕು ಹೀಗೆ ಇರುತ್ತೆ ಎಂದು ಊಹಿಸಲು ಸಾಧ್ಯ ಇಲ್ಲ. ಇದಕ್ಕೆ ಕೈಗನ್ನಡಿ ಅನ್ನುವಂತೆ ಒಂದಾದ ಮೇಲೊಂದು ತೆಲುಗು ಸಿನಿಮಾ ಮಾಡ್ತಿದ್ದ ನಭಾ ನಟೇಶ್ ಅಪಘಾತಕ್ಕೀಡಾದರು. ಎಡಗೈ ಮತ್ತು ಎಡಭುಜಕ್ಕೆ ಪೆಟ್ಟು ಮಾಡಿಕೊಂಡರು. ಶಸ್ತ್ರ ಚಿಕಿತ್ಸೆಗೂ ಒಳಗಾದರು. ಚೇತರಿಸಿಕೊಳ್ಳಲು ಹೆಚ್ಚು ಕಡಿಮೆ ಒಂದೂವರೆ ವರ್ಷ ಬೇಕಾಯಿತು.

ಇಂಥ ನಭಾ ನಟೇಶ್ ಕಳೆದ ಕೆಲ ದಿನಗಳಿಂದ ಚಿತ್ರರಂಗಕ್ಕೆ ಮರಳಿ ಬರುವ ಪ್ರಯತ್ನವನ್ನ ಮಾಡ್ತಾನೇ ಇದ್ದರು. ದಿನಂ ಪ್ರತಿ ಕಣ್ಣು ಕುಕ್ಕುವ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೇ ಇದ್ದರು. ಇನ್ನೂ .. ನಭಾ ನಟೇಶ್ ಚಿತ್ರರಂಗದಿಂದ ದೂರ ಇದ್ದ ಸಮಯದಲ್ಲಿ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಹೊಸ ಹುಡುಗಿಯರು ಇವರ ಜಾಗವನ್ನ ಆಕ್ರಮಿಸಿಕೊಂಡಿದ್ದರು.
ಟಾಲಿವುಡ್ ನಲ್ಲಿ ಮರಳಿ ಬರುವ ಪ್ರಯತ್ನಕ್ಕೆ ನಭಾ ಮುಂದಾದಾಗ, ಥಟ್ ಅಂತ ಅವಕಾಶ ಸಿಗದೇ ಇರುವುದಕ್ಕೆ ಇದು ಕೂಡ ಒಂದು ಕಾರಣ. ಹೀಗಾಗಿ ಅಲ್ಲಿ ಬೇಸತ್ತು ಮರಳಿ ಮನೆಗೆ ಬಂದು ನಭಾ ನಟೇಶ್ ಪ್ರಯತ್ನ ಪಡ್ತಾರೆ, ಕನ್ನಡದಲ್ಲಿ ನಟಿಸುತ್ತಾರೆ ಎಂದು ಇವರ ಕನ್ನಡದ ಅಭಿಮಾನಿಗಳು ಅಂದುಕೊಂಡಿದ್ದರು. ಕನಸು ಕಂಡಿದ್ದರು. ಆದರೆ ಆ ಕನಸು ಭಗ್ನವಾಗಿದೆ. ಯಾರೇ ಬರಲಿ.. ಏನೇ ಆಗಲಿ.. ನಾನು ತೆಲುಗು ಚಿತ್ರರಂಗದಲ್ಲಿಯೇ ಇರುವುದು ಎಂಬ ಗಟ್ಟಿಯಾದ ನಿರ್ಧಾರವನ್ನ ಮಾಡಿದಂತೆ ಇರುವ ಶೃಂಗೇರಿಯ ಈ ಸುಂದರಿ ಈಗ ತೆಲುಗು ಚಿತ್ರರಂಗದಲ್ಲಿಯೇ ಸ್ವಯಂಭು ಸಿನಿಮಾ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ

ನಿಖಿಲ್ ನಾಯಕನಟನಾಗಿರುವ ಸ್ವಯಂಭು ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಭಾ ನಟೇಶ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಭರತ್ ಕೃಷ್ಣಮಾಚಾರಿ ಚಿತ್ರವನ್ನ ನಿರ್ದೇಶಿಸುತ್ತಿದ್ದು ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಒಟ್ನಲ್ಲಿ ರಶ್ಮಿಕಾ ಮಂದಣ್ಣ- ಶ್ರೀಲೀಲಾ ಅವರಿಗಿಂತ ಮೊದಲೇ ತೆಲುಗು ಚಿತ್ರರಂಗದ ಪಾಲಾದ ನಭಾ ನಟೇಶ್ , ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ ಎಂದು ಅನೇಕರು ಕಾಯ್ತಿದ್ದರು. ಆದರೆ ಬರುವುದು.. ಇರುವುದು ಇರಲಿ 2017ರಿಂದ ಈ ಕಡೆ ಮುಖ ಹಾಕಿ ಮಲಗದ ನಭಾ ನಟೇಶ್ ಈಗ ತಮ್ಮ ಬದುಕಿನ ಎರಡನೇ ಇನಿಂಗ್ಸ್ ಆರಂಭ ಮಾಡುತ್ತಿದ್ದಾರೆ ಅನ್ನುವುದು ಈ ಕ್ಷಣದ ವಿಶೇಷ.


Click it and Unblock the Notifications











