'ಕಲ್ಕಿ 2898 AD'-2 ಚಿತ್ರದಲ್ಲಿ ಶ್ರೀಕೃಷ್ಣನಾಗಿ ಮಹೇಶ್ ಬಾಬು? ನಿರ್ದೇಶಕರು ಏನಂದ್ರು?
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ನಲ್ಲಿ ಸುನಾಮಿ ಸೃಷ್ಟಿಸಿದೆ. ಮೊದಲ ವಾರವೇ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಮಹಾಭಾರತ ಹಾಗೂ ಕಲ್ಕಿ ಪುರಾಣದ ವಿಚಾರಗಳನ್ನು ಲಿಂಕ್ ಮಾಡಿ ನಾಗ್ ಅಶ್ವಿನ್ ಕಟ್ಟಿಕೊಟ್ಟಿರುವ ದೃಶ್ಯ ಕಾವ್ಯಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ.
ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ ಬಹಳ ಅದ್ಧೂರಿಯಾಗಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗಿದೆ. ನಾಗ್ ಅಶ್ವಿನ್ ವಿಷನ್, ಟೇಕಿಂಗ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಒಂದಷ್ಟು ವಿಚಾರಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಸಾಕಷ್ಟು ಜನಕ್ಕೆ ಸಿನಿಮಾ ಇಷ್ಟವಾಗಲಿಲ್ಲ. ಆದರೂ ಬಾಕ್ಸಾಫೀಸ್ನಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ. ಆಂಧ್ರ, ತೆಲಂಗಾಣದಲ್ಲಿ ಟಿಕೆಟ್ ದರ ಏರಿಸಿರುವುದು ಕೂಡ ಇದಕ್ಕೆ ಮುಖ್ಯ ಕಾರಣ.

ಚಿತ್ರದಲ್ಲಿ ಒಂದಕ್ಕಿಂತ ಒಂದು ಪವರ್ಫುಲ್ ಪಾತ್ರಗಳಿವೆ. ಸಿನಿಮಾ ನೋಡಿದವರಿಗೆ ಪ್ರಭಾಸ್ಗಿಂದ ಅಮಿತಾಬ್ ಬಚ್ಚನ್ ಹೀರೊ ಎನಿಸಿಬಿಟ್ಟಿದೆ. ಇನ್ನು ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಪಾತ್ರಗಳಿಗೂ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಮಹಾಭಾರತದ ಎಪಿಸೋಡ್ಗಳಲ್ಲಿ ಅರ್ಜುನನಾಗಿ ವಿಜಯ್ ದೇವರಕೊಂಡ ಗಮನ ಸೆಳೆದಿದ್ದಾರೆ. ಇನ್ನು ಕರ್ಣನಾಗಿ ಪ್ರಭಾಸ್ ಮೋಡಿ ಮಾಡಿದ್ದಾರೆ. ಶ್ರೀಕೃಷ್ಣನ ಪಾತ್ರದಲ್ಲಿ ತಮಿಳು ನಟ ಕೃಷ್ಣಕುಮಾರ್ ಮಿಂಚಿದ್ದಾರೆ.
ಮಹಾಭಾರತದ ನಾಯಕನೇ ಶ್ರೀಕೃಷ್ಣ. ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರದಲ್ಲೂ ಮಾಧವನ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ತೆರೆಮೇಲೆ ಆತನ ಮುಖ ತೋರಿಸದೇ ಚಿತ್ರತಂಡ ವಿಭಿನ್ನ ಪ್ರಯತ್ನ ಮಾಡಿದೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಯಾರಪ್ಪ ಈ ಪಾತ್ರ ಮಾಡಿರೋದು ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಇನ್ನು ತಮಿಳು ನಟ ಅರ್ಜುನ್ ದಾಸ್ ವಾಯ್ಸ್ ಆ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿದೆ.

ಮಹಾಭಾರತ ಕಾವ್ಯ ಆಧರಿಸಿ ಸಿನಿಮಾ ಮಾಡಿದರೆ ಶ್ರೀಕೃಷ್ಣನ ಪಾತ್ರಕ್ಕೆ ತೆಲುಗು ನಟ ಮಹೇಶ್ ಬಾಬು ಸೂಕ್ತ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. 'ಕಲ್ಕಿ 2898 AD' ಸೀಕ್ವೆಲ್ ಬರಲಿದೆ. ಅಲ್ಲೂ ಶ್ರೀಕೃಷ್ಣನ ಪಾತ್ರ ಮುಂದುವರೆಯಲಿದೆ ಎಂದು ಚಿತ್ರತಂಡ ಹೇಳಿದೆ. ಆದರೆ ಮುಂದಿನ ಭಾಗದಲ್ಲಾದರೂ ಕೃಷ್ಣನ ಮುಖವನ್ನು ರಿವೀಲ್ ಮಾಡ್ತಾರಾ? ಮಹೇಶ್ ಬಾಬು ಆ ಪಾತ್ರ ಮಾಡಿದರೇ ಹೇಗಿರುತ್ತದೆ? ಎನ್ನುವ ಚರ್ಚೆ ಶುರುವಾಗಿದೆ.
ಇತ್ತೀಚೆಗೆ 'ಕಲ್ಕಿ 2898 AD' ಸಿನಿಮಾ ಸಕ್ಸಸ್ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮಮಿತ್ರರ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಟೀಕೆಗಳನ್ನು ಸ್ವೀಕರಿಸಿದ್ದಾರೆ. ಈ ವೇಳೆ ಸೀಕ್ವೆಲ್ನಲ್ಲಿ ಶ್ರೀಕೃಷ್ಣನಾಗಿ ಮಹೇಶ್ ಬಾಬು ನಟಿಸುತ್ತಾರಾ? ಎನ್ನುವ ಪ್ರಶ್ನೆಯೂ ಎದುರಾಗಿದೆ. ಇದಕ್ಕೆ ನಾಗ್ ಅಶ್ವಿನ್ ಉತ್ತ ಮಾತ್ರ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸೀಕ್ವೆಲ್ನಲ್ಲಿ ಕೃಷ್ಣನ ಪಾತ್ರಕ್ಕೆ ಮಹೇಶ್ ಬಾಬು ಅವರನ್ನು ಆಯ್ಕೆ ಮಾಡಿಕೊಳ್ತೀರಾ? ಎನ್ನುವ ಪ್ರಶ್ನೆಗೆ "ಈ ಚಿತ್ರದಲ್ಲಿ ಅಲ್ಲ. ಖಂಡಿತ ಬೇರೆ ಚಿತ್ರದಲ್ಲಿ ಅವರು ಕೃಷ್ಣನ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ" ಎಂದು ನಾಗ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಭವಿಷ್ಯದಲ್ಲಿ ಮಹಾಭಾರತ ಕಾವ್ಯ ಆಧರಿಸಿ ಸಂಪೂರ್ಣ ಸಿನಿಮಾ ಮಾಡ್ತೀರಾ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಆ ಆಲೋಚನೆ ಇಲ್ಲ ಎಂದಿದ್ದಾರೆ.
'ಕಲ್ಕಿ 2898 AD' ಸೀಕ್ವೆಲ್ ಯಾವಾಗ ಎನ್ನುವುದು ಗೊತ್ತಿಲ್ಲ. ಇನ್ನು ಸಾಕಷ್ಟು ಕೆಲಸಗಳು ಬಾಕಿಯಿದೆ. ನೋಡಬೇಕು, ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾಹಿತಿ ನೀಡುತ್ತೇವೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ಮಾಡ್ತಿದ್ದೀವಿ ಎಂದಿದ್ದಾರೆ.


Click it and Unblock the Notifications











