ತೆಲುಗು ಚಿತ್ರರಂಗ ಏರಿಗೆಳೆದರೆ, ನೀರಿಗೆಳೆದ ನಾಗಾರ್ಜುನ!
ತೆಲುಗು ಚಿತ್ರರಂಗ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಚಿತ್ರರಂಗವೇ ಒಟ್ಟಾಗಿ ಸರ್ಕಾರದ ವಿರುದ್ಧ ಸಮರಕ್ಕೆ ನಿಂತಿದೆ. ಇಂಥಹಾ ಸಮಯದಲ್ಲಿ ಚಿತ್ರರಂಗದ ಹಿರಿಯ ನಟ ನಾಗಾರ್ಜುನ ಚಿತ್ರರಂಗದ ಉದ್ದೇಶಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ.
ನಾಗಾರ್ಜುನ ಹಾಗೂ ಅವರ ಪುತ್ರ ನಾಗ ಚೈತನ್ಯ ನಟಿಸಿರುವ 'ಬಂಗಾರ್ರಾಜು' ಸಿನಿಮಾ ಕೆಲವೆ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ನಾಗಾರ್ಜುನ ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಆಂಧ್ರ ಸರ್ಕಾರ ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿರುವ ಬಗ್ಗೆ ಮಾತನಾಡಿರುವ ನಾಗಾರ್ಜುನ, 'ಅದರಿಂದ ನಮಗೆ ತೊಂದರೆ ಏನೂ ಇಲ್ಲ' ಎಂದಿದ್ದಾರೆ. ನಾಗಾರ್ಜುನರ ಈ ಹೇಳಿಕೆ ತೆಲುಗು ಚಿತ್ರರಂಗದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ.
''ಚಿತ್ರಮಂದಿರಗಳ ಟಿಕೆಟ್ ದರಗಳು ಹೆಚ್ಚಿದ್ದಿದ್ದರೆ ಸ್ವಲ್ಪ ಹೆಚ್ಚು ಹಣ ನಾವು ಗಳಿಸುವ ಅವಕಾಶ ಇತ್ತು. ಈಗ ಟಿಕೆಟ್ ದರ ಕಡಿಮೆ ಇದ್ದರೂ ನಮ್ಮ ಸಿನಿಮಾಕ್ಕೆ ಅದರಿಂದ ಸಮಸ್ಯೆ ಆಗುವುದಿಲ್ಲ. ಟಿಕೆಟ್ ದರ ಕಡಿಮೆ ಮಾಡಿರುವ ಬಗ್ಗೆ ನನ್ನ ಅಭ್ಯಂತರವೇನೂ ಇಲ್ಲ'' ಎಂದಿದ್ದಾರೆ ನಾಗಾರ್ಜುನ.

ನಾಗಾರ್ಜುನ ಹೇಳಿಕೆಗೆ ಅಸಮಾಧಾನ
ನಾಗಾರ್ಜುನರ ಹೇಳಿಕೆ ಬಗ್ಗೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬುದಕ್ಕೆ ನಾಗಾರ್ಜುನ ಹೇಳಿಕೆ ಸಾಕ್ಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ. ''ಸಿಎಂ ಜಗನ್ ವಿರುದ್ಧ ಮಾತನಾಡಿದರೆ ತಮ್ಮ ಸಿನಿಮಾಕ್ಕೆ ಆಂಧ್ರದಲ್ಲಿ ಸಮಸ್ಯೆ ಆಗುತ್ತದೆಂದು ನಾಗಾರ್ಜುನ ಹೀಗೆ ಮಾತನಾಡಿದ್ದಾರೆ'' ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು ''ನಾಗಾರ್ಜುನ ಕುಟುಂಬದ ಸಿನಿಮಾಗಳು ಲೋ ಬಜೆಟ್ ಸಿನಿಮಾಗಳು ಹಾಗಾಗಿ ಅವರಿಗೆ ಸಮಸ್ಯೆ ಏನೂ ಆಗುವುದಿಲ್ಲ'' ಎಂದು ಇನ್ನು ಕೆಲವರು ವಿಶ್ಲೇಷಿಸಿದ್ದಾರೆ.

ಜನವರಿ 15ಕ್ಕೆ ಬಿಡುಗಡೆ ಆಗಲಿದೆ 'ಬಂಗಾರ್ರಾಜು'
'ಬಂಗಾರ್ರಾಜು' ಸಿನಿಮಾವು ಜನವರಿ 15ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನಾಗಾರ್ಜುನ, ನಾಗ ಚೈತನ್ಯ, ರಮ್ಯಾ ಕೃಷ್ಣ, ಕರ್ನಾಟಕ ಮೂಲದ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾವ್ ರಮೇಶ್, ವೆನ್ನೆಲ ಕಿಶೋರ್, ಬ್ರಹ್ಮಾಜಿ, ಝಾನ್ಸಿ, ಅನಿತಾ ಚೌಧರಿ ಇನ್ನೂ ಕೆಲವರಿದ್ದಾರೆ. ಸಿನಿಮಾವನ್ನು ಕಲ್ಯಾಣ್ ಕೃಷ್ಣ ನಿರ್ದೇಶನ ಮಾಡಿದ್ದು, ಸಿನಿಮಾದ ಚಿತ್ರೀಕರಣವನ್ನು ಕರ್ನಾಟಕದ ಮೇಲುಕೋಟೆ ಸೇರಿದಂತೆ ಹೈದರಾಬಾದ್ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಮಾಡಲಾಗಿದೆ.

ಪ್ರತಿಭಟನೆಗೆ ಸಜ್ಜಾಗುತ್ತಿದೆ ತೆಲುಗು ಚಿತ್ರರಂಗ
ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರ ಟಿಕೆಟ್ ದರಗಳನ್ನು ತೀವ್ರವಾಗಿ ತಗ್ಗಿಸಿ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರದೇಶದಂತೆ ಕೆಲವು ಪ್ರದೇಶಗಳಲ್ಲಿ ಕೇವಲ 5 ರುಪಾಯಿಗೆ ಟಿಕೆಟ್ ಮಾರಾಟ ಮಾಡಬೇಕಿದೆ. ಇದು ಚಿತ್ರರಂಗದವರನ್ನು ಹಾಗೂ ಚಿತ್ರಮಂದಿರ ಮಾಲೀಕರನ್ನು ಕಷ್ಟಕ್ಕೆ ನೂಕಿದ್ದು, ಆಂಧ್ರದ ಕೆಲವು ಚಿತ್ರಮಂದಿರಗಳು ಈಗಾಗಲೇ ಬಾಗಿಲು ಹಾಕಿವೆ. ಪ್ರಭಾಸ್ ಪಾಲುದಾರಿಕೆ ಇದ್ದ ಏಷ್ಯಾದ ಅತಿ ದೊಡ್ಡ ಚಿತ್ರಮಂದಿರ ಸಹ ಬಾಗಿಲು ಹಾಕಿದೆ. ಚಿತ್ರರಂಗವು ಒಟ್ಟಾಗಿ ಆಂಧ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗುತ್ತಿದೆ. ಈಗಾಗಲೇ ಪವನ್ ಕಲ್ಯಾಣ್, ನಾನಿ, ರಾಮ್ ಗೋಪಾಲ್ ವರ್ಮಾ ಇನ್ನೂ ಕೆಲವರು ಜಗನ್ ಸರ್ಕಾರದ ನಿರ್ಣಯದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ.

ಟಿಕೆಟ್ ದರ ಎಷ್ಟಿದೆ?
ಆಂಧ್ರ ಸರ್ಕಾರದ ಹೊಸ ಆದೇಶದಂತೆ, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250ರೂ ರು ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರು. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರು. ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರು ದಾಟುವಂತಿಲ್ಲ, ಡಿಲಕ್ಸ್ 60 ರು. ಹಾಗೂ ಎಕಾನಮಿ 40 ರು ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ಇರಬೇಕು ಎಂದು ಆದೇಶಿಸಲಾಗಿದೆ. ಅದೇ ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಫ್ಲೆಕ್ಸ್ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರುಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರು, ಡಿಲಕ್ಸ್ 50 ರು, ಎಕಾನಮಿ 30 ರು ದಾಟುವಂತಿಲ್ಲ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ನ ಪ್ರೀಮಿಯಂ ಟಿಕೆಟ್ ದರ 120 ರು, ಡಿಲಕ್ಸ್ ಟಿಕೆಟ್ ದರ 80 ರು, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ. ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರು, ಡಿಲಕ್ಸ್ 25 ರು, ಎಕಾನಮಿ 15 ರು ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್ ಪ್ರೀಮಿಯಂ ಟಿಕೆಟ್ ಬೆಲೆ 80 ರು, ಡಿಲಕ್ಸ್ 50 ರು, ಎಕಾನಮಿ 30 ರು. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರು. ಡಿಲಕ್ಸ್ 15 ರು, ಎಕಾನಮಿ 10 ರು. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15, ಡಿಲಕ್ಸ್ 10, ಎಕಾನಮಿ ಕ್ಲಾಸ್ನ ಟಿಕೆಟ್ ದರ 5 ರುಪಾಯಿ ದಾಟುವಂತಿಲ್ಲ.


Click it and Unblock the Notifications











