ನಾಗಾರ್ಜುನ ನಟನೆಯ ಈ ಫ್ಲಾಪ್ ಚಿತ್ರ ನನ್ನ ಸಿನಿ ಬದುಕನ್ನೇ ಹಾಳು ಮಾಡಿತ್ತು ಎಂದ ನಿರ್ದೇಶಕ!
ಸಿನಿಮಾವೆಂದಮೇಲೆ ಹಿಟ್, ಫ್ಲಾಪ್ ಕಾಮನ್. ಚಿತ್ರ ಸಿನಿ ರಸಿಕರಿಗೆ ಇಷ್ಟವಾದರೆ ಹಿಟ್ ಆಗುತ್ತದೆ. ಇಷ್ಟವಾಗದಿದ್ದರೆ ಆ ಚಿತ್ರ ಫ್ಲಾಪ್ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತದೆ. ಒಮ್ಮೊಮ್ಮೆ ಚಿತ್ರದ ಕಥೆ ಚೆನ್ನಾಗಿದ್ದರೂ ಸಹ ಆ ಚಿತ್ರ ಅತಿಯಾದ ನಿರೀಕ್ಷೆ ಹುಟ್ಟುಹಾಕಿದ್ದರಿಂದ ಸೋತ ಉದಾಹರಣೆಗಳಿವೆ.
ಹೀಗೆ ಅತಿಯಾದ ನಿರೀಕ್ಷೆಯಿಂದ ಹಾಗೂ ಕಥೆಗೆ ನಾಯಕ ಹೊಂದಿಕೊಳ್ಳದಿದ್ದರೂ ಸಹ ಆ ಚಿತ್ರಗಳನ್ನು ಮಾಡಿದ್ದರಿಂದ ಫ್ಲಾಪ್ ಆದದ್ದರ ಬಗ್ಗೆ ಈಗಾಗಲೇ ಅನೇಕ ನಿರ್ದೇಶಕರು ತಮ್ಮ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಈ ಸಾಲಿಗೆ ಇದೀಗ ತೆಲುಗು ಚಿತ್ರರಂಗದ ನಿರ್ದೇಶಕ ವೀರಭದ್ರಂ ಚೌಧರಿ ಸಹ ಸೇರಿಕೊಂಡಿದ್ದಾರೆ. ಹೌದು, 2011ರಲ್ಲಿ ಆಹಾ ನಾ ಪೆಳ್ಳಂಟ ಹಾಗೂ 2012ರಲ್ಲಿ ಪೂಲ ರಂಗಡು ಎಂಬ ಎರಡು ಕಾಮಿಡಿ ಎಂಟರ್ಟೈನರ್ ಚಿತ್ರಗಳನ್ನು ನಿರ್ದೇಶಿಸಿ ಜನಮನ ಗೆದ್ದಿದ್ದ ನಿರ್ದೇಶಕ ವೀರಭದ್ರಂ ಚೌಧರಿ 2013ರಲ್ಲಿ ಭಾಯ್ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಎಡವಿದ್ದರು.
ಮೊದಲಿಗೆ ಆಹಾ ನಾ ಪೆಳ್ಳಂಟ ಮೂಲಕ ಗೆದ್ದು ಬಳಿಕ ಪೂಲ ರಂಗಡು ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದ ವೀರಭದ್ರಂ ಚೌಧರಿಗೆ ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸುವ ಅವಕಾಶ ಹುಡುಕಿಕೊಂಡು ಬಂದಿದ್ದವು.
ಇವರು ಅಕ್ಕಿನೇನಿ ನಾಗಾರ್ಜುನ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದರು. ಮೊದಲೆರಡು ಚಿತ್ರಗಳಲ್ಲಿ ಹಾಸ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದ ವೀರಭದ್ರಂ ಚೌಧರಿ ನಾಗಾರ್ಜುನ ನಟನೆಯ ಭಾಯ್ ಚಿತ್ರದಲ್ಲಿ ಸೀರಿಯಸ್ ಕ್ಲೈಮ್ಯಾಕ್ಸ್ ಇದ್ದ ಕಥೆಯನ್ನು ಮಾಡಿ ಕೈಸುಟ್ಟುಕೊಂಡಿದ್ದರು.
ಚಿತ್ರ ಹೀನಾಯವಾಗಿ ಸೋತ ಬಳಿಕ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದ ನಾಗಾರ್ಜುನ ಚಿತ್ರಕ್ಕಾಗಿ ನನ್ನ ಸಂಪೂರ್ಣ ಪರಿಶ್ರಮವಿತ್ತು, ಎಲ್ಲಿ ತಪ್ಪಾಯಿತೋ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ನಿರ್ದೇಶಕರದ್ದೇ ತಪ್ಪು ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಇದೀಗ ನಿರ್ದೇಶಕ ವೀರಭದ್ರಂ ಚೌಧರಿ ಸ್ವತಃ ಫಿಲ್ಮ್ ಟ್ರೀ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು, ಭಾಯ್ ಚಿತ್ರ ಸೋತಿದ್ದೇಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಮೊದಲೆರಡು ಚಿತ್ರಗಳಲ್ಲಿ ಕಾಮಿಡಿ ಕಥೆಯನ್ನು ಹೇಳಿದ್ದ ತಾನು ಈ ಚಿತ್ರವನ್ನೂ ಸಹ ಕಾಮಿಡಿಯಾಗಿ ನಿರ್ದೇಶಿಸಲು ಕಥೆ ಬರೆದುಕೊಂಡಿದ್ದೆ, ಆದರೆ ಯಾವಾಗ ನಾಗಾರ್ಜುನ ಅವರು ಆಯ್ಕೆಯಾದರೋ ಆಗ ಕಥೆಯಲ್ಲಿ ಬದಲಾವಣೆಯಾಗುತ್ತಾ ಹೋಯಿತು, ನಾಗಾರ್ಜುನ ಅವರ ಇಮೇಜ್ಗೆ ತಕ್ಕಂತೆ ಕೊನೆಯಲ್ಲಿ ಚಿತ್ರ ಸೀರಿಯಸ್ ಎಂಡಿಂಗ್ ಪಡೆದುಕೊಂಡಿತು. ಮೊದಲೆಲ್ಲಾ ಹಾಸ್ಯಮಯವಾಗಿದ್ದ ಚಿತ್ರ ಕೊನೆ ಕೊನೆಯಲ್ಲಿ ಸೀರಿಯಸ್ ಆಗಿತ್ತು. ಕಾಮಿಡಿಯನ್ನು ಬಯಸಿದ್ದ ಜನರಿಗೆ ಈ ಚಿತ್ರ ಇಷ್ಟವಾಗಲಿಲ್ಲ, ಹಾಗಾಗಿ ಚಿತ್ರ ನೋಡಿತು ಎಂದು ಹೇಳಿಕೆ ನೀಡಿದರು.
ಇನ್ನು ಈ ಚಿತ್ರ ಸೋತ ಕಾರಣಕ್ಕೆ ಹಾಗೂ ನಾಗಾರ್ಜುನ ಅವರ ಪರೋಕ್ಷ ಹೇಳಿಕೆ ಕಾರಣದಿಂದಾಗಿ ವೀರಭದ್ರಂ ಚೌಧರಿ ನಂತರದ ದಿನಗಳಲ್ಲಿ ದೊಡ್ಡ ಆಫರ್ಗಳನ್ನು ಗಿಟ್ಟಿಸಿಕೊಳ್ಳಲಿಲ್ಲ. ಅಲ್ಲದೇ ಇವರ ಚಿತ್ರಗಳೆಂದರೆ ಸಿನಿ ರಸಿಕರಿಗೆ ನಿರೀಕ್ಷೆಯೂ ಸಹ ಹೊರಟುಹೋಗಿತ್ತು. ಹೀಗೆ ದೊಡ್ಡ ಹಿಟ್ಗಳನ್ನು ಕೊಟ್ಟಿದ್ದ ನಿರ್ದೇಶಕ ಒಂದು ಫ್ಲಾಪ್ನಿಂದ ಸಿನಿ ಬದುಕನ್ನೇ ಹಾಳು ಮಾಡಿಕೊಂಡಿದ್ದರು.


Click it and Unblock the Notifications











