ಎ.ಆರ್.ರೆಹಮಾನ್ ಯಾರೊ ಗೊತ್ತಿಲ್ಲ, ಭಾರತ ರತ್ನ ಕಾಲಿಗೆ ಸಮ: ನಟ ಬಾಲಕೃಷ್ಣ
ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ತಮ್ಮ ಬಿಡು ಬೀಸು ಮಾತುಗಳಿಗೆ ಖ್ಯಾತರು. ಇದರಿಂದಾಗಿಯೇ ಅವರು ಹಲವು ವಿವಾದಗಳಿಗೆ ಈಡಾಗಿದ್ದಾರೆ. ಆದರೆ ಆ ವಿವಾದಗಳಿಗೂ ಅವರದ್ದು ಡೋಂಟ್ ಕೇರ್ ವರ್ತನೆ.
ಕೆಲವು ದಿನಗಳ ಹಿಂದಷ್ಟೆ ಜೂ.ಎನ್ಟಿಆರ್ ಸಕ್ರಿಯ ರಾಜಕೀಯ ಪ್ರವೇಶದ ವಿರುದ್ಧ ಮಾತನಾಡಿದ್ದ ಬಾಲಕೃಷ್ಣ ಈಗ ಭಾರತದ ಪರಮೋಚ್ಛ ನಾಗರೀಕ ಪ್ರಶಸ್ತಿ 'ಭಾರತ ರತ್ನ'ಕ್ಕೆ ಅಪಮಾನ ಮಾಡಿದ್ದಾರೆ. ಜೊತೆಗೆ ಭಾರತದ ಹೆಮ್ಮೆಯ ಸಂಗೀತಗಾರ ಎ.ಆರ್.ರೆಹಮಾನ್ ಬಗ್ಗೆಯೂ ಋಣಾತ್ಮಕ ಮಾತುಗಳನ್ನಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ 'ಟೈಟಾನಿಕ್', 'ಅವತಾರ್'ಗಳಂತಹಾ ಆಲ್ಟೈಮ್ ಹಿಟ್ ಸಿನಿಮಾಗಳ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಕೆಲಸ ಮಾಡುವ ವಿಧಾನದ ಬಗ್ಗೆಯೂ ತಕರಾರು ತೆಗೆದಿದ್ದಾರೆ ಬಾಲಕೃಷ್ಣ!

ಪ್ರಶಸ್ತಿಗಳೆಲ್ಲ ನನ್ನ ಕಾಲಿಗೆ ಸಮ: ಬಾಲಕೃಷ್ಣ
ಸಂದರ್ಶನವೊಂದರಲ್ಲಿ ತಮ್ಮ ನಂದಮೂರಿ ಕುಟುಂಬವನ್ನು ಹೊಗಳುತ್ತಾ ಮಾತನಾಡುತ್ತಿದ್ದ ನಂದಮೂರಿ ಬಾಲಕೃಷ್ಣ, ''ಈ ಪ್ರಶಸ್ತಿಗಳೆಲ್ಲ ನನ್ನ ಕಾಲಿಗೆ ಸಮ. ನಮ್ಮ ಕುಟುಂಬ ತೆಲುಗು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಯಾವ ಪ್ರಶಸ್ತಿಯಿಂದಲೂ ಅಳೆಯಲು ಸಾಧ್ಯವಿಲ್ಲ. ಯಾವ ಪ್ರಶಸ್ತಿಯೂ ಸಮವಲ್ಲ'' ಎಂದಿದ್ದಾರೆ.

ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ: ಬಾಲಕೃಷ್ಣ
''ಯಾರೊ ಆಸ್ಕರ್ ಗೆದ್ದಿದ್ದಾರೆ ಎಂದು ಕೇಳಿದ್ದೇನೆ. ಹಾ, ಎ.ಆರ್.ರೆಹಮಾನ್ ಆತ ಯಾರೆಂಬುದು ಸಹ ನನಗೆ ಗೊತ್ತಿಲ್ಲ'' ಎಂದಿದ್ದಾರೆ ಬಾಲಕೃಷ್ಣ. ಎ.ಆರ್.ರೆಹಮಾನ್ ಕೆಲವು ತೆಲುಗು ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಅಲ್ಲದೆ ರೆಹಮಾನ್ ಸಂಗೀತ ನೀಡಿದ ಹಲವಾರು ತಮಿಳು ಹಾಡುಗಳು ತೆಲುಗಿಗೂ ಡಬ್ ಆಗಿವೆ. ಆದರೆ ಮೂರು ದಶಕದಿಂದ ತೆಲುಗು ಸಿನಿಮಾ ರಂಗದಲ್ಲಿರುವ ಬಾಲಕೃಷ್ಣಗೆ ಎ.ಆರ್.ರೆಹಮಾನ್ ಗೊತ್ತಿಲ್ಲ ಎಂಬುದೇ ಆಶ್ಚರ್ಯ. ಅಥವಾ ಅಹಮ್ಮಿನಿಂದಾಗಿ ರೆಹಮಾನ್ ಯಾರೆಂದು ಗೊತ್ತಿಲ್ಲ ಎಂದರೇ ಬಾಲಕೃಷ್ಣ?

ಜೇಮ್ಸ್ ಕ್ಯಾಮರಾನ್ ಕೆಲಸದ ಬಗ್ಗೆ ಬಾಲಕೃಷ್ಣ ತಕರಾರು!
''ಏಕೆ ನೀವು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತೀರಿ?'' ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಕಡಿಮೆ ಸಮಯದಲ್ಲಿ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡುವುದು ನನ್ನ ಸ್ಟೈಲ್, ಅವನ್ಯಾರೊ 'ಟೈಟಾನಿಕ್' ಡೈರೆಕ್ಟರ್ ಇದ್ದಾನಲ್ಲ ಅವನ ಹಾಗೆ ಒಂದೇ ಸಿನಿಮಾವನ್ನು ವರ್ಷಗಟ್ಟಲೆ ಮಾಡಿಕೊಂಡು ಕೂರಲು ನನಗೆ ಸಾಧ್ಯವಿಲ್ಲ'' ಎಂದಿದ್ದಾರೆ ಬಾಲಕೃಷ್ಣ.

ಭಾರತ ರತ್ನ ಎನ್ಟಿಆರ್ ಕಾಲ ಉಗುರಿಗೂ ಸಮವಲ್ಲ: ಬಾಲಕೃಷ್ಣ
ಇನ್ನು ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾತನಾಡಿ, ''ಭಾರತ ರತ್ನ ಪ್ರಶಸ್ತಿಯು ಎನ್ಟಿಆರ್ (ಬಾಲಕೃಷ್ಣ ತಂದೆ) ಕಾಲ ಬೆರಳ ಉಗುರಿಗು ಸಹ ಸಮವಲ್ಲ. ಆ ಪ್ರಶಸ್ತಿ ನಮ್ಮ ತಂದೆಗೆ ಸಿಗದೇ ಇರದಿರುವುದಕ್ಕೆ ಆ ಪ್ರಶಸ್ತಿಗಳು ಬೇಸರ ಮಾಡಿಕೊಳ್ಳಬೇಕು, ನಮ್ಮ ಕುಟುಂಬವಾಗಲಿ, ನನ್ನ ತಂದೆಯಾಗಲಿ ಅಲ್ಲ'' ಎಂದಿದ್ದಾರೆ ಬಾಲಕೃಷ್ಣ.
Recommended Video

ಎನ್ಟಿಆರ್ಗೆ ಭಾರತ ರತ್ನ ನೀಡಲು ಒತ್ತಾಯ
ಹಿರಿಯ ನಟ, ಅವಿಭಜಿತ ಆಂಧ್ರಪ್ರದೇಶದ ಸಿಎಂ ಆಗಿದ್ದ ಎನ್ಟಿಆರ್ ಅವರಿಗೆ ಭಾರತ ರತ್ನ ಕೊಡಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಆದರೆ ಅವರಿಗೆ ಭಾರತ ರತ್ನ ನೀಡಲಾಗಿಲ್ಲ. ಅದೇ ವಿಷಯವನ್ನು ಮಾತನಾಡುತ್ತಾ ಬಾಲಕೃಷ್ಣ ಈ ಮೇಲಿನಂತೆ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಬಾಲಕೃಷ್ಣ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.


Click it and Unblock the Notifications











