"ಆತ ಮಾತ್ರ ಪ್ಯಾನ್ ಇಂಡಿಯಾ ನಟ": ನಾನಿ ಹೇಳಿಕೆಗೆ ಟಾಲಿವುಡ್ ಸ್ಟಾರ್ಸ್ ಫ್ಯಾನ್ಸ್ ಗರಂ
ಸ್ಟಾರ್ ನಟರು ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಇದೇ ತಪ್ಪನ್ನು ತೆಲುಗು ನಟ ನಾನಿ ಕೂಡ ಮಾಡಿದ್ದಾರೆ. ಸದ್ಯ ಮಲಯಾಳಂನ 'ಕಿಂಗ್ ಆಫ್ ಕೋತಾ' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾ ಪ್ರೀ ರಿಲೀಸ್ ಈವೆಂಟ್ನಲ್ಲಿ ನಾನಿ ನೀಡಿದ ಹೇಳಿಕೆ ಕೆಲವರ ಬೇಸರಕ್ಕೆ ಕಾರಣವಾಗಿದೆ.
'ಕಿಂಗ್ ಆಫ್ ಕೋತಾ' ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಹೀರೊ ಆಗಿ ನಟಿಸಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಇನ್ನು ಚಿತ್ರದ ತೆಲುಗು ಪ್ರೀ ರಿಲೀಸ್ ಈವೆಂಟ್ಗೆ ನಾನಿ ಹಾಗೂ ರಾಣಾ ದಗ್ಗುಬಾಟಿ ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದರು. ಈ ವೇಳೆ ನಾನಿ ಮಾತನಾಡಿ ದುಲ್ಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈವೆಂಟ್ನಲ್ಲಿ ಪ್ಯಾನ್ ಇಂಡಿಯಾ ಹೀರೊ ಬಗ್ಗೆ ಮಾತನಾಡುತ್ತಾ ನಾನಿ ನೀಡಿದ ಹೇಳಿಕೆ ವೈರಲ್ ಆಗ್ತಿದೆ. "ನಾವೆಲ್ಲಾ ಈಗ ಪ್ಯಾನ್ ಇಂಡಿಯಾ ಸಿನಿಮಾ ಎಂದು ಮಾತನಾಡುತ್ತಿದ್ದೇವೆ. ನನಗೆ ಆ ಪದ ಇಷ್ಟವಿಲ್ಲ. ಆದರೆ ನನಗೆ ಗೊತ್ತಿರುವ ನಟರಲ್ಲಿ ಪ್ಯಾನ್ ಇಂಡಿಯಾ ನಟ ಯಾರಾದರೂ ಇದ್ದರೆ ಅದು ದುಲ್ಕರ್ ಮಾತ್ರ. ಯಾಕಂದ್ರೆ ದುಲ್ಕರ್ಗಾಗಿ ಹಿಂದಿ ನಿರ್ದೇಶಕ ಕಥೆ ಬರೆಯುತ್ತಾನೆ. ತೆಲುಗು ನಿರ್ದೇಶಕ ಕೂಡ ಸ್ಟ್ರಿಪ್ಟ್ ಸಿದ್ಧಪಡಿಸುತ್ತಾನೆ. ತಮಿಳು, ಮಲಯಾಳಂ ನಿರ್ದೇಶಕರು ಕಥೆ ಬರೆಯುತ್ತಿದ್ದಾರೆ. ನಿಜವಾದ ಪ್ಯಾನ್ ಇಂಡಿಯಾ ನಟ ಅನ್ನೋದಕ್ಕೆ ಅರ್ಥ ಇದು" ಎಂದಿದ್ದಾರೆ.
ದುಲ್ಕರ್ ನಿಜವಾಗಿಯೇ ಪ್ಯಾನ್ ಇಂಡಿಯಾ ಸ್ಟಾರ್, ಅದರಲ್ಲಿ ದೂಸ್ರಾ ಮಾತಿಲ್ಲ. ಆದರೆ ನಾನಿ ಹೇಳಿಕೆಗೆ ಪ್ರಭಾಸ್, ಅಲ್ಲು ಅರ್ಜುನ್, ರಾಮ್ಚರಣ್, ಜ್ಯೂ. ಎನ್ಟಿಆರ್ ಅಭಿಮಾನಿಗಳು ಗರಂ ಆಗಿದ್ದಾರೆ. ಪ್ಯಾನ್ ಇಂಡಿಯಾ ಹೀರೊ ಯಾರು ಅಂತ ಹೇಳೋಕೆ ನೀವ್ಯಾರು? ಪ್ರೇಕ್ಷಕರು ಅದನ್ನು ನಿರ್ಧರಿಸುತ್ತಾರೆ ಎಂದು ಫೈರ್ ಆಗ್ತಿದ್ದಾರೆ. ನೀನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಕ್ಸಸ್ ಆಗ್ಲಿಲ್ಲ ಎನ್ನುವ ಕಾರಣಕ್ಕೆ ಈ ತರ ಹೇಳಬೇಡ. ದುಲ್ಕರ್ ಮಾತ್ರ ಪ್ಯಾನ್ ಇಂಡಿಯಾ ಸ್ಟಾರ್ ಅಂತ ಯಾಕೆ ಹೇಳ್ತೀಯಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಭಿಲಾಷ್ ಜೋಶಿ 'ಕಿಂಗ್ ಆಫ್ ಕೋತ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ಫುಟ್ಬಾಲ್ ಆಟಗಾರನೊಬ್ಬ ತನ್ನ ಊರು ಹಾಗೂ ಊರಿನ ಜನರಿಗಾಗಿ ಗ್ಯಾಂಗಸ್ಟರ್ ಆಗಿ ಹೋರಾಟ ನಡೆಸುವ ಕತೆ ಈ ಚಿತ್ರದಲ್ಲಿದೆ. ಗೋಕುಲ್ ಸುರೇಶ್, ಐಶ್ವರ್ಯ ಲಕ್ಷ್ಮಿ ಚಿತ್ರದ ತಾರಾಗಣದಲ್ಲಿದ್ದಾರೆ.

ಇನ್ನು ಹೀರೊ ನಾನಿ ವಿಚಾರಕ್ಕೆ ಬಂದರೆ 'ದಸರಾ' ಸಿನಿಮಾ ಮೂಲಕ ಈ ವರ್ಷ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಸದ್ಯ 'ಹಾಯ್ ನಾನ್ನ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಾನಿ 30ನೇ ಸಿನಿಮಾ. ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೂಡ ತಮ್ಮ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವ ವಿಚಾರದಲ್ಲಿ ನಾನಿ ನೀಡಿದ್ದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದರು.
'ಅಂತೆ ಸುಂದರಾನಿಕಿ' ಸಿನಿಮಾ ಪ್ರಚಾರದ ವೇಳೆ "ಬಹುತೇಕ ಎಲ್ಲ ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತದೆ. ಅವರು ತೆಲುಗಿನಲ್ಲಿಯೇ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ನಮ್ಮ ಚಿತ್ರವನ್ನು ಕೂಡ ಕನ್ನಡಿಗರು ತೆಲುಗಿನಲ್ಲೇ ನೋಡುತ್ತಾರೆ. ಡಬ್ ಮಾಡಲ್ಲ" ಎಂದಿದ್ದರು. ನಾನಿ ಹೇಳಿಕೆಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದ್ದರು.


Click it and Unblock the Notifications











