ನರೇಶ್- ಪವಿತ್ರಾ ಲವ್ ಸ್ಟೋರಿ ರಮ್ಯಾ - ಸುಚೇಂದ್ರ ಪ್ರಸಾದ್ ವಿಲನ್? ಟ್ರೈಲರ್ನಲ್ಲಿ ಏನೇನಿದೆ?
ಭಾರೀ ಕುತೂಹಲ ಮೂಡಿಸಿರುವ ತೆಲುಗಿನ 'ಮಳ್ಳಿ ಪೆಳ್ಳಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ರಿಲೇಷನ್ಶಿಪ್ ವಿಚಾರವನ್ನು ತೋರಿಸಲಾಗ್ತಿದೆ. ತಮ್ಮದೇ ನಿಜಜೀವನದ ಘಟನೆಗಳ ಚಿತ್ರದಲ್ಲಿ ನರೇಶ್- ಪವಿತ್ರಾ ನಟಿಸಿದ್ದಾರೆ. ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ ಈ ಸಿನಿಮಾ ಮಾಡಿದ್ದಾರೆ ಅನ್ನಿಸ್ತಿದೆ.
ಎಂ. ಎಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ವರ್ಷ ತೆಲುಗು ನಟ ನರೇಶ್ ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ನಡುವಿನ ರಗಳೆ ಭಾರಿ ಸದ್ದು ಮಾಡಿತ್ತು. ಮೂವರು ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ತಮ್ಮ ಹಾಗೂ ನರೇಶ್ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು. ಮೊದಲಿಗೆ ಇದನ್ನು ನರೇಶ್- ಪವಿತ್ರಾ ಅಲ್ಲಗಳೆದಿದ್ದರು.

ಮೈಸೂರಿನ ಹೋಟೆಲ್ ಕೋಣೆಯಲ್ಲಿ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆ ಹೈಡ್ರಾಮಾದ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡುತ್ತಿದ್ದರೆ ನರೇಶ್ ತಮ್ಮ ದೃಷ್ಟಿಕೋನದಲ್ಲಿ ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ. ತಮ್ಮ ಹಾಗೂ ಪವಿತ್ರಾ ಲೋಕೇಶ್ ಜೊತೆಗಿನ ರಿಲೇಷನ್ಶಿಪ್ಗೆ ಕಾರಣ ಏನು ಎನ್ನುವುದನ್ನು ಪ್ರಪಂಚಕ್ಕೆ ಸಾರಿ ಹೇಳುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ಒಂದರ್ಥದಲ್ಲಿ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಹಾಗೂ ಸುಚೇಂದ್ರ ಪ್ರಸಾದ್ ಇಬ್ಬರನ್ನು ವಿಲನ್ಗಳ ರೀತಿ ತೋರಿಸಿದ್ದಾರೆ ಎನ್ನಬಹುದು.

3ನೇ ಪತ್ನಿ ಜೊತೆಗೆ ನರೇಶ್ಗೆ ಪ್ರತಿ ದಿನ ಜಗಳ, ಇತ್ತ ಪವಿತ್ರಾ ಲೋಕೇಶ್ಗೂ ಪತಿ ಜೊತೆ ಎಲ್ಲವೂ ಸರಿಯಿಲ್ಲ ಎನ್ನುವ ಸಂದರ್ಭದಲ್ಲಿ ಇಬ್ಬರಿಗೂ ಟ್ರೂ ಲವ್ ಶುರುವಾಯಿತು ಎನ್ನುವುದನ್ನು ಹೇಳಲು ಹೊರಟಿದ್ದಾರೆ. ವಯಸ್ಸಾದವನನ್ನು ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡು ಮದುವೆ ಆಗಿದ್ದು ನನ್ನ ತಪ್ಪು ಎನ್ನುವ ರಮ್ಯಾ, ಇನ್ನು 5 ವರ್ಷ ಜೊತೆಯಾಗಿದ್ದರು ಇಬ್ಬರ ನಡುವೆ ಅನ್ಯೋನ್ಯತೆ, ಅನುರಾಗ ಇಲ್ಲ ಎನ್ನುವ ಸುಚೇಂದ್ರ ಪ್ರಸಾದ್ ಪಾತ್ರಗಳನ್ನು ತೋರಿಸಲಾಗಿದೆ.
ಈ ವಯಸ್ಸಿನಲ್ಲಿ ಲವ್ ಏನು ಸರ್, ಎಂದು ಕೇಳುವವರ ನಡುವೆಯೇ ವಯಸ್ಸಿಗೂ ಲವ್ಗೂ ಸಂಬಂಧ ಇಲ್ಲ ಎಂದು ನರೇಶ್ ಪವಿತ್ರಾ ಸಾರಿ ಹೇಳುವಂತೆ ಚಿತ್ರವನ್ನು ಕಟ್ಟಿಕೊಡಲಾಗಿದೆ. ಮೈಸೂರು ಹೋಟೆಲ್ ಹೈಡ್ರಾಮಾದ ಝಲಕ್ ಅನ್ನು ಮತ್ತೊಮ್ಮೆ ಟ್ರೈಲರ್ನಲ್ಲಿ ತೋರಿಸಲಾಗಿದೆ. ಇನ್ನು ನಿಜ ಜೀವನದಲ್ಲಿ ರಮ್ಯಾ ಘುಪತಿ ಅವರಿಗೆ ನರೇಶ್ ಡಿವೋರ್ಸ್ ಕೇಳಿದ್ದಾರೆ. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ರಘುಪತಿ ಇದಕ್ಕೆ ಒಪ್ಪುತ್ತಿಲ್ಲ. ಆ ವಿಚಾರದ ಪ್ರಸ್ತಾಪವೂ ಟ್ರೈಲರ್ನಲ್ಲಿದೆ.
ನರೇಶ್ ತಂದೆ ಸೂಪರ್ ಸ್ಟಾರ್ ಕೃಷ್ಣ ಪಾತ್ರದಲ್ಲಿ ಶರತ್ ಬಾಬು ನಟಿಸಿದ್ದಾರೆ. ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆಗಿ ವನಿತಾ ವಿಜಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಜಯಸುಧಾ, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ 'ಮಳ್ಳಿ ಪೆಳ್ಳಿ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಬಂದು 50 ವರ್ಷಗಳಾದ ಸಂದರ್ಭದಲ್ಲಿ ಸ್ವತಃ ನರೇಶ್ ತಮ್ಮದೇ ವಿಜಯ್ ಕೃಷ್ಣ ನರೇಶ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ, ಅನಂತ ಶ್ರೀರಾಮ್ ಸಾಹಿತ್ಯ ಇದೆ. ಮತ್ತೆ ಮದುವೆ ಹೆಸರಿನಲ್ಲಿ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಮೇ 26ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿತ್ತು. ಆದರೆ ಟ್ರೈಲರ್ನಲ್ಲಿ ರಿಲೀಸ್ ಡೇಟ್ ಬಗ್ಗೆ ಪ್ರಸ್ತಾಪ ಇಲ್ಲ.


Click it and Unblock the Notifications











