ಪವಿತ್ರಾ ಲೋಕೇಶ್ ಭೇಟಿ ಆಗಿದ್ದು ಹೇಗೆ? ಅವರೊಟ್ಟಿಗಿನ ಸಂಬಂಧ ಎಂಥಹದ್ದು? ಮಾಹಿತಿ ಬಿಚ್ಚಿಟ್ಟ ನರೇಶ್
ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹದ ಸುದ್ದಿ ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. ಈ ವಿವಾದದ ಕೇಂದ್ರದಲ್ಲಿರುವ ನರೇಶ್, ಪವಿತ್ರಾ ಲೋಕೇಶ್ ಹಾಗೂ ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ, ಸುಚೇಂದ್ರ ಪ್ರಸಾದ್ ತಮ್ಮ ತಮ್ಮ ವಾದಗಳನ್ನು ಹರಿಬಿಡುತ್ತಿದ್ದಾರೆ.
ಮೊದಲಿಗೆ ಕನ್ನಡ ಮಾಧ್ಯಮದೊಟ್ಟಿಗೆ ಮಾತನಾಡಿದ್ದ ರಮ್ಯಾ ರಘುಪತಿ, ನರೇಶ್ ತಮಗೆ ಮೋಸ ಮಾಡಿದ್ದಾರೆಂದು, ಪ್ರಭಾವ ಬಳಸಿ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆಸಿ, ನನ್ನ ವಿರುದ್ಧ ಜನರನ್ನು ಛೂ ಬಿಟ್ಟು ಮಾನಹಾನಿ ಮಾಡಿದ್ದಾರೆ ಎಂದಿದ್ದರು. ಹಾಲಿ ಪತ್ನಿಗೆ ವಿವಾಹ ನೀಡದೇ ಪವಿತ್ರಾ ಲೋಕೇಶ್ ಅನ್ನು ನಿಯಮ ಬಾಹಿರವಾಗಿ ವಿವಾಹವಾಗಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ನಟ ನರೇಶ್ ಬೆಂಗಳೂರಿಗೆ ಆಗಮಿಸಿದ್ದು, ರಮ್ಯಾ ರಘುಪತಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ಅದರ ಜೊತೆಗೆ ತಮಗೆ ಪವಿತ್ರಾ ಲೋಕೇಶ್ ಪರಿಚಯ ಆಗಿದ್ದು ಹೇಗೆ, ಇಬ್ಬರು ಸ್ನೇಹಿತರಾಗಿದ್ದು ಹೇಗೆ? ಇಬ್ಬರ ಸಂಬಂಧ ಎಂಥಹದ್ದು ಎಂಬುದನ್ನು ವಿವರಿಸಿದ್ದಾರೆ.

ಈವರೆಗೆ ಒಬ್ಬರೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ: ನರೇಶ್
''ನಾನು ಸಿನಿಮಾ ರಂಗದವನು, 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೂರಾರು ಮಹಿಳೆಯೊಟ್ಟಿಗೆ ನಟಿಸಿದ್ದೇನೆ. ಈವರೆಗೆ ಒಬ್ಬೇ ಒಬ್ಬ ಮಹಿಳೆ ನರೇಶ್ ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಹೇಳಿಲ್ಲ. ಆದರೆ ನನ್ನ ಮದುವೆ ಬಗ್ಗೆ ನೀವು ಪ್ರಶ್ನೆ ಮಾಡಬಹುದು. ಹೌದು ನನ್ನ ಮದುವೆ ಸಫಲವಾಗಲಿಲ್ಲ. ವೈಫಲ್ಯಗಳೇ ಅದರಲ್ಲಿ ತುಂಬಿವೆ. ಅಲ್ಲೂ ಸಹ ಅವರೇ ನನ್ನಿಂದ ದೂರ ಹೋದರು, ನಾನು ಅವರನ್ನು ತಡೆಯಲಿಲ್ಲ. ನಾನು ರಾಜಕೀಯದಲ್ಲಿದ್ದೆ, ಸಮಾಜ ಸೇವೆಯಲ್ಲಿದ್ದೆ, ಅವರು ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೋಗಬೇಕು ಎಂದುಕೊಂಡರು ಹೋದರು'' ಎಂದಿದ್ದಾರೆ ನರೇಶ್.

2016 ರಲ್ಲಿ ಮೊದಲ ಭೇಟಿ
''ನಾನು ಗಂಡಸು, ನಾನೂ ಮನುಷ್ಯ, ನನಗೆ ಭಾವನಾತ್ಮಕ ಬೆಂಬಲ ಬೇಕು, ಆಸರೆ ಬೇಕು, ನನಗೂ ಗೆಳೆತನ ಬೇಕು. ನಾನು, ಮೊದಲಿಗೆ ಪವಿತ್ರಾ ಲೋಕೇಶ್ ಅನ್ನು 'ಹ್ಯಾಪಿ ವೆಡ್ಡಿಂಗ್' (2016) ಸಿನಿಮಾ ಸಂದರ್ಭದಲ್ಲಿ ಭೇಟಿಯಾದೆ. ಆಗ ನಾವು ಕೇವಲ ಗೆಳೆಯರಾಗಿದ್ದೆವು, ನಾವು ಕೇವಲ ಎರಡು ಮೂರು ಬಾರಿಯಷ್ಟೆ ಮಾತನಾಡಿದೆವು. ನಂತರ 'ಸಮ್ಮೋಹನಂ' (2018) ಸಿನಿಮಾದ ವೇಳೆ ನಾವು ಹತ್ತಿರವಾದೆವು, ನಾನು, ನನ್ನ ಸಮಸ್ಯೆ ಹೇಳಿಕೊಂಡೆ ಆಕೆ ಆಕೆಯ ಕಷ್ಟಗಳನ್ನು ಹೇಳಿಕೊಂಡರು. ನಾವು ಪರಸ್ಪರ ಕನೆಕ್ಟ್ ಆದೆವು, ನಾವು ಒಳ್ಳೆಯ ಸ್ನೇಹಿತರಾದೆವು'' ಎಂದಿದ್ದಾರೆ ನರೇಶ್.

ಪವಿತ್ರಾ ನಮ್ಮ ಕುಟುಂಬದ ಸದಸ್ಯೆ: ನರೇಶ್
ಹಾಗೆ ಬರಬರುತ್ತಾ ನಾವು ಆತ್ಮೀಯ ಗೆಳೆಯರಾದೆವು, ಆಕೆ ನಮ್ಮ ಕುಟುಂಬದ ಸದಸ್ಯರಾದರು. ರಮ್ಯಾನೇ ಹೇಳುತ್ತಿರುವಂತೆ ಪವಿತ್ರಾ ಎಲ್ಲ ಫ್ಯಾಮಿಲಿ ಪಂಕ್ಷನ್ಗಳಲ್ಲಿ ಕಾಣಿಸಿಕೊಂಡರು, ನಿಜ, ಆದರೆ ಆಗ ರಮ್ಯಾ ಎಲ್ಲಿಹೋಗಿದ್ದರು, ನಮ್ಮ ಮನೆಯ ಕುಟುಂಬ ಕಾರ್ಯಕ್ರಮಗಳಲ್ಲಿ ರಮ್ಯಾ ಏಕಿಲ್ಲ, ಆಕೆ ಬೇರೆಲ್ಲೊ, ಬೇರ್ಯಾರೊ ಜೊತೆಗೆ ಇದ್ದರು. ಅದನ್ನೆಲ್ಲ ನನಗೆ ಮಾತನಾಡಲು ಇಷ್ಟವಿಲ್ಲ. ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಲು ನನಗೆ ಇಷ್ಟವಿಲ್ಲ'' ಎಂದಿದ್ದಾರೆ ನರೇಶ್.

ಪವಿತ್ರಾ ನನಗೆ ಎಲ್ಲವೂ ಆಗಿದ್ದಾಳೆ: ನರೇಶ್
''ಪವಿತ್ರಾ ಲೋಕೇಶ್ ನನ್ನ ಆಪ್ತ ಸ್ನೇಹಿತೆ, ಫ್ರೆಂಡ್, ಫಿಲಾಸಫರ್, ಗೈಡ್, ಆಕೆ ನನ್ನ ಸಂಗಾತಿ, ನಾನು ಈಗ ರಮ್ಯಾ ರಘುಪತಿ ಜೊತೆ ವಿಚ್ಛೇಧನಕ್ಕೆ ಅರ್ಜಿ ಹಾಕಿರುವುದಕ್ಕೆ ಪವಿತ್ರಾ ಲೋಕೇಶ್ ಕಾರಣ ಅಲ್ಲ. ಪವಿತ್ರಾ ನನ್ನ ಜೀವನಕ್ಕೆ ಬಂದಿರುವುದು ಕೇವಲ ಮೂರು ನಾಲ್ಕು ವರ್ಷದ ಹಿಂದೆ, ಆದರೆ ನಾನು ರಮ್ಯಾ ಇಂದ ದೂರಾಗಿದ್ದು ಎಂಟು ವರ್ಷಗಳ ಹಿಂದೆ'' ಎಂದಿದ್ದಾರೆ ನರೇಶ್.

ಮದುವೆಯಾದರೆ ಎಲ್ಲರಿಗೂ ಹೇಳುತ್ತೇನೆ: ನರೇಶ್
''ಸಂಬಂಧ ಎಂದರೆ, ಗೆಳೆತನ, ಆಕೆ (ರಮ್ಯಾ ರಘುಪತಿ) ನನ್ನನ್ನು ಬಿಟ್ಟು ಆರೇಳು ವರ್ಷವಾಗಿವೆ, ಏನೇನೋ ಬ್ಯುಸಿನೆಸ್ ಮಾಡಿ ದುಷ್ಕರ್ಮಗಳನ್ನು ಮಾಡಿ ಏನೇನೋ ಮಾಡಿದ್ದಾಳೆ ಆಕೆ. ಇದು ಎಷ್ಟು ದೊಡ್ಡ ಹಗರಣ ಎಂದು ಆರಂಭದಲ್ಲಿ ಗೊತ್ತಿರಲಿಲ್ಲ. ಆಕೆಗೂ ನನಗೂ ಸಂಬಂಧವಿಲ್ಲವೆಂದು ನಾನು ಪಬ್ಲಿಕ್ ನೊಟೀಸ್ ಇಶ್ಯು ಮಾಡಬೇಕಾಯಿತು. ನನ್ನ ಪಾಸ್ಪೋರ್ಟ್ನಲ್ಲಿ ಸಹ ಆಕೆಯ ಹೆಸರಿಲ್ಲ. ನಾನು ಮುಂದೇನು ಮಾಡುತ್ತೇನೆ ಎಂಬುದು ನನಗೆ ಬಿಟ್ಟಿದ್ದು, ನಾನು ಮದುವೆ ಆಗುತ್ತೀನಾ? ಲಿವಿನ್ ನಲ್ಲಿ ಇರುತ್ತೇನಾ? ಗೆಳೆಯರಾಗೇ ಇದ್ದುಬಿಡುತ್ತೇವಾ ಅದೆಲ್ಲ ನನಗೆ ಬಿಟ್ಟದ್ದು ಮದುವೆಯಾದರೆ ಎಲ್ಲರಿಗೂ ಗೊತ್ತಾಗುವಂತೆಯೇ ಆಗುತ್ತೇನೆ. ರಮ್ಯಾ ರಘುಪತಿ ಬಹಳ ಕ್ರಿಮಿನಲ್ ಆಕೆಯ ಕ್ರಿಮಿನಲ್ ಕೆಲಸಗಳನ್ನು ಕಾನೂನು ಮೂಲಕ ಎದುರಿಸುತ್ತೇನೆ ಎಂದಿದ್ದಾರೆ ನರೇಶ್.


Click it and Unblock the Notifications











