'ಟೈಗರ್ ಬ್ರೋ ನೀನು ಆತ್ಮಹತ್ಯೆ ಮಾಡ್ಕೊಬಿಡು'; ಪುಷ್ಪ 2 ಚಿತ್ರದ ಈ ದೃಶ್ಯ ಕಂಡು ಎದ್ದುಬಿದ್ದು ನಕ್ಕ ನೆಟ್ಟಿಗರು!
2021ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ವರ್ಷದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದ್ದ ಪುಷ್ಪ ದ ರೈಸ್ ಚಿತ್ರದ ಎರಡನೇ ಭಾಗ ಪುಷ್ಪ ದ ರೂಲ್ ಚಿತ್ರೀಕರಣ ಸದ್ಯ ಭರದಿಂದ ಸಾಗುತ್ತಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಪೊಲೀಸ್ ಭನ್ವರ್ ಸಿಂಗ್ ಶೆಖಾವತ್ಗೆ ಟಾಂಗ್ ನೀಡಿ ನಾನು ಯಾರಿಗೂ ತಲೆ ಬಾಗುವವನಲ್ಲ ಎಂದು ಚಾಲೆಂಜ್ ಮಾಡಿದ್ದ ಪುಷ್ಪರಾಜ್ ಪೊಲೀಸ್ ಅವರನ್ನೇ ಎದುರು ಹಾಕಿಕೊಂಡು ಎರಡನೇ ಭಾಗದಲ್ಲಿ ಏನು ಮಾಡಲಿದ್ದಾನೆ ಎಂಬ ಕುತೂಹಲ ಹಾಗೂ ಪ್ರಶ್ನೆ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು.
ಇನ್ನು ಎರಡನೇ ಭಾಗ ಮೊದಲ ಭಾಗಕ್ಕಿಂತ ಹೆಚ್ಚು ಮಾಸ್ ಆಗಿ ಇರಲಿದೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಈ ಪ್ರಶ್ನೆಗೆ ಹಾಗೂ ಕುತೂಹಲಗಳಿಗೆ ಇಂದು ( ಏಪ್ರಿಲ್ 7 ) ಚಿತ್ರತಂಡ ಬಿಡುಗಡೆ ಮಾಡಿರುವ 'ವೇರ್ ಈಸ್ ಪುಷ್ಪ' ವಿಡಿಯೊ ಗ್ಲಿಂಪ್ಸ್ ಬ್ರೇಕ್ ಹಾಕಿದೆ. ಹೌದು, ನಾಳೆ ಅಲ್ಲು ಅರ್ಜುನ್ ಹುಟ್ಟುಹಬ್ಬವಿರುವ ಕಾರಣ ಪುಷ್ಪ ದ ರೈಸ್ ಚಿತ್ರದ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಲಾಗಿದೆ.

ತಿರುಪತಿ ಜೈಲಿನಿಂದ ಬುಲೆಟ್ ಏಟಿನ ಗಾಯಗಳೊಂದಿಗೆ ತಪ್ಪಿಸಿಕೊಂಡ ಪುಷ್ಪ ಶೇಶಾಚಲಂ ಅರಣ್ಯದಲ್ಲಿ ಅಡಗಿಕೊಂಡಿದ್ದಾನೆ ಎಂಬ ಶಂಕೆ ಇದೆ ಎಂಬ ಸುದ್ದಿ ವಾಹಿನಿಯ ಪ್ರಕಟಣೆಯಿಂದ ಆರಂಭಗೊಳ್ಳುವ ಈ ವಿಡಿಯೊದಲ್ಲಿ ಪುಷ್ಪ ಬದುಕಿದ್ದಾನಾ ಎಂದು ಹಲವರು ಎದುರು ನೋಡುತ್ತಿರುವ ದೃಶ್ಯಗಳಿವೆ. ಅನೇಕ ಗುಂಡೇಟು ತಿಂದಿರುವ ಪುಷ್ಪ ಬದುಕಿರಲು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರೆ, ಸುದ್ದಿ ವಾಹಿನಿಗಳು ಪೊಲೀಸರೇ ಬೇಕಂತಲೇ ಈ ರೀತಿ ಮಾಡಿ ಪುಷ್ಪನನ್ನು ಸಾಯಿಸಲು ಯೋಜನೆ ಹಾಕಿರಬಹುದಾ ಎಂಬ ಅನುಮಾನ ವ್ಯಕ್ತಪಡಿಸುವ ದೃಶ್ಯಗಳೂ ಸಹ ಇವೆ.
ಇನ್ನು ಸುದ್ದಿ ವಾಹಿನಿಗಳಲ್ಲಿ ಈ ರೀತಿಯ ಸುದ್ದಿಗಳು ಹರಿದಾಡುತ್ತಿವೆ ಎಂದು ಕುತೂಹಲ ಹುಟ್ಟಿಸುವಂತಹ ದೃಶ್ಯಗಳನ್ನು ವಿಡಿಯೊನ ಮೊದಲಿಗೆ ತೋರಿಸಿರುವ ಚಿತ್ರ ತಂಡ ಬಳಿಕ ಜನರು ತಮಗೆ ಪುಷ್ಪ ಮಾಡಿರುವ ಸಹಾಯಗಳನ್ನು ಹೇಳಿಕೊಳ್ಳುವ ದೃಶ್ಯಗಳು ಹಾಗೂ ಅದೇ ಜನ ಪುಷ್ಪನಿಗೆ ಜೈಕಾರ ಹಾಕುವ ಮತ್ತು ಪೊಲೀಸರಿಗೆ ಧಿಕ್ಕಾರ ಹಾಕುವ ದೃಶ್ಯಗಳನ್ನೂ ಸಹ ತೋರಿಸಿದ್ದಾರೆ.

ಹೀಗೆ ಪುಷ್ಪ ಎಲ್ಲಿದ್ದಾನೆ ಎನ್ನುವ ಕುತೂಹಲವನ್ನು ಹುಟ್ಟಿಸಿ ವಿಡಿಯೊ ಕೊನೆಗೆ ಹುಲಿ ಓಡಾಟವನ್ನು ಗಮನಿಸಲು ಇಟ್ಟಿರುವ ಕ್ಯಾಮೆರಾದಲ್ಲಿ ಪುಷ್ಪ ಕಾಣಿಸಿಕೊಳ್ಳುವುದನ್ನು ತೋರಿಸಲಾಗಿದೆ. ಕ್ಯಾಮೆರಾದಲ್ಲಿ ಮೊದಲಿಗೆ ಹುಲಿ ಯಾರನ್ನೋ ನೋಡಿ ಘರ್ಜಿಸಲಿದ್ದು, ಆ ವ್ಯಕ್ತಿ ತನ್ನ ಸನಿಹಕ್ಕೆ ಬರುತ್ತಿದ್ದಂತೆ ಹುಲಿಯೇ ತನ್ನ ಹೆಜ್ಜೆಯನ್ನು ಹಿಂದಿಡಲಿದೆ. ಆ ವ್ಯಕ್ತಿ ಯಾರೆಂದು ನೋಡಿದರೆ ಆತನೇ ಪುಷ್ಪ. ಈ ಸಂದರ್ಭಕ್ಕೆ ತಕ್ಕಂತೆ 'ಕಾಡಿನ ಪ್ರಾಣಿಗಳು ಎರಡು ಹೆಜ್ಜೆ ಹಿಂದಿಕ್ಕಿದರೆ ಅಲ್ಲಿ ಹುಲಿ ಬಂದಿದೆ ಎಂದರ್ಥ. ಅದೇ ಹುಲಿ ಎರಡು ಹೆಜ್ಜೆ ಹಿಂದೆ ಇಟ್ಟರೆ ಅಲ್ಲಿ ಪುಷ್ಪ ಬಂದಿದ್ದಾನೆ ಎಂದರ್ಥ' ಎಂಬ ಡೈಲಾಗ್ ಸಹ ಇದೆ.
ಇನ್ನು ಹುಲಿ ಕಡೆಗೆ ನೋಡುವ ಪುಷ್ಪ ತನ್ನ ಸಿಗ್ನೇಚರ್ ಡೈಲಾಗ್ 'ತಗ್ಗೆದೆ ಲೇ' ಎಂದು ಹೇಳಲಿದ್ದಾನೆ. ಅಲ್ಲಿಗೆ ಪುಷ್ಪ ಎಲ್ಲಿ ಎಂದು ಆತಂಕದಿಂದ ಕಾಯುತ್ತಿದ್ದ ಜನರು ಪುಷ್ಪ ಬದುಕೇ ಇದ್ದಾನೆ ಎಂದು ಖುಷಿಯಿಂದ ಕುಣಿಯಲಾರಂಭಿಸುತ್ತಾರೆ. ಹೀಗೆ ನಾಯಕ ಅಲ್ಲು ಅರ್ಜುನ್ ಎಂಟ್ರಿಗೆ ಬಿಲ್ಡಪ್ ಕೊಡಲು ಹುಲಿಯನ್ನು ಬಳಸಿಕೊಂಡಿರುವ ರೀತಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಅದನ್ನು ಹುಲಿ ಅಂದುಕೊಂಡಿದ್ದೀರ ಅಥವಾ ನಾಯಿ ಅಂದುಕೊಂಡಿದ್ದೀರ ಕೇವಲ ಒಬ್ಬ ಮನುಷ್ಯನನ್ನು ಕಂಡು ಹೆದರಿಕೊಳ್ಳಲು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಹೊಸದಾಗಿ ಪ್ರಯತ್ನ ಮಾಡೋಣ ಎಂದುಕೊಂಡಿದ್ದಾರೆ ಆದರೆ ನಿಜವಾಗಿಯೂ ಆ ಹುಲಿ ದೃಶ್ಯ ಕೆಲಸ ಮಾಡಿಲ್ಲ ಎಂದಿದ್ದಾರೆ, ಟೈಗರ್ ಬ್ರೋ ನೀನು ಆತ್ಮಹತ್ಯೆ ಮಾಡ್ಕೊಬಿಡು ಹಾಗೂ ಈ ದೃಶ್ಯ ಕಾಮಿಡಿ ಆಗಲಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಹೀಗೆ ಕೆಲವರು ಈ ದೃಶ್ಯವನ್ನು ಭಿನ್ನ ವಿಭಿನ್ನವಾಗಿ ಟ್ರೋಲ್ ಮಾಡಿದ್ದರೆ ಇನ್ನೂ ಕೆಲವರು ಕಮರ್ಷಿಯಲ್ ಚಿತ್ರವೆಂದ ಮೇಲೆ ಇಂತಹ ದೃಶ್ಯಗಳಲ್ಲಿ ಲಾಜಿಕ್ ಹುಡುಕಬಾರದು, ಇದಕ್ಕಿಂತ ಕೆಟ್ಟ ದೃಶ್ಯಗಳು ಬೇರೆ ಚಿತ್ರಗಳಲ್ಲಿವೆ ಎಂದು ಪುಷ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.


Click it and Unblock the Notifications











