"ದೂರಾಗಬೇಕು ಅಂತ ಯಾರು ಮದ್ವೆ ಆಗಲ್ಲ, ನನ್ನ ಹೃದಯದ ಬಾಗಿಲು ಇನ್ನು ಓಪನ್ ಇದೆ": ಡಿವೋರ್ಸ್ ಬಗ್ಗೆ ಮೌನ ಮುರಿದ ನಿಹಾರಿಕಾ
ತೆಲುಗು ನಟಿ ನಿಹಾರಿಕಾ ಕೋನಿದೇಲ ಹಾಗೂ ಪತಿ ಚೈತನ್ಯಾ ಜೊನ್ನಲಗಡ್ಡ ಕಳೆದ ವರ್ಷ ದೂರಾಗಿದ್ದರು. ಮದುವೆಯಾಗಿ ಒಂದು ವರ್ಷಕ್ಕೆ ದಂಪತಿ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗುವ ನಿರ್ಧರಕ್ಕೆ ಬಂದಿದ್ದರು. 2 ವರ್ಷಗಳ ಬಳಿಕ ಕೋರ್ಟ್ ಡಿವೋರ್ಸ್ ನೀಡಿತ್ತು. ಇದೇ ಮೊದಲ ಬಾರಿಗೆ ಆ ಬಗ್ಗೆ ಮೆಗಾ ಡಾಟರ್ ಮಾತನಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ಈಕೆ. ಮೆಗಾ ಡಾಟರ್ ಅಂತ್ಲೇ ಅಭಿಮಾನಿಗಳು ಗುರ್ತಿಸುತ್ತಾರೆ. ಯಾವುದೇ ದೊಡ್ಡ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಅಪಾರ ಅಭಿಮಾನಿಗಳಿದ್ದಾರೆ. ಕೆಲ ಸಿನಿಮಾಗಳಲ್ಲಿ ನಿಹಾರಿಕಾ ನಟಿಸಿದ್ದು ತಮ್ಮದೇ ಬ್ಯಾನರ್ನಲ್ಲಿ ಸಣ್ಣ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿರುತ್ತಾರೆ.

3 ವರ್ಷಗಳ ಹಿಂದೆ ಉದಯ್ಪುರ್ ಉದಯವಿಲಾಸ್ ಪ್ಯಾಲೇಸ್ನಲ್ಲಿ ನಿಹಾರಿಕಾ ಹಾಗೂ ಚೈತನ್ಯಾ ಮದುವೆ ನಡೆದಿತ್ತು. ಈ ಅದ್ಧೂರಿ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಮೆಗಾ ಫ್ಯಾಮಿಲಿ ಸದಸ್ಯರು, ಚಿತ್ರರಂಗದ ತಾರೆಯರು ಭಾಗಿ ಆಗಿದ್ದರು. ಬಳಿಕ ಹೈದರಾಬಾದ್ನಲ್ಲಿ ರಿಸೆಪ್ಷನ್ ಪಾರ್ಟಿ ಸಹ ನಡೆದಿತ್ತು. ನಾಗಬಾಬು ತಮ್ಮ ಪ್ರೀತಿಯ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ನಿಹಾರಿಕಾ ಡಿವೋರ್ಸ್ ಪಡೆದಿದ್ದು ಹಲವರಿಗೆ ಅಚ್ಚರಿ ಉಂಟುಮಾಡಿತ್ತು. ಇದೇ ವಿಚಾರದ ಬಗ್ಗೆ ಮೊದಲ ಬಾರಿಗೆ ನಿಹಾರಿಕಾ ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಮೆಗಾ ಡಾಟರ್, "ಯಾರು ವರ್ಷದಲ್ಲಿ ದೂರ ಆಗಬೇಕು ಅಂತ ಅದ್ಧೂರಿಯಾಗಿ ಮದುವೆ ಆಗುವುದಿಲ್ಲ. ಇನ್ನು ನನ್ನ ಹೃದಯ ತೆರೆದೇ ಇದೆ" ಎಂದಿದ್ದಾರೆ.
"ನನ್ನದು ಅರೇಂಜ್ಡ್ ಮ್ಯಾರೇಜ್. ಡಿವೋರ್ಸ್ ಪಡೆದಾಗ ನನ್ನ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂತು. ಬಹಳ ನೋವಾಯಿತು, ಬಹಳ ಅತ್ತಿದ್ದೇನೆ. ಅದನ್ನು ಸಹಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ, ಎಲ್ಲರೂ ಜೀವನ ಪರ್ಯಂತ ಜೊತೆಯಾಗಿ ಇರಬೇಕು ಎಂದೇ ಮದುವೆ ಆಗುತ್ತಾರೆ. ವರ್ಷದೊಳಗೆ ಡಿವೋರ್ಸ್ ಪಡೆದುಕೊಳ್ಳೋಣ ಅಂತ ಅಷ್ಟೆಲ್ಲಾ ಖರ್ಚು ಮಾಡಿ ಯಾರು ಅದ್ಧೂರಿಯಾಗಿ ಮದುವೆ ಆಗಲ್ಲ. ರಿಜಿಸ್ಟರ್ ಮದುವೆ ಆದರೂ ಅಷ್ಟೇ, ಅದ್ಧೂರಿ ಮದುವೆ ಆದರೂ ಅಷ್ಟೇ"
"ರಿಲೇಷನ್ಶಿಪ್ ಚೆನ್ನಾಗಿ ಮುಂದುವರೆಯಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ನಾನು ಸಹ ಅದನ್ನೇ ಬಯಸಿದ್ದೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅಲ್ಲವೇ? ನನ್ನ ಬಗ್ಗೆ ಯಾರು ಏನೇ ಬರೆದರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದರು. ಕುಟುಂಬವನ್ನು ದೂಷಿಸಿದರು. ಆಗ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ"

"ನನ್ನ ಕುಟುಂಬ ನನ್ನನ್ನು ಯಾವತ್ತೂ ಭಾರ ಎಂದುಕೊಳ್ಳುವುದಿಲ್ಲ. ಈ ಎರಡು ವರ್ಷಗಳಲ್ಲಿ ಕುಟುಂಬದ ಬೆಲೆ ಏನು ಎಂದು ಗೊತ್ತಾಯಿತು. ಈ ಮದುವೆ- ಡಿವೋರ್ಸ್ನಿಂದ ಯಾರನ್ನು ನಂಬಬಾರದು ಅನ್ನೋದು ಗೊತ್ತಾಯಿತು. ಇದನ್ನು ಗುಣಪಾಠ ಎಂದುಕೊಳ್ಳುತ್ತೇನೆ. ಯಾವಾಗಲೂ ಹೀಗೆ ಸಿಂಗಲ್ ಆಗಿ ಉಳಿದುಬಿಡುವುದಿಲ್ಲ."
"ನನಗೆ ಇನ್ನು 30 ವರ್ಷ ವಯಸ್ಸು. ಒಳ್ಳೆ ವ್ಯಕ್ತಿ ಸಿಕ್ಕರೆ ನೋಡೋಣ, ನನ್ನ ಹೃದಯದ ಬಾಗಿಲು ಮುಚ್ಚಿಲ್ಲ, ಸದ್ಯಕ್ಕೆ ನನಗೆ ಸಾಕಷ್ಟು ಕನಸುಗಳಿವೆ. ಸಿನಿಮಾಗಳಲ್ಲಿ ನಟಿಸಬೇಕು, ಊರುರೂ ಸುತ್ತಬೇಕು ಎಂದುಕೊಂಡಿದ್ದೇನೆ. ಆ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ" ಎಂದು ನಿಹಾರಿಕಾ ಕೋನಿದೇಲ ಹೇಳಿದ್ದಾರೆ.
'ಒಕ ಮನಸು' ನಿಹಾರಿಕಾ ನಟಿಸಿದ ಚೊಚ್ಚಲ ಸಿನಿಮಾ. ಬಳಿಕ 'ಹ್ಯಾಪಿ ವೆಡ್ಡಿಂಗ್' ಹಾಗೂ 'ಸೂರ್ಯಕಾಂತಂ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಚಿರಂಜೀವಿ ಫ್ಯಾಮಿಲಿಯಿಂದ ಬಂದ ಏಕೈಕ ನಟಿ ನಿಹಾರಿಕಾ. ಇನ್ನುಳಿದಂತೆ ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್, ವರುಣ್ ತೇಜ್, ಸಾಯಿ ಧರಮ್ ತೇಜ್, ಪಂಜಾ ವೈಷ್ಣವ್ ಹೀಗೆ ಹಲವರು ಚಿರು ನೆರಳಿನಲ್ಲಿ ಹೀರೊಗಳಾಗಿ ಚಿತ್ರರಂಗ ಪ್ರವೇಶಿಸಿದರು.


Click it and Unblock the Notifications











