ಬಾಲಿವುಡ್ನಲ್ಲಿ 'ಕಾರ್ತಿಕೇಯ'- 2 ಕಾರುಬಾರು: 100 ಕೋಟಿ ರೂ. ಕ್ಲಬ್ನತ್ತ ಮಿಸ್ಟರಿ ಥ್ರಿಲ್ಲರ್!
ನಿಖಿಲ್ ಸಿದ್ಧಾರ್ಥ್ ನಟನೆಯ 'ಕಾರ್ತಿಕೇಯ'- 2 ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಒಂದು ಮೀಡಿಯಂ ಬಜೆಟ್ ಸಿನಿಮಾ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಿಶ್ವದಾದ್ಯಂತ ಈಗಾಗಲೇ 75 ಕೋಟಿ ರೂ. ಕಲೆಕ್ಷನ್ ಮಾಡಿರುವ ಸಿನಿಮಾ 100 ಕೋಟಿ ರೂ. ಕ್ಲಬ್ನತ್ತ ಮುನ್ನುಗ್ಗುತ್ತಿದೆ. ಈಗ ಭಾರತೀಯ ಚಿತ್ರರಂಗದಲ್ಲಿ 'ಕಾರ್ತಿಕೇಯ'- 2 ಸಿನಿಮಾ ದೊಡ್ಡಮಟ್ಟದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಬಾಲಿವುಡ್ ಸೂಪರ್ ಸ್ಟಾರ್ಗಳಾದ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾಗಳನ್ನು ಹಿಂದಿಕ್ಕಿ 'ಕಾರ್ತಿಕೇಯ'ನ ಆರ್ಭಟ ಜೋರಾಗಿದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಕಲೆಕ್ಷನ್ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತದೆ. ಆದರೆ 'ಕಾರ್ತಿಕೇಯ'- 2 ಸಿನಿಮಾ ವಿಚಾರದಲ್ಲಿ ಇದು ಉಲ್ಟಾ ಆಗುತ್ತಿದೆ. ಅಷ್ಟೇನೂ ನಿರೀಕ್ಷೆ ಇಲ್ಲದೇ ಆಗಸ್ಟ್ 13ಕ್ಕೆ ತೆರೆಗಪ್ಪಳಿಸಿದ್ದ ಈ ಮಿಸ್ಟರಿ ಅಡ್ವೆಂಚರಸ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಹಿಂದಿಗೆ ಡಬ್ ಮಾಡಿ 50 ಸ್ಕ್ರೀನ್ಗಳಲ್ಲಿ ಹಾಕಲಾಗಿತ್ತು. ಆದರೆ ಈಗ ಸ್ಕ್ರೀನ್ಗಳ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಇದು ಅಚ್ಚರಿ ಅನ್ನಿಸಿದರೂ ನಿಜ. ದಿನದಿಂದ ದಿನಕ್ಕೆ ಹಿಂದಿ ಬೆಲ್ಟ್ನಲ್ಲಿ 'ಕಾರ್ತಿಕೇಯ'- 2 ಸಿನಿಮಾ ಆರ್ಭಟ ಜೋರಾಗುತ್ತಿದೆ. ಶ್ರೀ ಕೃಷ್ಣನ ತತ್ವದ ಆಧಾರದಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹೀರೊ ನಿಖಿಲ್ ವೈದ್ಯನ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ಅನುಪಮಾ ಪರಮೇಶ್ವರನ್ ಮಿಂಚಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಅನುಪಮ್ ಕೇರ್ ಬಣ್ಣ ಹಚ್ಚಿದ್ದಾರೆ.
ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ಹಾಗೂ ದ್ವಾರಕೆಯ ಹಿನ್ನೆಲೆಯಲ್ಲಿ ನಿರ್ದೇಶಕ ಚಂದೂ ಮೋಂಡೇಟಿ ಸಿನಿಮಾ ಕಥೆ ಕಟ್ಟಿಕೊಟ್ಟಿದ್ದಾರೆ. ಶ್ರೀಕೃಷ್ಣನನ್ನು ಉತ್ತರ ಭಾರತದಲ್ಲಿ ಪೂಜಿಸುವವರ ಸಂಖ್ಯೆ ಹೆಚ್ಚು. ಹಾಗಾಗಿ 'ಕಾರ್ತಿಕೇಯ'- 2 ಸಿನಿಮಾ ಕತೆ ಅಲ್ಲಿನ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗಿದೆ. ಪರಿಣಾಮ ಡಬ್ ಸಿನಿಮಾ ಆದರೂ ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
ಕೃಷ್ಣ ಜನ್ಮಾಷ್ಠಮಿ ಸಂಭ್ರಮದಲ್ಲಿ ಮತ್ತಷ್ಟು ದೊಡ್ಟಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಅದೇ ಕಾರಣಕ್ಕೆ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಿದೆ. ಇನ್ನು 'ಲಾಲ್ ಸಿಂಗ್ ಚಡ್ಡಾ' ಹಾಗೂ 'ರಕ್ಷಾ ಬಂಧನ್' ಚಿತ್ರಗಳಿಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು 'ಕಾರ್ತಿಕೇಯ'- 2ಗೆ ಪ್ಲಸ್ ಆಗಿದೆ. ಆಂಧ್ರ, ತೆಲಂಗಾಣದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು ಓವರ್ಸೀಸ್ ಮಾರ್ಕೇಟ್ನಲ್ಲೂ ಸಿನಿಮಾ ಸದ್ದು ಮಾಡುತ್ತಿದೆ. ಸೆಕೆಂಡ್ ವೀಕೆಂಡ್ನಲ್ಲಿ ಆಮಿರ್, ಅಕ್ಷಯ್ ಸಿನಿಮಾಗಳಿಗಿಂತ ನಿಖಿಲ್ ಸಿನಿಮಾ ಕಲೆಕ್ಷನ್ ಡಬಲ್ ಆಗಿರುವುದು ಅಚ್ಚರಿ ಮೂಡಿಸಿದೆ.

'ಕಾರ್ತಿಕೇಯ'- 2 ಸಿನಿಮಾ ಚಿತ್ರೀಕರಣ ತಡವಾಗಿ ರಿಲೀಸ್ ಆಗುವುದೇ ಕಷ್ಟ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತೂ ಇಂತೂ ಶೂಟಿಂಗ್ ಮುಗಿಸಿ ಚಿತ್ರತಂಡ ಪ್ರೇಕ್ಷಕರ ಮುಂದೆ ಬಂದಿತ್ತು. ಅಚ್ಚರಿ ಎನ್ನುವಂತೆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಈವರೆಗೆ ಸಿನಿಮಾ 75.33 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಘೋಷಿಸಿದೆ. ಶೀಘ್ರದಲ್ಲೇ 100 ಕೋಟಿ ರೂ. ಗಳಿಸುವ ನಿರೀಕ್ಷೆಯಲ್ಲಿದೆ.
ಈ ಸಿನಿಮಾ ಕಥೆ ಏನು ಅನ್ನುವುದನ್ನು ನೋಡುವುದಾದರೆ ಚಿತ್ರದ ನಾಯಕ ಕಾರ್ತಿಕೇಯ ಒಬ್ಬ ವೈದ್ಯ. ಯಾವುದೇ ಪ್ರಶ್ನೆ ಆದರೂ ಉತ್ತರ ಹುಡುಕುವುದು ಆತನಿಗೆ ಇಷ್ಟ. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಅನ್ನುವುದು ಆತನ ನಂಬಿಕೆ. ಸಮಸ್ಯೆಗೆ ಪರಿಹಾರ ಹುಡುಕಲು ಏನು ಬೇಕಾದರೂ ಮಾಡುತ್ತಾನೆ. ಒಮ್ಮೆ ಹರಕೆ ತೀರಿಸಲು ತಾಯಿ ಜೊತೆ ಕಾರ್ತಿಕೇಯ ದ್ವಾರಕೆಗೆ ಹೋಗುತ್ತಾನೆ. ಅಲ್ಲಿ ಒಬ್ಬ ಆರ್ಕಿಯಾಲಜಿಸ್ಟ್ ಹತ್ಯೆ ಆಗುತ್ತದೆ. ಅದರ ಹಿಂದಿನ ಕಾರಣ ಹುಡುಕಲು ಹೊರಡುವ ನಾಯಕನ ಕಥೆಯೇ ಸಿನಿಮಾ. ಇಂಟ್ರೆಸ್ಟಿಂಗ್ ಆಗಿರುವ ಕತೆಯನ್ನು ಬಹಳ ರೋಚಕವಾಗಿ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ. ತಂಡದ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ.


Click it and Unblock the Notifications











