"ಓಟಿಟಿ, ಟಿವಿ ಅಲ್ಲ.. ಪಾಪ್ಕಾರ್ನ್ ಸಿನಿಮಾಗಳನ್ನು ಕೊಲ್ಲುತ್ತಿದೆ": ತೆಲುಗು ನಿರ್ದೇಶಕ ತೇಜಾ ಕಾಮೆಂಟ್ ವೈರಲ್
ಒಂದ್ಕಡೆ ಚುನಾವಣೆ ಮತ್ತೊಂದು ಕಡೆ ಐಪಿಎಲ್ ಭರಾಟೆ. ಇವೆಡರ ನಡುವೆ ಸಿನಿಮಾಗಳು ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಸದ್ಯ ಥಿಯೇಟರ್ಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ಇಂತಹ ಸಮಯದಲ್ಲಿ ತೆಲುಗು ನಿರ್ದೇಶಕ ತೇಜಾ ಹೇಳಿಕೆ ವೈರಲ್ ಆಗುತ್ತಿದೆ. ಸಿನಿಮಾಗಳನ್ನು ಓಟಿಟಿ, ಟಿವಿ ಕೊಲ್ಲುತ್ತಿಲ್ಲ. ಬದಲಿಗೆ ಥಿಯೇಟರ್ನಲ್ಲಿ ಮಾರುವ ಪಾಪ್ಕಾರ್ನ್ ಕೊಲ್ಲುತ್ತಿದೆ ಎಂದಿದ್ದಾರೆ.
'ನುವ್ವು ನೇನು', 'ಜಯಂ', 'ನಿಜಂ' ರೀತಿಯ ಹಿಟ್ ಸಿನಿಮಾಗಳನ್ನು ನೀಡಿರುವ ತೇಜಾ ತಮ್ಮ ನೇರ ನಡೆ ನುಡಿಯಿಂದಲೂ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಚಾರದ ಅವರು ನೇರಾ ನೇರ ಮಾತನಾಡುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚಿತ್ರರಂಗ ಎಸುರಿಸುತ್ತಿರುವ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಕಮ್ಮಿ ಆಗಿ ಮಲ್ಟಿಪ್ಲೆಕ್ಸ್ ಸಂಸ್ಕೃತಿ ಹೆಚ್ಚಾಗಿದೆ. ಬಡವರು, ಮಧ್ಯಮ ವರ್ಗದ ಜನ ಮಲ್ಟಿಪ್ಲೆಕ್ಸ್ಗಳಿಗೆ ಹೋಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.

ವರ್ಷಕ್ಕೆ ನೂರಾರು ಸಿನಿಮಾಗಳು ಬಿಡುಗಡೆ ಆದರೆ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ. ಕೆಲ ಸಿನಿಮಾಗಳು ಚೆನ್ನಾಗಿದೆ ಅಂದ್ರು ಜನ ಥಿಯೇಟರ್ಗೆ ಬಂದು ನೋಡುತ್ತಿಲ್ಲ. ಒಂದ್ಕಾಲದಲ್ಲಿ ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬೀಳುತ್ತಿದ್ದರು. ಕೊರೊನಾ ಹಾವಳಿ ನಂತರ ಥಿಯೇಟರ್ ಕ್ರೇಜ್ ಹೋಗಿದೆ. ಜನ ಈಗ ಓಟಿಟಿ ಕಡೆ ಮುಖ ಮಾಡಿದ್ದಾರೆ. 2 ವಾರ ಕಾದರೆ ಸಿನಿಮಾ ಓಟಿಟಿಗೆ ಬರುತ್ತೆ. ಯಾಕೆ ಥಿಯೇಟರ್ಗೆ ಹೋಗಬೇಕು ಎನ್ನುವ ಮನೋಭಾವ ಬಂದಿದೆ ಎನ್ನುವುದು ಕೆಲವರ ವಾದ.
ಆದರೆ ಟಿವಿ, ಓಟಿಟಿಗಿಂತಲೂ ದೊಡ್ಡ ಸಮಸ್ಯೆ ಸಿನಿಮಾಗಳಿಗೆ ಎದುರಾಗುತ್ತಿದೆ. ಅದು ಏನು ಎನ್ನುವುದನ್ನು ತೇಜಾ ವಿವರಿಸಿದ್ದಾರೆ. "ಪಾಪ್ಕಾರ್ನ್ ದರ ಭಯಂಕರವಾಗಿದೆ. ಕೋಕ್ ದರ ಕೂಡ ಭಯಂಕರವಾಗಿದೆ. ನನ್ನಿಂದ ಇದು ಸಾಧ್ಯವಾಗುತ್ತಿಲ್ಲ. ನನಗಂತ ಅಲ್ಲ, ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ. ಆಟೋ ಡ್ರೈವರ್, ಸ್ಕೂಟರ್ನಲ್ಲಿ ಓಡಾಡುವವರಿಗೆ ಅಷ್ಟು ಖರ್ಷು ಮಾಡಲು ಸಾಧ್ಯವಿಲ್ಲ. ಮಲ್ಟಿಪ್ಲೆಕ್ಸ್ನಲ್ಲಿರುವ ದರಗಳು ಬಹಳ ಜಾಸ್ತಿ ಇದೆ. ಅಲ್ಲಿ ಪಾಪ್ಕಾರ್ನ್ ಮಾರುವವರು ನಮ್ಮ ಸಿನಿಮಾಗಳನ್ನು ಕೊಲ್ಲಬಲ್ಲರು."
"ಓಟಿಟಿ, ಟಿವಿ ಸಿನಿಮಾಗಳನ್ನು ಕೊಲ್ಲಲಿಲ್ಲ. ಮಧ್ಯಮ ವರ್ಗದ ಕುಟುಂಬ ಸದಸ್ಯ ಮಡದಿ ಇಬ್ಬರು ಮಕ್ಕಳ ಜೊತೆ ಬೈಕ್ನಲ್ಲಿ ಹೋಗಿ ಪಾರ್ಕಿಂಗ್ 50 ರೂ. ಕಟ್ಟಿ ಥಿಯೇಟರ್ ಒಳಗೆ ಹೋಗಿ ಕೂರಬೇಕು. ಪಾಪ್ಕಾರ್ನ್, ಸಮೋಸ ತಿನ್ನುತ್ತ ಕೋಕ್ ಕುಡಿಯುತ್ತಾ ಸಿನಿಮಾ ನೋಡಬೇಕು. ಈ ತಿಂಡಿ ತಿನಿಸುಗಳ ದರ ಹೆಚ್ಚಾದರೆ ಅವರು ಸಿನಿಮಾ ನೋಡಲ್ಲ. ಮುಂಬೈನಲ್ಲಿ ಹಿಂದಿ ಸಿನಿಮಾ ಸಾಯಲು ಪ್ರೇಕ್ಷಕರು ಕಾರಣ ಅಲ್ಲ. ಓಟಿಟಿ ಕೂಡ ಅಲ್ಲ. ಎಲ್ಲರೂ ಹಾಗೆ ಅಂದುಕೊಂಡಿದ್ದಾರೆ. ಮಲ್ಟಿಪ್ಲೆಕ್ಸ್ ಮಾರುವ ಆ ಪಾಪ್ಕಾರ್ನ್ ಬೆಲೆ ಸಾಯಿಸಿದೆ. ದಕ್ಷಿಣದಲ್ಲಿ ಹೆಚ್ಚು ಸಿಂಗಲ್ ಸ್ಕ್ರೀನ್ಗಳಿವೆ. ಹಾಗಾಗಿ ಇನ್ನು ಪರಿಸ್ಥಿತಿ ಚೆನ್ನಾಗಿದೆ" ಎಂದಿದ್ದಾರೆ.

ಬಾಲಿವುಡ್ ಸಿನಿಮಾಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನೋಡಲು ಜನ ಥಿಯೇಟರ್ಗೆ ಬರ್ತಿಲ್ಲ. ಹಿಂದಿ ಸಿನಿಮಾಗಳಿಗಿಂತ ದಕ್ಷಿಣದ ಸಿನಿಮಾಗಳು ಹೆಚ್ಚು ಸದ್ದು ಮಾಡ್ತಿವೆ. ನಮ್ಮ ಸಿನಿಮಾಗಳೇ ಅಲ್ಲಿ ರಿಲೀಸ್ ಆಗಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೊಸತನಕ್ಕೆ ಹಾತೊರೆಯುತ್ತಿರುವ ಹಿಂದಿ ಪ್ರೇಕ್ಷಕರು ಅದೇ ಬಾಲಿವುಡ್ ಮಸಾಲಾ ಸಿನಿಮಾಗಳನ್ನು ತಿರಸ್ಕರಿಸುತ್ತಿದ್ದಾರೆ. ಇನ್ನು ಹಿಂದಿ ಸಿನಿಮಾಗಳ ಸೋಲಿಗೆ ನಿರ್ದೇಶಕ ತೇಜಾ ಹೇಳಿದ ಸಂಗತಿಗಳು ಕಾರಣ ಇರಬಹುದು.


Click it and Unblock the Notifications











