ತಾತನ ಸಮಾಧಿಗೆ ನಮನ ಸಲ್ಲಿಸಲು ಹರಸಾಹಸಪಟ್ಟ ತಾರಕ್: ಸಿಎಂ, ಸಿಎಂ ಎಂದು ಫ್ಯಾನ್ಸ್ ಹರ್ಷೋದ್ಘಾರ
ಇಂದು(ಮೇ 28) ದಿವಂಗತ ನಟ, ಆಂಧ್ರದ ಮಾಜಿ ಸಿಎಂ ನಂದಮೂರಿ ತಾರಕ ರಾಮಾರಾವ್ ಶತ ಜನ್ಮಜಯಂತೋತ್ಸವ. ನಟನಾಗಿ, ಜನ ನಾಯಕನಾಗಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಸಂಪಾದಿಸಿರುವ ಎನ್ಟಿಆರ್ನ ತೆಲುಗು ಜನ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ವಿಶ್ವ ವಿಖ್ಯಾತ ನಟಸಾರ್ವಭೌಮ ಎನ್ಟಿಆರ್ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಎನ್ಟಿಆರ್ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಮೊಮ್ಮಗ ಜ್ಯೂ. ಎನ್ಟಿಆರ್ ಇಂದು ತಾತನ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲು ಹರಸಾಹಸ ಪಡಬೇಕಾಯಿತು. ತಾರಕ್ ಜೊತೆಗೆ ನೂರಾರು ಅಭಿಮಾನಿಗಳು ಒಮ್ಮೆಲೆ ಎನ್ಟಿಆರ್ ಸಮಾಧಿ ಬಳಿ ಜಮಾಯಿಸಿದರು. ಗುಂಪು ಚದುರಿಸಲು ಪೊಲೀಸರು ವಿಫಲವಾದರು. ತಳ್ಳಾಟ ನೂಕಾಟದ ನಡುವೆಯೇ ಜ್ಯೂ. ಎನ್ಟಿಆರ್ ತಾತನ ಸಮಾಧಿ ಪುಷ್ಪಾರ್ಚನೆ ಮಾಡಿ ನಮಿಸಿದರು.

ಇನ್ನು ನಂದಮೂರಿ ಕುಟುಂಬ ಸದಸ್ಯರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇತ್ತೀಚೆಗೆ ನಡೆದ ಎನ್ಟಿಆರ್ ಶತ ಜನ್ಮಜಯಂತೋತ್ಸವಗಳಲ್ಲಿ ತಾರಕ್ ಭಾಗಿ ಆಗಿಲಿಲ್ಲ. ಆಂಧ್ರದ ಮಾಜಿ ಸಿಎಂ ಹಾಗೂ ಬಾಲಕೃಷ್ಣ ಬೇಕು ಅಂತಲೇ ಜ್ಯೂ. ಎನ್ಟಿಆರ್ನ ಕಾರ್ಯಕ್ರಮಗಳಿಂದ ದೂರ ಇಟ್ಟರು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ತಾರಕ್ ಸ್ವತಃ ಬೇಕಂತಲೇ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಚರ್ಚೆ ಕೂಡ ನಡೀತು.
ಸಿಎಂ, ಸಿಎಂ ಎಂದು ಹರ್ಷೋದ್ಘಾರ
ತೆಲುಗಿನ ಟಾಪ್ ನಟರಲ್ಲಿ ಜ್ಯೂ. ಎನ್ಟಿಆರ್ ಕೂಡ ಒಬ್ಬರು. ತಾತನಂತಯೇ ಅದ್ಭುತ ನಟನೆಯಿಂದ ತಾರಕ್ ಅಭಿಮಾನಿಗಳ ಮನಗೆದ್ದಿದ್ದಾರೆ. ದಿವಂಗತ ಎನ್ಟಿಆರ್ ನಂತರ ಟಿಡಿಪಿ ಪಕ್ಷ ಚಂದ್ರಬಾಬು ನಾಯ್ಡು ಕೈವಶವಾಯಿತು. ಈ ಹಿಂದೆ ಕೂಡ ತಾರಕ್ ಟಿಡಿಪಿ ಪರ ಪ್ರಚಾರ ಮಾಡಿದರು. ಆದರೆ ಜ್ಯೂ. ಎನ್ಟಿಆರ್ ರಾಜಕೀಯರಂಗಕ್ಕೆ ಬರಬೇಕು ಎನ್ನುವುದು ಅಭಿಮಾನಿಗಳ ಆಸೆ. ತಾರಕ್ ರಾಜಕೀಯಕ್ಕೆ ಬಂದರೆ ಸಿಎಂ ಆಗ್ತಾರೆ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ತಾತನ ಸಮಾಧಿ ಬಳಿ ಅವರು ಬರ್ತಿದ್ದಂತೆ ಸಿಎಂ, ಸಿಎಂ ಎನ್ನುವ ಕೂಗು ಮುಗಿಲುಮುಟ್ಟಿತ್ತು.

ತಾತನ ಕಾರ್ಯಕ್ರಮಕ್ಕೆ ಹೋಗ್ಲಿಲ್ಲ
ಮೇ 20ರಂದು ಹೈದರಾಬಾದ್ನಲ್ಲಿ ನಡೆದ ಎನ್ಟಿಆರ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ತಾರಕ್ ಭಾಗವಹಿಸಿರಲಿಲ್ಲ. ಆದರೆ ರಾಮ್ಚರಣ್ ಹಾಜರಾಗಿದ್ದರು. ಇದನ್ನು ನೋಡಿ ಕೆಲವರು ತಾತನ ಕಾರ್ಯಕ್ರಮಕ್ಕಿಂತ ಮುಖ್ಯವಾದ ಕೆಲಸ ಜ್ಯೂ. ಎನ್ಟಿಆರ್ಗೆ ಏನಿತ್ತು ಎಂದು ಕೆಲವರು ಕೇಳಿದ್ದರು. ಈ ವಿಚಾರದ ಬಗ್ಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಟಿ. ಡಿ ಜನಾರ್ಧನ್ ಪ್ರತಿಕ್ರಿಯಿಸಿದ್ದಾರೆ. "ಕಾರ್ಯಕ್ರಮಕ್ಕೆ ತಾರಕ್ನ ಆಹ್ವಾನಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ಬೇರೆ ಕಾರ್ಯಕ್ರಮ ಇದೆ. 22ರಂದು ಕುಟುಂಬಗಳೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದೇನೆ. ಮೊದಲೇ ಈ ಕಾರ್ಯಕ್ರಮ ಫಿಕ್ಸ್ ಮಾಡಿಕೊಂಡಿದ್ದೇವೆ" ಎಂದು ಹೇಳಿದ್ದಾಗಿ ವಿವರಿಸಿದ್ದಾರೆ.
ಸಕ್ರಿಯ ರಾಜಕಾರಣದಿಂದ ದೂರ
ಅಭಿಮಾನಿಗಳಯ ಬಹಳ ದಿನಗಳಿಂದ ಪಾಲಿಟಿಕ್ಸ್ಗೆ ಬರುವಂತೆ ಜ್ಯೂ. ಎನ್ಟಿಆರ್ ಬಳಿ ಮನವಿ ಮಾಡುತ್ತಿದ್ದಾರೆ. ಆದರೆ ಟಿಡಿಪಿ ಪಕ್ಷದಲ್ಲಿ ಈಗ ಚಂದ್ರಬಾಬು ನಾಯ್ಡು, ಬಾಲಯ್ಯ ಕಾರುಬಾರು ನಡೀತಿದೆ. ಹಾಗಾಗಿ ಆ ಬಗ್ಗೆ ತಾರಕ್ ಯೋಚನೆ ಮಾಡುತ್ತಿಲ್ಲ. ಇತ್ತೀಚೆಗೆ ಪಕ್ಷದ ಪರ ಪ್ರಚಾರಕ್ಕೂ ಹೋಗುತ್ತಿಲ್ಲ. ತಮ್ಮ ಪುತ್ರನನ್ನು ಭವಿಷ್ಯದ ನಾಯಕನಾಗಿ ನೋಡಬೇಕು ಎನ್ನುವ ಕಾರಣಕ್ಕೆ ಚಂದ್ರಬಾಬು ಬೇಕಂತಲೇ ತಾರಕ್ನ ದೂರ ಇಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ.

3 ಸಿನಿಮಾಗಳಲ್ಲಿ ನಟನೆ
ಜ್ಯೂ. ಎನ್ಟಿಆರ್ ಸದ್ಯ ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ನಟಿಸ್ತಿದ್ದಾರೆ. ಜಾನ್ವಿ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದು, ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಇನ್ನು ತಾರಕ್ ಬಾಲಿವುಡ್ಗೂ ಶೀಘ್ರದಲ್ಲೇ ಎಂಟ್ರಿ ಕೊಡುತ್ತಿದ್ದಾರೆ. ಹೃತಿಕ್ ರೋಷನ್ ಜೊತೆ 'ವಾರ್- 2' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ನಲ್ಲಿ ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಪ್ರಶಾಂತ್ ನೀಲ್ ಜೊತೆ ಸಿನಿಮಾ ಘೋಷಣೆ ಬಹಳ ಸಮಯ ಆಗಿದೆ. ಮುಂದಿನ ವರ್ಷ ಈ ಸಿನಿಮಾ ಆರಂಭಿಸುವುದಾಗಿ ಇತ್ತೀಚಿಗೆ ನಿರ್ಮಾಪಕರು ಹೇಳಿದ್ದರು.


Click it and Unblock the Notifications











