ಎನ್ಟಿಆರ್ 30 ಮುಹೂರ್ತ: "ಇಲ್ಲಿ ಎಲ್ರೂ ಮೃಗಗಳೇ, ಸಾವು, ದೇವರಂದ್ರೂ ಭಯವಿಲ್ಲ"; ನೀಲ್, ರಾಜಮೌಳಿ ಭಾಗಿ
ಕಳೆದ ಮೂರು ವರ್ಷಗಳಲ್ಲಿ ಜೂನಿಯರ್ ಎನ್ಟಿಆರ್ ನಟನೆಯ ಚಿತ್ರಗಳ ಸಂಖ್ಯೆ ಎಷ್ಟು ಎಂದು ಕೇಳಿದರೆ ಉತ್ತರ ಕೇವಲ ಎರಡು. ಹೌದು, 2018ರಲ್ಲಿ ಬಿಡುಗಡೆಗೊಂಡಿದ್ದ ಅರವಿಂದ ಸಮೇತ ವೀರ ರಾಘವ ಸಿನಿಮಾ ಬಳಿಕ ಜೂನಿಯರ್ ಎನ್ಟಿಆರ್ ನಟನೆಯ ಆರ್ ಆರ್ ಆರ್ ಮಾತ್ರ ಬಿಡುಗಡೆಗೊಂಡಿದೆ. ರಾಜಮೌಳಿ ಸಿನಿಮಾ ಒಪ್ಪಿಕೊಂಡ ಮೇಲೆ ಆ ನಟರ ಅಭಿಮಾನಿಗಳು ನಾಲ್ಕು ವರ್ಷ ಮರೆತುಬಿಡಬೇಕು ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಇನ್ನು ಆರ್ ಆರ್ ಆರ್ ಬಳಿಕ ಜೂನಿಯರ್ ಎನ್ ಟಿ ಆರ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಲವು ದಿನಗಳಿಂದ ಕಾಡುತ್ತಿತ್ತು. ಕೊರಟಲ ಶಿವ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು ಹಾಗೂ ಈ ಸುದ್ದಿಯೇ ಕೊನೆಗೂ ಅಧಿಕೃತ ಸುದ್ದಿಯಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಬಾಲಿವುಡ್ ಕ್ವೀನ್ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ನಟಿಯಾಗಿ ನಟಿಸಲಿದ್ದಾರೆ ಎಂದೂ ಸಹ ಚಿತ್ರತಂಡ ಹಂಚಿಕೊಂಡಿತ್ತು.

ಹೀಗೆ ಸಾಲು ಸಾಲು ಮಾಹಿತಿಗಳನ್ನು ಹಂಚಿಕೊಂಡಿದ್ದ ಎನ್ ಟಿ ಆರ್ 30 ತಂಡ ಇಂದು ( ಮಾರ್ಚ್ 23 ) ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಮಾಡಿದೆ. ಇಂದು ಬೆಳಗ್ಗೆ ಹೈದರಾಬಾದ್ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಚಿತ್ರದ ಚಿತ್ರೀಕರಣಕ್ಕೆ ಎಸ್ ಎಸ್ ರಾಜಮೌಳಿ ಮೊದಲ ಕ್ಲಾಪ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ರಕಾಶ್ ರಾಜ್ ಸೇರಿದಂತೆ ಹಲವರು ಹಾಜರಿದ್ದರು.
ಇನ್ನು ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಕೊರಟಲ ಶಿವ ಈ ಚಿತ್ರದ ಕಥೆಯ ಬಗ್ಗೆ ಮಾಹಿತಿ ನೀಡಿದಿದ್ದರೂ ಚಿತ್ರದ ಪಾತ್ರಗಳ ಬಗ್ಗೆ ಮಾತನಾಡಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ. "ಇದು ಭಾರತದ ಮರೆಯಾದ ತೀರ ಪ್ರದೇಶದ ನೆಲಗಳಲ್ಲಿ ನಡೆಯುವ ಕಥೆ. ಈ ನೆಲದ ಪುರುಷರು ದೇವರಿಗೂ ಹೆದರುವುದಿಲ್ಲ, ಹಾಗೆಯೇ ಸಾವಿಗೂ ಹೆದರುವುದಿಲ್ಲ. ಹಾಗಾದರೆ ಈ ಜನ ಯಾವುದಕ್ಕೆ ಭಯ ಪಡ್ತಾರೆ ಅನ್ನೋದನ್ನು ಕಾದು ನೋಡೋಣ. ಸಿನಿಮಾ ರಸಿಕರಿಗೆ ಹಾಗೂ ಅಭಿಮಾನಿಗಳಿಗೆ ಈ ಮೂಲಕ ನಾನು ತಿಳಿಸುವುದೇನೆಂದರೆ ಇದು ನನ್ನ ಸಿನಿ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ಎಂಬ ಆಶ್ವಾಸನೆ ನೀಡಬಲ್ಲೆ" ಎಂದು ಕೊರಟಲ ಶಿವ ಹೇಳಿದ್ದಾರೆ.
ಕೊರಟಲ ಶಿವ ಹೇಳಿದ ಈ ಮಾತನ್ನು ಕೇಳಿದ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ತನ್ನ ಕೊನೆ ಚಿತ್ರ ಆಚಾರ್ಯ ಮೂಲಕ ಹೀನಾಯವಾಗಿ ಸೋತಿದ್ದ ಕೊರಟಲ ಶಿವ ಈ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇದು ಕೊರಟಲ ಶಿವ ನಿರ್ದೇಶಿಸಲಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಯುವ ಸುಧಾ ಆರ್ಟ್ಸ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದ ಮೊದಲ ಹಂತದ ಚಿತ್ರೀಕರಣ ಇದೇ ತಿಂಗಳ 31ರಿಂದ ಹೈದರಾಬಾದ್ನಲ್ಲಿ ಶುರುವಾಗಲಿದ್ದು, ಚಿತ್ರಕ್ಕೆ ತಮಿಳಿನ ಸೆನ್ನೇಷನಲ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಸಂಗೀತ ನೀಡಲಿದ್ದಾರೆ.


Click it and Unblock the Notifications











