ಎನ್ಟಿಆರ್ ಪುತ್ರಿ ಉಮಾ ಸಾವಿಗೆ ಚಂದ್ರಬಾಬು ನಾಯ್ಡು ಕಾರಣ: ಎನ್ಟಿಆರ್ ಪತ್ನಿ ಲಕ್ಷ್ಮಿ
ತೆಲುಗು ಚಿತ್ರರಂಗದ ಖ್ಯಾತ ನಟ, ಮಾಜಿ ಸಿಎಂ ದಿವಂಗತ ಎನ್ಟಿಆರ್ ಪುತ್ರಿ ಉಮಾ ಮಹೇಶ್ವರಿ ಎರಡು ದಿನಗಳ ಹಿಂದಷ್ಟೆ ಅಸಹಜವಾಗಿ ಮೃತಪಟ್ಟಿದ್ದಾರೆ. ಹೈದರಾಬಾದ್ನ ಜ್ಯೂಬಿಲಿ ಹಿಲ್ಸ್ನಲ್ಲಿನ ಅವರ ನಿವಾಸದಲ್ಲಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಇರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಉಮಾ ಮಹೇಶ್ವರಿ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆಯಾದರು ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಚರ್ಚೆ, ಸುದ್ದಿಗಳು ಹರಿದಾಡುತ್ತಿವೆ.
ಈ ನಡುವೆ, ಎನ್ಟಿಆರ್ ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ, ಉಮಾ ಮಹೇಶ್ವರಿ ಸಾವಿನ ಬಗ್ಗೆ ಹೇಳಿಕೆ ನೀಡಿದ್ದು, ಇದು ಸಹಜ ಸಾವಲ್ಲವೆಂದು ಸಾವಿನ ಹಿಂದೆ ಹಲವು ಅನುಮಾನುಗಳು ಇವೆಯೆಂದೂ, ಸಾವಿನ ಅಸಲಿ ಕಾರಣ ಮುಚ್ಚಿಡಲಾಗುತ್ತಿದೆಯೆಂದೂ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಮೇಲೆ ಅನುಮಾನ
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಲಕ್ಷ್ಮಿ ಪಾರ್ವತಿ, ''ಚಂದ್ರಬಾಬು ನಾಯ್ಡುಗೆ ಹತ್ಯಾ ರಾಜಕೀಯ ತೀರ ಸಾಮಾನ್ಯ. ತನ್ನ ಪ್ರಗತಿಗೆ ಅಡ್ಡ ಬಂದ ಹಲವರನ್ನು ಅವರು ಮುಗಿಸಿದ್ದಾರೆ. ಅವರ ಕೆಟ್ಟ ರಾಜಕೀಯದ ಅರಿವಿರುವ ಯಾರೇ ಆದರು ಉಮಾ ಮಹೇಶ್ವರಿಯ ಸಾವನ್ನು ಅನುಮಾನದಿಂದಲೇ ನೋಡುತ್ತಾರೆ. ಅದರಲ್ಲಿಯೂ ಚಂದ್ರಬಾಬು ನಾಯ್ಡು ಉಮಾ ಮಹೇಶ್ವರಿಯ ಸಾವಾದ ಕೂಡಲೇ ಆ ಮನೆಗೆ ಹೋಗಿದ್ದು ಇನ್ನಷ್ಟು ಅನುಮಾನಗಳಿಗೆ ಪುಷ್ಟಿ ನೀಡಿದೆ'' ಎಂದಿದ್ದಾರೆ.

ಆತ್ಮಹತ್ಯೆ ಪತ್ರ ಎಲ್ಲಿ ಹೋಯಿತು? ಲಕ್ಷ್ಮಿ ಪ್ರಶ್ನೆ
''ಉಮಾ ಮಹೇಶ್ವರಿ ಚೆನ್ನಾಗಿ ಓದಿಕೊಂಡಿದ್ದ ಮಹಿಳೆ. ಇಂಥಹಾ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಒಂದು ಪತ್ರವನ್ನು ಬರೆದಿರುತ್ತಾರೆ. ಸಾಮಾನ್ಯವಾಗಿ ಇತ್ತೀಚೆಗೆ ಮೊಬೈಲ್ನಲ್ಲಿಯೇ ಅಂತಿಮ ಮಾತುಗಳನ್ನು ರೆಕಾರ್ಡ್ ಮಾಡಿ ಸಾಯುತ್ತಿರುವುದು ನೋಡಿದ್ದೇವೆ. ಪೊಲೀಸರು ಸಹ, ಉಮಾ ಮಹೇಶ್ವರಿ ಆತ್ಮಹತ್ಯೆ ಪತ್ರ ಬರೆದಿರಬಹುದು ಎಂದು ಅನುಮಾನಿಸಿದ್ದಾರೆ. ಹಾಗಿದ್ದರೆ ಆ ಪತ್ರ ಎಲ್ಲಿದೆ?'' ಎಂದು ಲಕ್ಷ್ಮಿ ಪಾರ್ವತಿ ಪ್ರಶ್ನಿಸಿದ್ದಾರೆ.

ಆಸ್ತಿ ಕುರಿತಂತೆ ವಿವಾದ ಇತ್ತು
''ಚಂದ್ರಬಾಬು ನಾಯ್ಡು ಹಾಗೂ ಉಮಾ ಮಹೇಶ್ವರಿ ಕುಟುಂಬದ ನಡುವೆ ಆಸ್ತಿ ಕುರಿತಂತೆ ವಿವಾದ ಇತ್ತು. ಅದೇ ಕಾರಣಕ್ಕೆ ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ನಾರಾ ಲೋಕೇಶ್ ಉಮಾ ಮಹೇಶ್ವರಿ ಕುಟುಂಬಕ್ಕೆ ಸಮಸ್ಯೆಗಳನ್ನು ನೀಡುತ್ತಿದ್ದರು. ಅದನ್ನು ತಾಳಲಾರದೆ ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಮಹೇಶ್ವರಿ ಬರೆದಿರುವ ಆತ್ಮಹತ್ಯೆ ಪತ್ರವನ್ನು ಚಂದ್ರಬಾಬು ನಾಯ್ಡು ತನ್ನ ಪ್ರಭಾವ ಬಳಸಿ ನಾಶ ಮಾಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಂದ್ರಬಾಬು ವ್ಯಕ್ತಿತ್ವ ನನಗೆ ಗೊತ್ತಿರುವ ಕಾರಣದಿಂದ ಈ ಸುದ್ದಿಗಳನ್ನು ನಾನು ನಂಬುತ್ತಿದ್ದೇನೆ'' ಎಂದಿದ್ದಾರೆ ಲಕ್ಷ್ಮಿ ಪಾರ್ವತಿ.

ಉಮಾ ಮಹೇಶ್ವರಿ ಒಳ್ಳೆಯ ಹೆಣ್ಣು ಮಗಳು: ಲಕ್ಷ್ಮಿ ಪಾರ್ವತಿ
''ಉಮಾ ಮಹೇಶ್ವರಿ ಬಹಳ ಒಳ್ಳೆಯ ಹೆಣ್ಣು ಮಗಳಾಗಿದ್ದಳು. 30 ವರ್ಷಗಳ ಹಿಂದೆ ಎನ್ಟಿಆರ್ ಇದ್ದಾಗ ಆಕೆ ನಮ್ಮ ಮನೆಗೆ ಬಂದಿದ್ದಳು. ಆಕೆಗೆ ಹೊಸ ಸೀರೆ, ನಾನು ತೊಟ್ಟಿದ್ದ ಒಡವೆಗಳನ್ನು ಕೊಟ್ಟು ಕಳಿಸಿದ್ದೆ. ಆಕೆ ಎಂದರೆ ನನಗೆ ಬಹಳ ಪ್ರೀತಿ. ಅಮೆರಿಕದಲ್ಲಿದ್ದಾಗ ಸಹ ನನಗೆ ಕರೆ ಮಾಡಿ ಮಾತನಾಡಿದ್ದಳು. ನನ್ನ ಬಗ್ಗೆ ಆಕೆಗೆ ಪ್ರೀತಿ ಇತ್ತು. ನನ್ನ ಅಣ್ಣಂದಿರು ನಿಮಗೆ ಸಮಸ್ಯೆ ಕೊಡುತ್ತಿದ್ದಾರೆ. ಅವರೊಟ್ಟಿಗೆ ನನ್ನ ಸಹಮತ ಇಲ್ಲ ಎಂದಿದ್ದಳು. ಆದರೆ ಆಕೆಗೆ ಇಂಥಹಾ ಸ್ಥಿತಿ ಒದಗಿ ಬಂದಿದ್ದು ಬೇಸರವಾಗಿದೆ'' ಎಂದಿದ್ದಾರೆ.


Click it and Unblock the Notifications











