5 ಭಾಷೆ, 750 ಸಿನಿಮಾ, ಬದುಕಿನ ಸಂಧ್ಯಾಕಾಲದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟ
ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಸತತ ಪ್ರಯತ್ನ, ಸಾಧನೆ, ಕ್ರಿಯಾಶೀಲತೆ, ಶ್ರದ್ಧೆ, ನಿಷ್ಠೆ ಇದ್ದವರಿಗೆ ಮಾತ್ರ ಕಲಾದೇವಿ ಕೈಹಿಡಿಯುತ್ತಾಳೆ. ಕಲೆ ಒಲಿದರೂ ಅದಕ್ಕೊಂದು ವೇದಿಕೆ ಸಿಗಲ್ಲ. ಸಿಕ್ಕರೂ ಕೂಡ ಕೆಲ ಒಮ್ಮೆ ಸಿಗಬೇಕಾದ ಹೆಸರು, ಮನ್ನಣೆ ಸಿಗಲ್ಲ. ಅಲ್ಲಲ್ಲಿ ಕೆಲವರಿಗೆ ಮಾತ್ರ ಇದೆಲ್ಲವೂ ಕೂಡಿ ಬರುತ್ತೆ. ಕಲೆಯೇ ಕೈ ಹಿಡಿದು ಮುನ್ನಡೆಸಿಕೊಂಡು ಬರುತ್ತೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ..
ಹಲವಾರು ಜನ ಇಲ್ಲಿ ಅನೇಕ ದಶಕಗಳಿಂದ ಕಲಾ ಸೇವೆಯನ್ನು ಮಾಡಿದ್ದಾರೆ. ಕೊನೆಯ ಕ್ಷಣದವರೆಗೆ ಕೂಡ ಕಲೆಯ ಧ್ಯಾನವನ್ನೇ ಮಾಡಿದ್ದಾರೆ. ಆ ಪೈಕಿ ಕೋಟ ಶ್ರೀನಿವಾಸ್ ರಾವ್ ಕೂಡ ಒಬ್ಬರು. ಹೌದು, ಕೋಟ ಶ್ರೀನಿವಾಸ್ ರಾವ್ .. ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದ.

ಕಳೆದ ನಾಲ್ಕೂವರೆ ದಶಕಗಳಿಂದ ಕಲಾಸೇವೆಯನ್ನು ಮಾಡುತ್ತಾ ಬಂದ ಕೋಟ ಶ್ರೀನಿವಾಸ್ ರಾವ್ ಇಲ್ಲಿಯವರೆಗೆ 750ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.1978ರಲ್ಲಿ ತೆರೆಕಂಡ 'ಪ್ರಾಣಂ ಖರೀದು' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೋಟ ಶ್ರೀನಿವಾಸ ರಾವ್ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಖಳನಾಯಕನಾಗಿ, ಹಾಸ್ಯ ಕಲಾವಿದನಾಗಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಿಂಚಿದ್ದಾರೆ.
ಇಷ್ಟೇ ಅಲ್ಲ ಕನ್ನಡದಲ್ಲಿ ಕೂಡ ಕೋಟ ಶ್ರೀನಿವಾಸ್ ರಾವ್ ಅಭಿನಯಿಸಿದ್ದಾರೆ. ಲೇಡಿ ಕಮಿಷನರ್, ರಕ್ತಕಣ್ಣೀರು, ಲವ್, ನಮ್ಮ ಬಸವ, ನಮ್ಮಣ್ಣ, ಮಾಸ್ತಿ, ಶ್ರೀಮತಿ ಚಿತ್ರಗಳನ್ನು ನೋಡಿದವರು ಇವರನ್ನು ಮರೆಯಲು ಸಾಧ್ಯ ಇಲ್ಲ.

ಒಂಬತ್ತು ನಂದಿ ಪ್ರಶಸ್ತಿಗಳನ್ನು ಪಡೆದಿರುವ ಕೋಟ ಶ್ರೀನಿವಾಸ್ ರಾವ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇನ್ನು ಕೋಟ ಶ್ರೀನಿವಾಸ್ ರಾವ್ ಕೇವಲ ಆಕ್ಟರ್ ಮಾತ್ರ ಅಲ್ಲ. ರಾಜಕಾರಣಿ ಕೂಡ ಹೌದು. ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಅವರು, ಒಮ್ಮೆ ಶಾಸಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಇಂಥಾ ಕೋಟ ಶ್ರೀನಿವಾಸ್ ರಾವ್ ಸದ್ಯ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಇದ್ದಾರೆ. ಚಿತ್ರರಂಗದಿಂದ ಕಳೆದ 3 ವರ್ಷಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಹೀಗಿರುವಾಗ ಇದಿಗ ಕೋಟ ಶ್ರೀನಿವಾಸ್ ರಾವ್ ಅವರ ಫೋಟೊವೊಂದು ಅವರ ಅಭಿಮಾನಿಗಳನ್ನು ಮತ್ತು ಚಿತ್ರರಂಗವನ್ನು ಆತಂಕಕ್ಕೀಡು ಮಾಡಿದೆ. ಹೌದು, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ಗಬ್ಬರ್ ಸಿಂಗ್, ಜ್ಯೂ.ಎನ್.ಟಿ.ಆರ್ ಅವರ ಟೆಂಪರ್ ಸೇರಿ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಬಂಡಲ ಗಣೇಶ್ ಇತ್ತೀಚೆಗೆ ಕೋಟಾ ಶ್ರೀನಿವಾಸ್ ರಾವ್ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಮಯದಲ್ಲಿ ಫೋಟೊ ಕ್ಲಿಕಿಸಿಕೊಂಡು ಆ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೊ ನೋಡಿ ಅನೇಕರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸ್ ರಾವ್ ಅವರ ತೂಕ ಗಣನೀಯ ಇಳಿಕೆಯಾಗಿದ್ದು ಕಾಲು ಊದಿಕೊಂಡಿದೆ. ಕೋಟ ಶ್ರೀನಿವಾಸ್ ರಾವ್ ಅವರ ಈ ಫೋಟೊ ನೋಡಿ ಕಳವಳ ವ್ಯಕ್ತಪಡಿಸಿರುವ ಅನೇಕರು ಅವರ ಅಭಿಮಾನಿಯಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಅವರಿಗೆ ವಯಸ್ಸಾಗಿರುವುದನ್ನು ನೋಡಿ ನಾನು ಭಾವುಕನಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ದೇವರ ಇವರ ಕಾಯಿಲೆಗಳನ್ನೆಲ್ಲ ದೂರ ಮಾಡಲಿ ಎಂದು ಪ್ರಾರ್ಥನೆಯನ್ನು ಕೂಡ ಮಾಡಿದ್ದಾರೆ. ಸದ್ಯ ಬಂಡಲ ಗಣೇಶ್ ಹಂಚಿಕೊಂಡಿರುವ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











