ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಮುಹೂರ್ತ: ನಮ್ಮನ್ನು ಯಾರೋ ತಡೆಯೋದು
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ಹೊಸ ಸಿನಿಮಾ ಘೋಷಿಸಿದ್ದರು. ಇದೀಗ ಮತ್ತೊಂದು ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಸೆಟ್ಟೇರಿದೆ.
ಒಂದ್ಕಡೆ ಮುಂದಿನ ಚುನಾವಣೆಗಾಗಿ ಆಂಧ್ರದ ಮೂಲೆ ಮೂಲೆ ಸುತ್ತಿ ಪವನ್ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಪವನ್ ಕಲ್ಯಾಣ್ ಆಂಧ್ರದ ಸಿಎಂ ಆಗುತ್ತಾರೆ ಎಂದು ಅಭಿಮಾನಿಗಳು ಭರವಸೆಯಿಂದ ಇದ್ದಾರೆ. ಪಕ್ಷ ಸಂಘಟನೆಗೆ ಬೇಕಾದ ಹಣಕ್ಕಾಗಿ ತಾನು ಸಿನಿಮಾಗಳಲ್ಲಿ ನಟಿಸುತ್ತಿರುವುದಾಗಿ ಜನಸೇನಾನಿ ಈ ಹಿಂದೆ ಕೂಡ ಹೇಳಿದ್ದರು. ಇದೀಗ ಆ ಹಾದಿಯಲ್ಲಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಕ್ರಿಶ್ ನಿರ್ದೇಶನದ 'ಹರಿಹರ ವೀರಮಲ್ಲು' ಸಿನಿಮಾ ಚಿತ್ರೀಕರಣ ನಡೀತಿದೆ. ಇನ್ನು 'ಸಾಹೋ' ನಿರ್ದೇಶಕ ಸುಜಿತ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಪವನ್ ನಟಿಸುತ್ತಿದ್ದಾರೆ. ಇದೀಗ ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಹೈದರಾಬಾದ್ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.

'ಉಸ್ತಾದ್ ಭಗತ್ ಸಿಂಗ್' ಮುಹೂರ್ತ
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಶುರುವಾಗಿದೆ. ನಿರ್ದೇಶಕ ವಿ. ವಿ ವಿನಾಯಕ್, ನಿರ್ಮಾಪಕ ದಿಲ್ ರಾಜು ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೊದಲ ದೃಶ್ಯಕ್ಕೆ ದಿಲ್ ರಾಜು ಕ್ಲಾಪ್ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಬಹಳ ಹಿಂದೆಯೇ ಘೋಷಣೆ ಆಗಿತ್ತು. ಈ ಹಿಂದೆ ಚಿತ್ರದಕ್ಕೆ 'ಭವಧೀಯುಡು ಭಗತ್ ಸಿಂಗ್' ಎನ್ನುವ ಟೈಟಲ್ ಫಿಕ್ಸ್ ಆಗಿತ್ತು. ಅದನ್ನು ಕೊಂಚ ಬದಲಿಸಿ 'ಉಸ್ತಾದ್ ಭಗತ್ ಸಿಂಗ್' ಎಂದು ನಾಮಕರಣ ಮಾಡಲಾಗಿದೆ.

ತಮಿಳಿನ 'ತೇರಿ' ಸಿನಿಮಾ ರೀಮೆಕ್?
'ಉಸ್ತಾದ್ ಭಗತ್ ಸಿಂಗ್' ತಮಿಳಿನ 'ತೇರಿ' ಸಿನಿಮಾ ರೀಮೆಕ್ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಕೂಡ ಈ ವಾದ ಒಪ್ಪುತ್ತಿಲ್ಲ. ಈಗಾಗಲೇ ಫೋಟೊಶೂಟ್ ಮಾಡಿಸಿ, ಪೋಸ್ಟರ್ಗಳನ್ನು ಕೂಡ ರಿಲೀಸ್ ಮಾಡಿದ್ದಾರೆ. ಪವನ್ ಕಲ್ಯಾಣ್ ಬೈಕ್ ಜೊತೆ ಪೋಸ್ಟರ್ಗಳಲ್ಲಿ ಕಾಣಿಸಿಕೊಂಡಿರುವುದು ರೀಮೆಕ್ ಎನ್ನುವುದಕ್ಕೆ ಮತ್ತಷ್ಟು ಇಂಬು ಕೊಡುವಂತಿದೆ. ತಮಿಳಿನಲ್ಲಿ ದಳಪತಿ ವಿಜಯ್ ನಟಿಸಿದ್ದ 'ತೇರಿ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.

ಪವನ್- ಹರೀಶ್ ಕ್ರೇಜಿ ಪ್ರಾಜೆಕ್ಟ್
ಹರೀಶ್ ಶಂಕರ್ ಹಾಗೂ ಪವನ್ ಕಲ್ಯಾಣ್ ಕಾಂಬಿನೇಷನ್ ಅಂದಾಕ್ಷಣ 'ಗಬ್ಬರ್ ಸಿಂಗ್' ಸಿನಿಮಾ ನೆನಪಾಗುತ್ತದೆ. 10 ವರ್ಷಗಳ ಹಿಂದೆ ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಾಲಿವುಡ್ನ 'ದಬಾಂಗ್' ರೀಮೇಕ್ ಆದರೂ ಸಾಕಷ್ಟು ಬದಲಾವಣೆ ಮಾಡಿ ಹರೀಶ್ ಶಂಕರ್ ಕಟ್ಟಿಕೊಟ್ಟಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಪವರ್ ಸ್ಟಾರ್ಗೆ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಅದೇ ಜೋಡಿ ಈಗ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ನಮ್ಮನ್ನು ಯಾರೋ ತಡೆಯೋದು
'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ 'ಮನಲ್ನಿ ಎವಡ್ರಾ ಆಪೇದಿ' ಎನ್ನುವ ಟ್ಯಾಗ್ಲೈನ್ ಕೂಡ ಇದೆ. ಅಂದರೆ 'ನಮ್ಮನ್ನು ಯಾರೋ ತಡೆಯೋದು' ಎಂದು ಅರ್ಥ. ಈ ಹಿಂದೆ 'ರಿಪಬ್ಲಿಕ್' ಸಿನಿಮಾ ಪ್ರೀ ರಿಲೀಸ್ ಈವೆಂಟ್ನಲ್ಲಿ ಪವರ್ ಸ್ಟಾರ್ ಈ ಡೈಲಾಗ್ ಹೇಳಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ನನ್ನ ಸಿನಿಮಾಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮನ್ನು ಯಾರು ತಡೆಯೋಕೆ ಆಗುವುದಿಲ್ಲ ಎನ್ನುವ ಅರ್ಥದಲ್ಲಿ ಪವನ್ ಹೀಗೆ ಹೇಳಿದ್ದರು. ಇದೇ ಸಾಲನ್ನು ಹರೀಶ್ ಶಂಕರ್ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಟ್ಯಾಗ್ಲೈನ್ ಆಗಿ ಇಟ್ಟಿದ್ದಾರೆ.


Click it and Unblock the Notifications











