ಅಭಿಮಾನಿ ಆಸೆ ಈಡೇರಿಸಿದ್ದ ಪವನ್ ಕಲ್ಯಾಣ್; 20 ದಿನಗಳಲ್ಲೇ ಬಾಲಕ ನಿರಂಜನ್ ನಿಧನ
ತೆಲಂಗಾಣದ ಹನಮಕೊಂಡದ ಜಿಲ್ಲೆಯ ಹನುಮಾನ್ ನಗರದ ನಿವಾಸಿ 17 ವರ್ಷದ ನಿರಂಜನ್ ಕೊನೆಯುಸಿರೆಳೆದಿದ್ದಾನೆ. ಮಾರಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ನಿರಂಜನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪವನ್ ಕಲ್ಯಾಣ್ ದೊಡ್ಡ ಅಭಿಮಾನಿಯಾಗಿದ್ದ ಆತ ತನ್ನ ನೆಚ್ಚಿನ ನಟನನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ. ಈ ವಿಚಾರ ತಿಳಿದು ಪವನ್ ಕಲ್ಯಾಣ್ ಜೂನ್ 17ರಂದು ಆತನ ಮನೆಗೆ ಭೇಟಿ ನೀಡಿದ್ದರು.
ಬಾಲ ಅಭಿಮಾನಿ ನಿರಂಜನ್ ಜೊತೆ ಕೆಲಹೊತ್ತು ಕಳೆದಿದ್ದ ಪವನ್ ಕಲ್ಯಾಣ್ ಆತನ ಆಸೆ ಈಡೇರಿಸಿದ್ದರು. ನನಗೆ ರಾಮ್ಚರಣ್ ಸರ್ ಬಳಿ ಇರುವ ಅದೇ ತಳಿಯ ನಾಯಿಮರಿ ಬೇಕು ಎಂದು ನಿರಂಜನ್ ಹೇಳಿದ್ದ. ಸಂಜೆ ವೇಳೆಗೆ ತಮ್ಮ ಆಪ್ತರ ಮೂಲಕ ಆತನ ಮನೆಗೆ ಪವನ್ ನಾಯಿ ಮರಿ ಕಳಿಸಿದ್ದರು. ಐಪ್ಯಾಡ್ ಕೊಡಿಸಿದ್ದರು. ಮುಕ್ಕಾಲು ಗಂಟೆ ನಿರಂಜನ್ ಬೆಡ್ ಮೇಲೆ ಕೂತು ಪವನ್ ಕಲ್ಯಾಣ್ ಮಾತನಾಡಿಸಿದ್ದರು. ಆತನ ಕುಟುಂಬದ ಹಿನ್ನೆಲೆ, ತಮ್ಮ ಮೇಲಿನ ಅಭಿಮಾನ ಎಲ್ಲದರ ಬಗ್ಗೆ ಕೇಳಿ ತಿಳಿದುಕೊಂಡಿದ್ದರು.

ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರ ಡಿಸಿಎಂ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ನಿರಂಜನ್ ಮನೆಗೆ ಪವನ್ ಭೇಟಿ ಬಗ್ಗೆ ರಾಜಕೀಯವಾಗಿ ಕೆಲವರು ಟೀಕಿಸಿದ್ದರು. ಅದಕ್ಕೆ ಜನಸೇನಾನಿ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು 'OG'-2 ಸಿನಿಮಾ ಮಾಡ್ತೀನಿ. ಆ ಚಿತ್ರದ ಕಾರ್ಯಕ್ರಮಕ್ಕೆ ನೀನೇ ಮುಖ್ಯ ಅತಿಥಿಯಾಗಿ ಬರಬೇಕು ಎಂದು ನಿರಂಜನ್ಗೆ ಪವನ್ ಕಲ್ಯಾಣ್ ಹೇಳಿದ್ದರು. ಆ ಆಸೆ ಮಾತ್ರ ಈಡೇರಲೇ ಇಲ್ಲ. ಇತ್ತೀಚೆಗೆ 'OG'-2 ಸಿನಿಮಾ ಕೂಡ ಘೋಷಣೆಯಾಗಿದೆ.
ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿ ಸಮಸ್ಯೆಯಿಂದ ನಿರಂಜನ್ ಬಳಲುತ್ತಿದ್ದ. ಇದು ಒಂದು ಆನುವಂಶಿಕ ಸ್ಥಿತಿಯಾಗಿದ್ದು ಕಾಲ ಕ್ರಮೇಣ ಸ್ನಾಯುಗಳನ್ನು ದುರ್ಬಲಗೊಂಡು ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತದೆ. 17 ವರ್ಷದ ನಿರಂಜನ್ ಈ ಸಮಸ್ಯೆಯಿಂದ 10 ವರ್ಷದ ಬಾಲಕನಂತೆ ಇದ್ದ. ಬಳಿಕ ದೇಹದಲ್ಲಿ ಬೆಳವಣಿಗೆ ಕಂಡು ಬಂದಿರಲಿಲ್ಲ. ಹಾಗಾಗಿ ಹಾಸಿಗೆಯಲ್ಲೇ ದಿನ ಕಳೆಯುವಂತಾಗಿತ್ತು. ಸಾಕಷ್ಟು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.
ಚಿಕ್ಕಂದಿನಿಂದ ಪವನ್ ಕಲ್ಯಾಣ್ ಸಿನಿಮಾಗಳನ್ನು ನೋಡಿ ಬೆಳೆದ ನಿರಂಜನ್ ಊರಿನಲ್ಲಿ ಚೋಟಾ ಗಬ್ಬರ್ ಸಿಂಗ್ ಎಂದೇ ಗಮನ ಸೆಳೆದಿದ್ದ. ಪವನ್ ಕಲ್ಯಾಣ್ ನಟನೆಯ 'ಗಬ್ಬರ್ ಸಿಂಗ್' ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದ. ಡೈಲಾಗ್ ಹೇಳುತ್ತಿದ್ದ. ನಿರಂಜನ್ ಚಿಕಿತ್ಸೆಗಾಗಿ ಪವನ್ ಕಲ್ಯಾಣ್ 1 ಲಕ್ಷ ರೂ. ಹಣದ ನೆರವು ನೀಡಿದ್ದರು. ಅಷ್ಟೇ ಅಲ್ಲ ಕುಟುಂಬ ನಿರ್ವಹಣೆಗಾಗಿ ಆತನ ಪೋಷಕರಿಗೆ ಕ್ಯಾಂಟೀನ್ ಆರಂಭಿಸಲು ಸಹಾಯ ಮಾಡುವುದಾಗಿ ಹೇಳಿದ್ದರು.
ನಿರಂಜನ್ ನಿಧನದ ಸುದ್ದಿ ಕುಟುಂಬ ಸದಸ್ಯರಿಗೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ದಿಗ್ಭ್ರಾಂತಿ ಉಂಟು ಮಾಡಿದೆ. ಆತನ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಎರಡು ದಿನಗಳ ಹಿಂದೆ ನಿರಂಜನ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆಸ್ತಮಾ ಬಂತು, ಹೃದಯಬಡಿತ ನಿಂತು ಹೋಗಿದೆ ಎಂದು ಹೇಳಿದ್ವಿ. ಅದಕ್ಕೆ ವೈದ್ಯರು ನಿರಂಜನ್ ದೇಹವೆಲ್ಲಾ ವಿಷಮ ಸ್ಥಿತಿಗೆ ತಲುಪಿದೆ. ಬದುಕುವುದು ಕಷ್ಟ ಎಂದು ಹೇಳಿದ್ರು. ಬಳಿಕ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ. ಚಿಕಿತ್ಸೆ ನೀಡಿದ್ರು. ಎಲ್ಲಾ ಸರಿ ಹೋಯ್ತು ಎಂದುಕೊಳ್ಳುವ ವೇಳೆಗೆ ಜೀವಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಕೇಳುತ್ತಲೇ ಇದ್ದ. ಕೊನೆ ಕೊನೆಗೆ ಪವನ್ ಕಲ್ಯಾಣ್ ಕೊಟ್ಟ ನಾಯಿಮರಿಯನ್ನು ರಾಕ್ಸಿ ಎಂದು ಕರೆದ ಅಷ್ಟೆ.. ಪವನ್ ಕಲ್ಯಾಣ್ ನಿಜಕ್ಕೂ ದೇವರು. ಇಷ್ಟು ವರ್ಷಗಳಿಂದ ನಿರಂಜನ್ ನೋವು ಅನುಭವಿಸುತ್ತಿದ್ದ. ಕೊನೆಗೆ ಪವನ್ ಸರ್ ಬಂದು ಆತನ ಆಸೆ ನೆರವೇರಿಸಿದ್ದರು. ಅದೇ ಕೊನೆ ಅನ್ನಿಸುತ್ತದೆ ಎಂದು ನಿರಂಜನ್ ತಂದೆ ಹೇಳಿದ್ದಾರೆ. ಮಗನ ಅಗಲಿಕೆಯ ನೋವಿನಿಂದ ತಾಯಿ ಆಘಾತಕಕ್ಕೊಳಗಾಗಿದ್ದಾರೆ.


Click it and Unblock the Notifications