Andhra Politics: ಪವನ್ ಕಲ್ಯಾಣ್ ಬೆನ್ನಿಗೆ ಚೂರಿ ಹಾಕಿದ್ರಾ ಅಲ್ಲು ಅರ್ಜುನ್?; ಪವರ್ ಸ್ಟಾರ್ ಫ್ಯಾನ್ಸ್ ಗರಂ
ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ರಂಗೇರಿದೆ. ಸಿನಿಮಾ ತಾರೆಯರು ಕಣದಲ್ಲಿ ಇರುವುದರಿಂದ ಸಹಜವಾಗಿಯೇ ಭರಾಟೆ ಜೋರಾಗಿದೆ. ಇದೀಗ ಸ್ಟಾರ್ ನಟರು ವಿವಿಧ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ ಮಾಡಿ ಮತಬೇಟೆ ನಡೆಸಿದ್ದಾರೆ.
ಕೊನೆ ಕ್ಷಣದಲ್ಲಿ ಅಲ್ಲು ಅರ್ಜುನ್ ಹಾಗೂ ರಾಮ್ಚರಣ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದು ಕಳೆಕಟ್ಟುವಂತೆ ಮಾಡಿತ್ತು. ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಈ ಬಾರಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲುಂಡಿತ್ತು. ಪವನ್ ಪರ ಚಿರು ಪುತ್ರ ರಾಮ್ಚರಣ್ ಮತಯಾಚಿಸಿದರು.

ಮೆಗಾ ಫ್ಯಾಮಿಲಿಯ ಅಲ್ಲು ಅರ್ಜುನ್ ಕೂಡ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ಆದರೆ ಮಾವನ ಪರ ಅಲ್ಲ. ಎದುರಾಳಿ ಪಕ್ಷದ ಅಭ್ಯರ್ಥಿ ಪರ ಸ್ಟೈಲಿಶ್ ಸ್ಟಾರ್ ಮತಬೇಟೆ ನಡೆಸಿದ್ದು ವಿಶೇಷ. ಈ ವಿಚಾರ ಈಗ ಟಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಪವನ್ ಅಭಿಮಾನಿಗಳಂತೂ ಅಲ್ಲು ಅರ್ಜುನ್ ವಿರುದ್ಧ ಮುಗಿಬಿದ್ದಿದ್ದಾರೆ. ಆಂಧ್ರ ಚುನಾವಣಾ ಪ್ರಚಾರದ ಕೊನೆಯ ದಿನದಂದು ಅಲ್ಲು ಅರ್ಜುನ್ ತಮ್ಮ ಸ್ನೇಹಿತ ಹಾಗೂ ವೈಸಿಪಿ ಶಾಸಕ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ನಂದ್ಯಾಲ ಕ್ಷೇತ್ರದಲ್ಲಿ ಅಲ್ಲು ಅರ್ಜುನ್ ವೈಸಿಪಿ ಅಭ್ಯರ್ಥಿಯ ಪರ ಮತಯಾಚಿಸಿದರು. ಪಿಠಾಪುರದಲ್ಲಿ ಪವನ್ ಕಲ್ಯಾಣ್ ಪರ ರಾಮ್ಚರಣ್ ಪ್ರಚಾರದಲ್ಲಿ ಭಾಗಿ ಆಗಿದ್ದ ಸಮಯದಲ್ಲೇ ಅಲ್ಲು ಅರ್ಜುನ್ ಅತ್ತ ಎದುರಾಳಿ ಪಕ್ಷದ ಅಭ್ಯರ್ಥಿ ಪರ ನಿಂತಿದ್ದು ಮೆಗಾ ಅಭಿಮಾನಿಗಳಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ. ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತದೆ. ಸದ್ಯ ಈ ಘಟನೆಯಿಂದ ಮತ್ತೆ ಆ ಚರ್ಚೆ ಮುನ್ನಲೆಗೆ ಬಂದಿದೆ.
ಚಿರಂಜೀವಿ ಬಾವ ಅಲ್ಲು ಅರವಿಂದ್ ಪುತ್ರ ಅಲ್ಲು ಅರ್ಜುನ್. ಮೆಗಾಸ್ಟಾರ್ ಪ್ರಭಾವಳಿಯನ್ನು ಬಿಟ್ಟು ಬನ್ನಿ ತನ್ನದೇ ಶ್ರಮದಿಂದ ಸ್ಟಾರ್ ಪಟ್ಟಕ್ಕೇರಿದ್ದಾರೆ. ಎರಡೂ ಫ್ಯಾಮಿಲಿ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಗುಸುಗುಸು ಕೇಳಿಬರುತ್ತಲೇ ಇರುತ್ತದೆ. ಆದರೆ ಈ ಬಗ್ಗೆ ಪ್ರಶ್ನೆ ಎದುರಾದಾಗ ಅದೆಲ್ಲಾ ಸುಳ್ಳು ಎಂದು ಹೇಳುತ್ತಾ ಬರುತ್ತಿದ್ದಾರೆ. ಈ ಹಿಂದೆ ವೇದಿಕೆಯೊಂದರಲ್ಲಿ ಪವನ್ ಕಲ್ಯಾಣ್ ಹೆಸರು ಹೇಳಲು ಅಲ್ಲು ಅರ್ಜುನ್ ಹಿಂದೇಟು ಹಾಕಿದ್ದರು.
ಅಲ್ಲು ಅರ್ಜುನ್ ಎರಡು ದಿನಗಳ ಹಿಂದೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಪವನ್ ಕಲ್ಯಾಣ್ ಅವರ ಚುನಾವಣಾ ಪ್ರಯಾಣ ಯಶಸ್ವಿಯಾಗಲಿ ಎಂದು ಬರೆದುಕೊಂಡಿದ್ದರು. ನಿಮ್ಮ ಆಯ್ಕೆಯ ಮಾರ್ಗ ಮತ್ತು ಸೇವೆಯ ಬದ್ಧತೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕುಟುಂಬದ ಸದಸ್ಯನಾಗಿ ನನ್ನ ಪ್ರೀತಿ ಮತ್ತು ಬೆಂಬಲ ಸದಾ ನಿಮ್ಮೊಂದಿಗಿರುತ್ತದೆ ಟ್ವೀಟ್ ಮಾಡಿದ್ದರು. ಶನಿವಾರ(ಮೇ 11) ವೈಸಿಪಿ ಅಭ್ಯರ್ಥಿ ಪರ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲೇ ಅಲ್ಲು ಅರ್ಜುನ್ ಅದಕ್ಕೂ ಮುನ್ನ ಈ ಟ್ವೀಟ್ ಮಾಡಿದ್ದರು ಎನ್ನುವುದು ಕೆಲವರ ವಾದ.
ತಮ್ಮ ಸ್ನೇಹಿತ ಎನ್ನುವ ಕಾರಣಕ್ಕೆ ವೈಸಿಪಿ ಅಭ್ಯರ್ಥಿಗೆ ಅಲ್ಲು ಅರ್ಜುನ್ ಬೆಂಬಲ ಘೋಷಿಸಿದ್ದಾರೆ. ಹಾಗಂತ ಪವನ್ ಕಲ್ಯಾಣ್ಗೆ ವಿರುದ್ಧ ಹೋಗಿದ್ದಾರೆ ಎನ್ನಲಾಗದು ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಕೆಲವರು ಮಾತ್ರ ಅಲ್ಲು ಅರ್ಜುನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತಿರುಗಿಬಿದ್ದಿದ್ದಾರೆ. "ಸರಿಯಾದ ಸಮಯ ನೋಡಿ ಪವನ್ ಕಲ್ಯಾಣ್ ಬೆನ್ನಿಗೆ ಚೂರಿ ಹಾಕಿಬಿಟ್ಟೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಕಳೆದ ಬಾರಿ ಚುನಾವಣೆ ಸಮಯದಲ್ಲಿ ಕೂಡ ವೈಸಿಪಿ ಶಾಸಕ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿಗೆ ಬೆಂಬಲ ಸೂಚಿಸಿ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದರು. ಈ ಬಾರಿ ನೇರವಾಗಿ ಅವರ ಕ್ಷೇತ್ರಕ್ಕೆ ಹೋಗಿ ಬೆಂಬಲ ಸೂಚಿಸಿದ್ದಾರೆ.


Click it and Unblock the Notifications











