ಆಂಧ್ರ ಪಾಲಿಟಿಕ್ಸ್: ಪವನ್ ಕಲ್ಯಾಣ್ ರಾಜಕೀಯದಲ್ಲಿ ಟ್ವಿಸ್ಟ್
ಆಂಧ್ರ ಪ್ರದೇಶ ವಿಧಾನಸಭೆಯ ಚುನಾವಣೆ ಹೀನಾಯ ಸೋಲಿನ ಬಳಿಕ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಮುಂದಿನ ನಡೆ ಏನಾಗಬಹುದು ಎಂಬುದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದಂತೆ, ಮೆಗಾಸ್ಟಾರ್ ಚಿರಂಜೀವಿ ಮಾಡಿದಂತೆ ಪವನ್ ಕಲ್ಯಾಣ್ ಕೂಡ ರಾಷ್ಟ್ರೀಯ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು.
ನಿರೀಕ್ಷೆಯಂತೆ ಜನಸೇನಾ ಪಕ್ಷವೂ ರಾಷ್ಟ್ರೀಯ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕನ್ನಾ ಲಕ್ಷ್ಮೀ ನಾರಾಯಣ ಹಾಗೂ ಪವನ್ ಕಲ್ಯಾಣ್ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ.

ಜಾತಿ, ಕೌಟುಂಬಿಕ ರಾಜಕಾರಣ, ಭ್ರಷ್ಟಚಾರ ಆಡಳಿತವನ್ನು ಕಿತ್ತು ಹಾಕಲು ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಅಧಿಕಾರಕ್ಕೆ ಬರಲಿದ್ದೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ 175 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪಕ್ಷ ಒಂದೇ ಒಂದು ಕ್ಷೇತ್ರ ಗೆದ್ದಿತ್ತು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪವರ್ ಸ್ಟಾರ್ ಎರಡೂ ಕಡೆಯೂ ಸೋಲು ಕಂಡಿದ್ದರು.
ಈ ಹಿಂದೆ ಪ್ರಜಾರಾಜ್ಯಂ ಪಾರ್ಟಿ ಕಟ್ಟಿದ್ದ ಮೆಗಾಸ್ಟಾರ್ 2009ರ ಚುನಾವಣೆಯಲ್ಲಿ 18 ಕ್ಷೇತ್ರಗಳನ್ನ ಮಾತ್ರ ಗೆದ್ದಿತ್ತು. ನಂತರ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನೊಂದಿಗೆ ಪ್ರಜಾರಾಜ್ಯಂ ಪಕ್ಷವನ್ನು ವಿಲೀನ ಮಾಡಿಕೊಂಡ ಚಿರಂಜೀವಿ, ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದರು.
ಅಂದು ಚಿರಂಜೀವಿ ಮಾಡಿದಂತೆ ಇಂದು ಪವನ್ ಕಲ್ಯಾಣ್ ಕೂಡ ರಾಷ್ಟ್ರೀಯ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಿಂದಿಯ ಪಿಂಕ್ ಸಿನಿಮಾವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಲಿದ್ದಾರೆ ಎಂಬ ಸುದ್ದಿ ಇದೆ.


Click it and Unblock the Notifications











