ವಿಜಯ್ ಸುಲಭವಾಗಿ ಸಿಎಂ ಆಗಿಬಿಟ್ರು, ನನ್ನ 15 ವರ್ಷ ಅಲೆಯುವಂತೆ ಮಾಡಿದ್ರಿ; ಪವನ್ ಕಲ್ಯಾಣ್
ತಮಿಳು ನಟ ವಿಜಯ್ ಸ್ವಂತ ಪಕ್ಷ ಕಟ್ಟಿ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ವಿಜಯ್ ಪೊಲಿಟಿಕಲ್ ಜರ್ನಿ ಬಗ್ಗೆ ಕೆಲವರು ಹೋಲಿಸಿ ಚರ್ಚೆ ಮಾಡುತ್ತಿದ್ದಾರೆ. ಪವನ್ ಅಖಾಡಕ್ಕೆ ಇಳಿದಾಗ ಕೂಡ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸ್ವಾಗತ ಕೋರಿದ್ದರು. ಹೋದ ಕಡೆಯಲ್ಲೆ ಸಾಗರದಂತೆ ಅಭಿಮಾನಿಗಳು ಜಮಾಯಿಸುತ್ತಿದ್ದರು. ಆದರೆ ಚುನಾವಣೆಯಲ್ಲಿ ಗೆಲುವು ಸುಲಭವಾಗಲಿಲ್ಲ. ಇದೇ ವಿಚಾರದ ಬಗ್ಗೆ ಪವನ್ ಮಾತನಾಡಿದ್ದಾರೆ.
ವಿಜಯ್ ಅಷ್ಟು ಸುಲಭವಾಗಿ ಅಧಿಕಾರ ಸ್ವೀಕರಿಸಿದ್ದು ನೋಡಿ ಅಸೂಯೆ ಆಗ್ತಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿಕೆ ವೈರಲ್ ಆಗ್ತಿದೆ. ಜನಸೇನಾ ಪಕ್ಷದ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ರಾಜಮಂಡ್ರಿಯಲ್ಲಿ ನಡೆದ ಸಭೆಯಲ್ಲಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. "ನಾನು ತಮಿಳುನಾಡು ರಾಜಕೀಯ ನೋಡ್ತಿದ್ದೆ. ಅವ್ರು ಎಷ್ಟು ಸುಖವಾಗಿ ಪಾಲಿಟಿಕ್ಸ್ ಮಾಡಿದ್ರು. ನನಗೆ ಅಸೂಯೆ ಆಗುವಷ್ಟು ಸುಲಭವಾಗಿ ಅಧಿಕಾರಕ್ಕೆ ಬಂದ್ರು. ಕಟೌಟ್ ಇಟ್ಕೊಂಡು, ಆಲೊಗ್ರಾಮ್ ಇಟ್ಟುಕೊಂಡು ಗೆದ್ದು ಸಿಎಂ ಆಗಿಬಿಟ್ರು.. ನನ್ನ 15 ವರ್ಷ ರಸ್ತೆಯಲ್ಲಿ ಅಲೆಯುವಂತೆ ಮಾಡಿಬಿಟ್ರು" ಎಂದು ನಕ್ಕಿದ್ದಾರೆ.

ಪವನ್ ಕಲ್ಯಾಣ್ ಸಹೋದರ ಚಿರಂಜೀವಿ ಕೂಡ ಸಿನಿಮಾ ಜನಪ್ರಿಯತೆ ಬಳಸಿಕೊಂಡು ಆಂಧ್ರ ಸಿಎಂ ಆಗುವ ಕನಸು ಕಂಡಿದ್ದರ. ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿ ಚುನಾವಣೆ ಅಖಾಡಕ್ಕೆ ಇಳಿದಿದ್ದರು. ಆದರೆ ಹೀನಾಯವಾಗಿ ಸೋಲುಂಡಿದ್ದರು. ಕೆಲವೇ ವರ್ಷಗಳಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿ ಬಳಿಕ ಚಿತ್ರರಂಗಕ್ಕೆ ಮರಳಿದ್ದರು. ಅಣ್ಣನ ಜೊತೆ ಪ್ರಜಾರಾಜ್ಯಂ ಪಕ್ಷದ ಬೆನ್ನಿಗೆ ನಿಂತಿದ್ದ ಪವನ್ ಬಳಿಕ 2012ರಲ್ಲಿ ಜನಸೇನಾ ಪಕ್ಷ ಸ್ಥಾಪಿಸಿದ್ದರು.
2014ರಲ್ಲಿ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದರು. 5 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ 2019ರಲ್ಲಿ 175 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆಗೆ ಇಳಿದಿತ್ತು. ಪವನ್ ಕಲ್ಯಾಣ್ ಕ್ರೇಜ್ ನೋಡಿ ಮ್ಯಾಜಿಕ್ ನಡೆಯುತ್ತದೆ ಎಂದು ಭಾವಿಸಿದ್ದವರಿಗೆ ನಿರಾಸೆ ಕಾದಿತ್ತು. ಸ್ವತಃ ಪವನ್ ತಮ್ಮದೇ ಕ್ಷೇತ್ರದಲ್ಲಿ ಸೋಲುಂಡಿದ್ದರು. ಹೀನಾಯವಾಗಿ ಸೋತ ಬಳಿಕ ಕುಗ್ಗದೇ 2024ರ ಚುನಾವಣೆಗೆ ತಯಾರಿ ನಡೆಸಿದ್ದರು. ನಡುವೆ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
2024ರ ಚುನಾವಣೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜನಸೇನಾ ಪಕ್ಷ ಗೆದ್ದಿತ್ತು. ಪೀಠಾಪುರಂ ಕ್ಷೇತ್ರದಲ್ಲಿ 70 ಸಾವಿರ ಮತಗಳ ಅಂತರದಿಂದ ಪವನ್ ಕಲ್ಯಾಣ್ ಗೆದ್ದಿದ್ದರು. ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಹೀಗೆ 10ರಿಂದ 15 ವರ್ಷಗಳ ಕಾಲ ಶ್ರಮಿಸಿ ಅಧಿಕಾರಕ್ಕೇರಿದರು. ಇದೇ ವಿಚಾರವನ್ನು ಪ್ರಸ್ತಾಪಿಸಿ ತಮಿಳುನಾಡಿನಲ್ಲಿ ವಿಜಯ್ ಗೆಲುವಿನ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ನಟಿಸದೇ ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಯಲಲಿತಾ ಹಾಗೂ ಕರುಣಾನಿಧಿ ಅಗಲಿಕೆ ಬಳಿಕ ತಮಿಳುನಾಡು ರಾಜಕೀಯರಂಗದಲ್ಲಿ ಮಾಸ್ ಲೀಡರ್ ಯಾರು ಇರಲಿಲ್ಲ. ನಟ ರಜನಿಕಾಂತ್ ರಾಜಕೀಯ ಪ್ರವೇಶದ ಘೋಷಣೆ ಮಾಡಿ ಬಳಿಕ ಆರೋಗ್ಯದ ನೆಪವೊಡ್ಡಿ ಹಿಂದಕ್ಕೆ ಸರಿದಿದ್ದರು. ಮಕ್ಕಳ್ ನೀದಿಮಯ್ಯಂ ಪಕ್ಷ ಸ್ಥಾಪಿಸಿದರೂ ಕಮಲ್ ಹಾಸನ್ ಮ್ಯಾಜಿಕ್ ನಡೆಯಲಿಲ್ಲ. ತಮಿಳುನಾಡಿನಲ್ಲಿ ರಜನಿಕಾಂತ್ ಬಳಿಕ ಹೆಚ್ಚು ಜನಪ್ರಿಯತೆ ಇರುವ ನಟ ವಿಜಯ್. ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳನ್ನು ನೋಡಿ ನೋಡಿ ರೋಸಿ ಹೋಗಿದ್ದ ಮತದಾರರು ಬದಲಾವಣೆ ಬಯಸಿದ್ದರು. ಅಂತಹ ಸಮಯದಲ್ಲಿ ವಿಜಯ್ ಅಖಾಡಕ್ಕೆ ಇಳಿದರು. ಇದು ಯಶಸ್ಸು ತಂದುಕೊಟ್ಟಿದೆ.


Click it and Unblock the Notifications