ರಾಮ್ಚರಣ್ ಹೆಸರಿನ ಅರ್ಥವೇನು? ವರ್ಷದ 100 ದಿನ ಮಾಲಾಧಾರಿಯಾಗಿರುವುದು ಯಾಕೆ?
ತೆಲುಗು ನಟ ರಾಮ್ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿನ್ನೆ(ಜನವರಿ 4) ಅದ್ಧೂರಿಯಾಗಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ವರ್ಷದ ಬಹುನಿರೀಕ್ಷಿತ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಇದೇ ಶುಕ್ರವಾರ(ಜನವರಿ 10) ಸಿನಿಮಾ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಶಂಕರ್ ಭರ್ಜರಿ ಕಂಬ್ಯಾಕ್ ಮಾಡುವ ಸುಳಿವು ಸಿಗುತ್ತಿದೆ. ತಂದೆ-ಮಗನಾಗಿ ದ್ವಿಪಾತ್ರದಲ್ಲಿ ರಾಮ್ಚರಣ್ ಅಬ್ಬರಿಸಿದ್ದಾರೆ.

'ಗೇಮ್ ಚೇಂಜರ್' ಪ್ರೀ ರಿಲೀಸ್ ಈವೆಂಟ್ನಲ್ಲಿ ಸುಮಾರಿ ಮುಕ್ಕಾಲು ಗಂಟೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಮುಖ್ಯವಾಗಿ ಅಣ್ಣನ ಮಗ ರಾಮ್ಚರಣ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಎಷ್ಟೇ ದೊಡ್ಡ ನಟನಾದರೂ ಬಹಳ ವಿನಯ, ವಿಧೇಯತೆಯಿಂದ ಇರುತ್ತಾನೆ ಎಂದಿದ್ದಾರೆ. ಇನ್ನು ಆತನ ಹೆಸರಿನ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ. ಆ ಹೆಸರು ಇಟ್ಟಿದ್ದು ಯಾರು? ಯಾಕೆ ಎಂದು ವಿವರಿಸಿದ್ದಾರೆ.
"ರಾಮ್ಚರಣ್ ಹುಟ್ಟಿದಾಗ ನಾನು ಇಂಟರ್ ಓದುತ್ತಿದ್ದೆ. ಅಣ್ಣನಿಗೆ ಮಗ ಹುಟ್ಟಿದಾನೆ ಎಂದಾಗ ಖುಷಿಯಾಯಿತು. ನಾಮಕರಣ ಮಾಡಿದಾಗ ನಮ್ಮ ತಂದೆ ರಾಮ್ಚರಣ್ ಎಂದು ಹೆಸರು ಸೂಚಿಸಿದ್ದರು. ಹನುಮಂತ ನಮ್ಮ ಮನೆಯ ದೇವರು. ಅದೇ ಹೆಸರು ಬರುವಂತೆ ರಾಮನ ಚರಣಗಳ ಬಳಿ ಇರುವವನು ಹನುಮಂತ. ಹಾಗಾಗಿ ಆ ಹೆಸರನ್ನು ರಾಮ್ಚರಣ್ ಎಂದು ಇಟ್ಟರು" ಎಂದು ಪವನ್ ಕಲ್ಯಾಣ್ ನೆನಪಿಸಿಕೊಂಡಿದ್ದಾರೆ.
ಮಾತು ಮುಂದುವರೆಸಿದ ಪವನ್ ಕಲ್ಯಾಣ್ "ಹನುಮಂತನಿಗೆ ಬಹಳ ಬಲ ಇರುತ್ತದೆ. ಆದರೆ ನಿತ್ಯ ಶ್ರೀರಾಮನ ಚರಣದ ಬಳಿ ಇರುತ್ತಾನೆ. ಅಂದರೆ ಎಷ್ಟೇ ಬಲ ಇದ್ದರೂ ತಮ್ಮ ಬಲ ಗೊತ್ತಿಲ್ಲದೇ, ತಗ್ಗಿ ಬಗ್ಗಿ ಶ್ರೀರಾಮನ ಬಳಿ ವಿನಮ್ರನಾಗಿ ಹನುಮಂತ ಇರುತ್ತಾನೆ. ಹಾಗಾಗಿ ನಮ್ಮ ತಂದೆ ಇವನಿಗೆ ರಾಮ್ಚರಣ್ ಎಂದು ಹೆಸರು ಇಟ್ಟರು" ಎಂದು ತಿಳಿಸಿದ್ದಾರೆ.
ರಾಮ್ಚರಣ್ ನನ್ನ ಅಣ್ಣನ ಮಗನಾದರೂ ನನಗೆ ಸಹೋದರನಂತೆ. ಚಿಕ್ಕಂದಿನಿಂದ ಬಹಳ ಕ್ರಮಶಿಕ್ಷಣದೊಂದಿಗೆ ಬೆಳೆದಿದ್ದಾನೆ. ಇನ್ನು ರಾಮ್ಚರಣ್ ಪದೇ ಪದೆ ಮಾಲೆ ಧರಿಸುತ್ತಾರೆ. ಅಯ್ಯಪ್ಪ ಸ್ವಾಮಿ, ಆಂಜನೇಯ ಸ್ವಾಮಿ ದೀಕ್ಷೆ ಸ್ವೀಕರಿಸುತ್ತಾರೆ. ಮಾಲಾಧಾರಿಯಾಗಿ ಬರಿಗಾಲಿನಲ್ಲಿ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ಕೂಡ ಪವನ್ ಮಾತನಾಡಿದ್ದಾರೆ.

"ಪದೇ ಪದೆ ಯಾಕೆ ಮಾಲೆ ಧರಿಸುತ್ತೀಯಾ ಎಂದು ನಾನು ಕೇಳಿದ್ದೇನೆ. ಚಿತ್ರರಂಗದಲ್ಲಿ ಎಲ್ಲರೂ ನಟರೊಟ್ಟಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ವರ್ಷದ 100 ದಿನ ಮಾಲೆ ಧರಿಸುತ್ತಾನೆ. ಯಾಕೆ ಎಂದು ಕೇಳಿದರೆ ಜವಾಬ್ದಾರಿ ತಪ್ಪಬಾರದು, ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕು, ಅಹಂಕಾರ ಬರಬಾರದು ಎನ್ನುವ ಕಾರಣಕ್ಕೆ ಚರಣ್ ಮಾಲೆ ಧರಿಸುತ್ತಾನೆ" ಎಂದು ಪವರ್ ಸ್ಟಾರ್ ತಿಳಿಸಿದ್ದಾರೆ. ಸದ್ಯ ಪವನ್ ಮಾತುಗಳು ವೈರಲ್ ಆಗುತ್ತಿದೆ.
ಅಂದಹಾಗೆ ದಿಲ್ ರಾಜು ಭಾರೀ ವೆಚ್ಚದಲ್ಲಿ 'ಗೇಮ್ ಚೇಂಜರ್' ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಸುನೀಲ್, ಎಸ್. ಜೆ ಸೂರ್ಯ, ಬ್ರಹ್ಮಾನಂದಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟದ ಕತೆ ಚಿತ್ರದಲ್ಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಬಹಳ ದೊಡ್ಡದಾಗಿ ಈ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











