ರೈತರ ಕಲ್ಯಾಣಕ್ಕೆ 35 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್ ಕುಟುಂಬ: ಚಿರಂಜೀವಿ ಮೌನವೇಕೆ?
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಕುಟುಂಬ ನಟನೆಯಲ್ಲಿ, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವುದರಲ್ಲಿ ಮಾತ್ರವಲ್ಲ ಜನ ಸೇವೆಯಲ್ಲೂ ಸದಾ ಮುಂದು.
ರಾಜಕೀಯಕ್ಕೆ ಬಾರದೆ ಜನ ಸೇವೆ ಮಾಡಬಹುದು ಎಂಬುದನ್ನು ತೆಲುಗು ಸಿನಿಮಾ ನಟರಿಗೆ ತೋರಿಸಿಕೊಟ್ಟವರು ಚಿರಂಜೀವಿ. ಆ ಕಾಲಕ್ಕೆ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ಗಳನ್ನು ಸ್ಥಾಪಿಸಿದ ಚಿರಂಜೀವಿ ಚಿತ್ರೋದ್ಯಮದವರಿಗೆ ಇತರರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ.
ಇದೀಗ ಮೆಗಾಸ್ಟಾರ್ ಕುಟುಂಬದ ಪವನ್ ಕಲ್ಯಾಣ್ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಸಕ್ರಿಯ ರಾಜಕೀಯದಲ್ಲಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಆಗಾಗ್ಗೆ ಪ್ರತಿಭಟನೆಗಳು, ಟೀಕೆಗಳನ್ನು ಮಾಡುತ್ತಲೇ ಬರುತ್ತಿರುವ ಪವನ್ ಕಲ್ಯಾಣ್, ಹಿಡುವಳಿ ರೈತರ ಕಲ್ಯಾಣಕ್ಕಾಗಿ ಭರೋಸಾ ಯಾತ್ರಾ ಅನ್ನು ಹಮ್ಮಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಅವರೇ ಹೇಳಿಕೊಂಡಿದ್ದಂತೆ, ಅವರು ಕುಟುಂಬದವರ ಜೊತೆ ರಾಜಕೀಯ ಚರ್ಚೆ ಮಾಡುವುದಿಲ್ಲವಂತೆ ಆದರೆ ಕುಟುಂಬದವರ ಬೆಂಬಲ ಪವನ್ ಕಲ್ಯಾಣ್ಗೆ ಸದಾ ಇರುತ್ತದೆಯಂತೆ. ಅಂತೆಯೇ ಈಗಲೂ ರೈತರ ಪರವಾಗಿ ಪವನ್ ಕಲ್ಯಾಣ್ ಮಾಡ ಹೊರಟಿರುವ ಕಾರ್ಯಕ್ಕೆ ಪವನ್ ಕಲ್ಯಾಣ್ರ ಕುಟುಂಬದಿಂದ ಬೆಂಬಲ ದೊರಕಿದೆ.

ರೈತರಿಗಾಗಿ 35 ಲಕ್ಷ ರುಪಾಯಿ ಚೆಕ್ ಹಸ್ತಾಂತರ
ಪವನ್ ಕಲ್ಯಾಣ್ರ ಅಣ್ಣ ನಟ, ನಿರ್ಮಾಪಕ ನಾಗಬಾಬು ಹಾಗೂ ಅವರ ಮಕ್ಕಳು, ಪವನ್ ಕಲ್ಯಾಣ್ರ ಸಹೋದರಿ, ಅವರ ಪತಿ ಹಾಗೂ ಅವರ ಮಕ್ಕಳು ಎಲ್ಲರೂ ಸೇರಿ ಜೀವ ಕಳೆದುಕೊಂಡ ಹಿಡುವಳಿ ರೈತರ ಕುಟುಂಬದ ಕಲ್ಯಾಣಕ್ಕಾಗಿ ಒಟ್ಟು 35 ಲಕ್ಷ ರುಪಾಯಿಯನ್ನು ದೇಣಿಗೆ ನೀಡಿದ್ದಾರೆ.

ಚೆಕ್ ಹಸ್ತಾಂತರಿಸಿರುವ ಕುಟುಂಬ ಸದಸ್ಯರು
ನಾಗಬಾಬು ಹಾಗೂ ಅವರ ಪತ್ನಿ, ಹಾಗೂ ಪವನ್ರ ಸಹೋದರಿಯರಾದ ಮಾಧವಿ ರಾವ್ ಹಾಗೂ ವಿಜಯ ದುರ್ಗಾ ಕುಟುಂಬದವರು ಒಟ್ಟಿಗೆ 35 ಲಕ್ಷ ಹಣವನ್ನು ಜನಸೇನಾ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಚೆಕ್ ಅನ್ನು ಜನಸೇನಾ ಪಕ್ಷದ ನಂದೇಲಾ ಮನೋಹರ್ಗೆ ಹಸ್ತಾಂತರಿಸಲಾಗಿದ್ದು, ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಸಹ ಉಪಸ್ಥಿತರಿದ್ದರು.

ಕುಟುಂಬದ ಬೆಂಬಲ ಸದಾ ಇರುತ್ತದೆ: ಪವನ್ ಕಲ್ಯಾಣ್
ವರುಣ್ ತೇಜ್, ಸಾಯಿ ಧರಮ್ ತೇಜ್, ವೈಷ್ಣವ್ ತೇಜ್, ನಿಹಾರಿಕಾ ಕೋನಿಡೇಲ, ಪವನ್ರ ಸಹೋದರಿ ವಿಜಯದುರ್ಗ, ಅವರ ಮಕ್ಕಳಾದ ಸಾಯಿ ಧರಮ್ ತೇಜ್, ನಾಗಬಾಬು, ಪದ್ಮಜಾ, ಮಾಧವಿ, ಪಿಎಸ್ ರಾಜು, ಶ್ರೀನಾಥ್ ಇವರುಗಳೆಲ್ಲ ಸೇರಿ ಈ ಹಣ ಸೇರಿಸಿ ಕೊಟ್ಟಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ನನ್ನ ಎಲ್ಲ ಒಳ್ಳೆಯ ಕಾರ್ಯಗಳಿಗೆ ನನ್ನ ಕುಟುಂಬದವರ ಬೆಂಬಲ ಸದಾ ಇರುತ್ತದೆ ಎಂದಿದ್ದಾರೆ ಪವನ್ ಕಲ್ಯಾಣ್.

ಚಿರಂಜೀವಿ ಸಹಾಯ ಮಾಡಿಲ್ಲ ಏಕೆ?
ಆದರೆ ಪವನ್ ಕಲ್ಯಾಣ್ರ ಈ ಒಳ್ಳೆಯ ಕಾರ್ಯಕ್ಕೆ ಚಿರಂಜೀವಿ ಯಾವುದೇ ಸಹಾಯ ಮಾಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ಚಿರಂಜೀವಿ ಸಮಾಜ ಸೇವೆಯಲ್ಲಿ ಸದಾ ಮುಂದು. ಅವರ ಪುತ್ರ ರಾಮ್ ಚರಣ್ ತೇಜ ಸಹ. ಚಿರಂಜೀವಿ ಸಹಾಯ ಮಾಡಿದರೆ ಏನಾದರೂ ದೊಡ್ಡದಾಗಿಯೇ ಮಾಡುತ್ತಾರೆ ಎಂಬ ವಿಶ್ವಾಸ ಮೆಗಾಸ್ಟಾರ್ ಕುಟುಂಬದ ಅಭಿಮಾನಿಗಳದ್ದು. ಚಿರಂಜೀವಿ, ಆಂಧ್ರ ಸಿಎಂ ರಾಜಶೇಖರ ರೆಡ್ಡಿ ಜೊತೆಗೆ ಆತ್ಮೀಯವಾಗಿರುವ ಕಾರಣದಿಂದ ಸರ್ಕಾರದ ವಿರುದ್ಧ ಮಾಡಲಾಗುತ್ತಿರುವ ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿಲ್ಲವೆಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.


Click it and Unblock the Notifications











